Read - < 1 minute
ನವದೆಹಲಿ/ಬೆಂಗಳೂರು, ಸೆ.1: 2016ರಲ್ಲಿ ಈಗಾಗಲೇ ಹಲವಾರು ಮುಷ್ಕರಗಳನ್ನು ಕಂಡಿರುವ ದೇಶದಲ್ಲಿ ನಾಳೆ ಮತ್ತೊಂದು ಮುಷ್ಕರ ನಡೆಯಲಿದ್ದು, ಸಾರಿಗೆ ಸಂಚಾರ ಹಾಗೂ ಜನ ಜೀವನ ಅಸ್ತವ್ಯಸ್ತಗೊಳ್ಳುವುದು ಬಹುತೇಶ ನಿಶ್ಚಿತ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಾಳೆ ದೇಶದಾದ್ಯಂತ ಬಂದ್ಗೆ ಕರೆ ನೀಡಿವೆ. ಭಾರತ್ ಬಂದ್’ಗೆ ರಾಜ್ಯದ ಬಹುತೇಕ ಎಲ್ಲ ಕಾರ್ಮಿಕ, ಕೆಲವು ವಿದ್ಯಾರ್ಥಿ, ಜನಪರ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ.
ನಾಳೆ ರಾಜ್ಯದಲ್ಲಿ ಸರ್ಕಾರಿ ಬಸ್ ಸಂಚಾರ, ಖಾಸಗಿ ವಾಹನಗಳ ಓಡಾಟ ಇರುವುದಿಲ್ಲ. ವರ್ತಕರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿದ್ದರಿಂದ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ. ಸಂಚಾರ ವ್ಯವಸ್ಥೆ ಸ್ಥಗಿತಗೊಳ್ಳಲಿರುವುದರಿಂದ ಸರ್ಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪನಿಗಳ ನೌಕರರಿಗೂ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.
ಯಾರೆಲ್ಲಾ ಬೆಂಬಲ ಸೂಚಿಸಿದ್ದಾರೆ?
ನಾಳಿನ ಬಂದ್ಗೆ ರಾಜ್ಯದ ಎಲ್ಲ ಕಾರ್ಮಿಕ ಸಂಘಟನೆಗಳು, ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ, ಬ್ಯಾಂಕ್ ನೌಕರರ ಸಂಘಟನೆಗಳು, ವಿಮಾ ಕಂಪನಿಗಳ ನೌಕರರ ಸಂಘಟನೆಗಳು, ಲಾರಿ ಮಾಲಿಕರ ಸಂಘ, ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಕೆಲವು ವಿದ್ಯಾರ್ಥಿ ಸಂಘಟನೆಗಳು, ಹಲವು ಜನಪರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ.
ನಾಳೆ ಯಾವ ಸೇವೆ ಲಭ್ಯ ಇರುತ್ತದೆ?
ಹಾಲು, ಮೆಡಿಕಲ್ ಶಾಪ್, ಆಸ್ಪತ್ರೆ ಸೇವೆ ಲಭ್ಯ, ಖಾಸಗಿ ಬಸ್, ಟ್ಯಾಕ್ಸಿ, ಕ್ಯಾಬ್ ಲಭ್ಯ, ಎಟಿಎಂ ಸೌಲಭ್ಯ, ಆ್ಯಂಬುಲೆನ್ಸ್ ಸಂಚಾರ, ಅಂಗಡಿ ಮುಂಗಟ್ಟು, ಹೋಟೆಲ್ಗಳು ಓಪನ್, ಚಿತ್ರಮಂದಿರ.
ನಾಳೆ ಯಾವ ಸೇವೆ ಲಭ್ಯ ಇರುವುದಿಲ್ಲ?
ಬಿಎಂಟಿಸಿ, ಕೆಎಸ್ಆರ್ಟಿಸಿಬಸ್ ಬಸ್ ಸಂಚಾರ, ರೈಲು, ಮೆಟ್ರೋ, ಬ್ಯಾಂಕ್, ವಿಮೆ, ಅಂಚೆ ಕಚೇರಿ, ಖಾಸಗಿ ಶಾಲೆ, ಅಂಗನವಾಡಿ, ಆಟೋ ಸಂಚಾರ, ಪೆಟ್ರೋಲ್ ಬಂದ್, ಅಡುಗೆ ಅನಿಲದಲ್ಲಿ ವ್ಯತ್ಯಯವಾಗುತ್ತದೆ.
ಬಂದ್ಗೆ ಶಾಲಾ ಕ್ಯಾಬ್ ಅಸೋಸಿಯೇಶನ್ ಕೂಡ ಬೆಂಬಲ ಸೂಚಿಸಿದ್ದು, ವಾಹನ ಓಡಿಸದಿರಲು ನಿರ್ಧರಿಸಿದೆ.
ಸ್ಕ್ಯಾನಿಂಗ್ ಹಾಗೂ ಎಕ್ಸರೇ ಇರುವುದಿಲ್ಲ:
ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಕಾಯ್ದೆಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ರೇಡಿಯಾಲಜಿಸ್ಟ್ಗಳ ನಾಳಿನ ಬಂದ್ಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ನಾಳೆ ಸ್ಕ್ಯಾನಿಂಗ್ ಹಾಗೂ ಎಕ್ಸರೇ ಸೌಲಭ್ಯದಲ್ಲಿ ವ್ಯತ್ಯಯ ಉಂಟಾಗುವುದು ಬಹುತೇಕ ನಿಶ್ಚಿತ.
ರಾಜ್ಯದ ವಿವಿಧ ಆಸ್ಪತ್ರೆ ಹಾಗೂ ಡಯಾಗ್ನೋಸ್ಟಿಕ್ಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನಿಂಗ್, ಎಕ್ಸ್ರೇ ಸೇರಿದಂತೆ ಅಗತ್ಯ ಸೇವೆಗಳಲ್ಲಿವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
Discussion about this post