ಬೆಂಗಳೂರು: ಸೆ:25: ಕಳೆದ ಬಾರಿ ಬಂಪರ್ ಬೆಳೆಯಿಂದಾಗಿ ರೈತರಿಗೆ ಯಥೇಚ್ಛ ಲಾಭ ತಂದುಕೊಟ್ಟಿದ್ದ ಈರುಳ್ಳಿ ಈ ಬಾರಿ ಕಣ್ಣೀರು ತರಿಸಿದೆ. ಈ ಬಾರಿ ಈರುಳ್ಳಿ ಧಾರಣೆ ಕೆ.ಜಿಗೆ 2 ರಿಂದ 3 ರೂಪಾಯಿಗೆ ಕುಸಿತ ಕಂಡಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಸಾಲ-ಸೋಲ ಮಾಡಿ ಈರುಳ್ಳಿ ಬೆಳೆದ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.
ಬಿರು ಬಿಸಿಲಲ್ಲಿ ಈರುಳ್ಳಿ ಕೀಳ್ತಿರೋ ಈ ರೈತರ ಮನದಲ್ಲಿ ಈಗ ಮಂದಹಾಸ ಇಲ್ಲ. ಏಕೆಂದರೆ, ಕಳೆದ ಬಾರಿಯ ಬಂಪರ್ ಬೆಳೆ ಕಂಡು ಈ ಬಾರಿ ಕಾಫಿನಾಡು ಚಿಕ್ಕಮಗಳೂರಿನ ರೈತರು ಯಥೇಚ್ಛವಾಗಿ ಈರುಳ್ಳಿ ಬೆಳೆದಿದ್ದಾರೆ. ಆದರೆ, ಈ ವರ್ಷ ವರುಣನ ಕಣ್ಣಾಮುಚ್ಚಾಲೆ ಆಟದಿಂದ ಈರುಳ್ಳಿ ಸಂಪೂರ್ಣ ಸುಟ್ಟುಹೋಗಿತ್ತು. ಆದರೂ ಕೊನೆಗೆ ಅಲ್ಪಸ್ವಲ್ಪ ಬೆಳೆ ರೈತರ ಕೈ ಸೇರಿದೆ. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕಳೆದ ವರ್ಷ ಕೆ.ಜಿ. ಈರುಳ್ಳಿ ಗೆ 35-40 ರೂ.ಇತ್ತು. ಆದರೆ, ಈ ಬಾರಿ ಅನ್ನದಾತರಿಗೆ ಭಾರೀ ಹೊಡೆತ ನೀಡಿದ್ದು, ಈರುಳ್ಳಿ ಬೆಲೆ ದಿಢೀರ್ ಅಂತ 2 ರಿಂದ 4 ರೂ.ಗೆ ಕುಸಿದಿದೆ.
ಅತ್ತ ಬಾಗಲಕೋಟೆ ಜಿಲ್ಲೆಯ ರೈತರದ್ದೂ ಕೂಡ ಇದೇ ಪರಿಸ್ಥಿತಿ. ಜಿಲ್ಲೆಯ ಹುನಗುಂದ, ಬಾದಾಮಿ, ಬೀಳಗಿ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆ ಬೆಳೆಯಲಾಗಿದೆ. ಈರುಳ್ಳಿ ಬೆಳೆಯೇನೋ ಚೆನ್ನಾಗಿ ಬಂದಿದೆ. ಆದರೆ, ಅದಕ್ಕೆ ಸಿಕ್ಕಿರೋ ಬೆಂಬಲ ಬೆಲೆ ನೋಡಿದ ರೈತರು ಕಣ್ಣೀರು ಹಾಕುತ್ತಿದ್ದಾರೆ.
ಒಟ್ಟಾರೆ ಬೆಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ ಎಂಬಂತಾಗಿದೆ ಈರುಳ್ಳಿ ಬೆಳೆದ ರೈತರ ಸ್ಥಿತಿ. ಜನಪ್ರತಿನಿಧಿಗಳು ಈರುಳ್ಳಿ ಬೆಳೆದಿರುವ ರೈತರ ಗೋಳನ್ನು ಕೇಳಿ ಸಕರ್ಾರದ ಗಮನಕ್ಕೆ ತಂದು ಬೆಂಬಲ ಬೆಲೆ ಸಿಗುವಂತೆ ಮಾಡಿ ರೈತರ ಕಣ್ಣೀರು ಒರೆಸಬೇಕಿದೆ.
Discussion about this post