ಭಾರತದ ಇತಿಹಾಸ ಭಾರತದ ಸಂಸ್ಕೃತಿ ಯಷ್ಟೇ ವೈವಿಧ್ಯ ಪೂರ್ಣ ವಾದುದು. ಭಾರತ ಕಂಡಂತಹ ೨೦೦೦ವರುಷಗಳ ಸುದೀರ್ಘ ಸ್ವಾತಂತ್ರ್ಯ ಸಮರದ ಚರಿತ್ರೆ, ಅದು ಬರಿಯ ರಕ್ತ ಸಿಕ್ತ ಹೋರಾಟದ ಕಥೆಗಳಲಲ್ಲ. ಆದರ್ಶ ಜೀವನಗಾಥೆಗಳಿಂದ ತುಂಬಿದ ಪರಿಪೂರ್ಣ ವ್ಯಕ್ತಿ ಗಳ ಜೀವನ ಚಿತ್ರಣ ಎನ್ನಬಹುದು.ಸುಮಾರು ೧೮ಅಡಿಗಳಿಗಿಂತಲೂ ಎತ್ತರದ ಕೋಟೆಗಳನ್ನು ಜಿಗಿದು, ಎರಡೆರಡು ಕೈಗಳಲ್ಲಿ ಮಿಂಚಿನಂತೆ ಖಡ್ಗವನ್ನು ಝಳಪಿಸುತ್ತಾ, ಪುತ್ರನನ್ನು ಬೆನ್ನಿಗೇ ಕಟ್ಟಿಕೊಂಡು, ರಣಾಂಗಣದಲ್ಲಿ ಸಾಕ್ಷಾತ್ ರಣಚಂಡಿಯಂತೆ ಕಾದಾಡಿದ ವೀರ ಯೋಧೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಎನ್ನುವಾಕೆ ಭಾರತ ಮಾತೆಯ ಮಡಿಲಿನಲ್ಲಿ “ನಭೂತೋ ನಭವಿಷ್ಯತಿ” ಎನ್ನುವಂತೆ ಜನಿಸಿದಳು. ವೀರ ಸಾವರ್ಕರ್ ರರು ಈಕೆಯನ್ನು “ಭಾರತದ ಸ್ವಾತಂತ್ರ್ಯ ದೇವತೆ ” ಅಂತ ಕರೆದದ್ದು ಅತಿಶಯೋಕ್ತಿಯೇನಲ್ಲ. ಬುಂದೇಲಖಂಡ ದ ಒಂದು ಪುಟ್ಟ ರಾಜ್ಯ ಕ್ಕೆ ರಾಣಿಯಾಗಿದ್ದ ಈಕೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನ ದ ಪಾಠವನ್ನು ಬೇರೆಲ್ಲರಿಗಿಂತ ಬಲು ಉತ್ತಮ ವಾಗಿ, ಅಹಂಕಾರಿ ಬ್ರಿಟಿಷರಿಗೆ ಕಲಿಸಿದ್ದ ಧೀರೆ.
ಅಂತಹ ಸುಪುತ್ರಿಗೆ ಜನ್ಮವಿತ್ತು ಭಾರತ ಮಾತೆ ಧನ್ಯತೆಯನ್ನು ತಾಳಿದರೆ, ಈ ವೀರನಾರಿಯನ್ನು ನೆನೆಯಲಾಗದ, ನೆನಪಿಟ್ಟುಕೊಳ್ಳಲಾಗದ ದೌರ್ಭಾಗ್ಯವಂತರು ನಾವು. ೧೮೩೫ರಲ್ಲಿ ಜನಿಸಿದ ಈ ಸ್ತ್ರೀರತ್ನ ತನ್ನ ೨೩ವರುಷಗಳ ತುಂಬು ಯವ್ವನದಲ್ಲೇ ಸ್ವಾತಂತ್ರ್ಯ ಯಜ್ಞಕ್ಕೆ ತನ್ನ ಪ್ರಾಣದ ಹವಿಸ್ಸನ್ನರ್ಪಿಸಿ ಇಂದಿಗೆ ೧೫೮ ವರುಷಗಳು ಸಂದಿವೆ.ಆದರೆ ಆಕೆ ಯಾವ ಮಣ್ಣಿನ ಸ್ವಾತಂತ್ರ್ಯ ಕ್ಕಾಗಿ ಬಲಿದಾನವಿತ್ತಳೋ ಆ ಮಣ್ಣಿನ ಮಕ್ಕಳಿಗೆ ಆಕೆಯನ್ನೂ ನೆನಪಿಸಿಕೊಳ್ಳಲೂ ಸಮಯವಿಲ್ಲ.
ಜಡಗಟ್ಟಿರುವ ಇಂದಿನ ಯುವಜನತೆಯ ಮನಸ್ಸಿನಲ್ಲಿ ದೇಶಭಕ್ತಿಯ ಬೀಜ ಮೊಳಕೆ ಒಡೆಯಬೇಕಾದರೆ ಅವರಿಗೆ ಇಂತಹ ಧೀಮಂತರ ನೆನಪು ಮಾಡಿಕೊಡಬೇಕಾದ ಅಗತ್ಯವಿದೆ.ಇಂದು ನಮ್ಮ ದೇಶದಲ್ಲಿ ದೇಶಭಕ್ತಿ ಯ ಭಾವಗಳಿಂದ ವಿಮುಖವಾಗುತ್ತಿರುವ ಯುವ ಹೃದಯ ಗಳಿಗೆ ಸತ್ಯದರ್ಶನ ಮಾಡಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಹೆಚ್ಚಿದೆ. ಅದರಲ್ಲಿಯೂ ಭವಿಷ್ಯದ ಜನಾಂಗವನ್ನು ಕಟ್ಟಬೇಕಾದ ಯುವತಿಯರು ಇದೆಲ್ಲವನ್ನೂ ಅರಿಯಬೇಕಾಗಿದೆ.
ನಮ್ಮೆಲ್ಲರಿಗೂ ಪರಿಚಿತವಿರುವ ರಾಣಿ ವೀರೆ, ದೇಶಭಕ್ತೆ, ಚತುರೆ…ಹೀಗೆ., ಇವೆಲ್ಲಕ್ಕೂ ಆಚೆಗೆ ಆಕೆಯ ಬದುಕಿನಲ್ಲಿ ಇದ್ದಂತಹ ಆದರ್ಶಗಳು ಕಾಲಗರ್ಭದಲ್ಲಿ ಅಡಗಿವೆ.ಈಸ್ಟ್ ಇಂಡಿಯಾ ಕಂಪನಿ ಹಾಗೂ ಬ್ರಿಟಿಶ್ ರಾಣಿಯ ವಿರುದ್ಧ ವೇ ಸೆಟೆದು ನಿಂತರೂ, ಅವರಿಂದಲೇ ಭೇಷ್ ಅನ್ನಿಸಿಕೊಂಡಿದ್ದ ಈಕೆ ಹುಟ್ಟಿದ್ದು ಯಾವುದೇ ರಾಜಮನೆತನದಲ್ಲಿ ಅಲ್ಲ. ಬದಲಾಗಿ ರಾಜಪರಿವಾರದ ಸೇವೆಯಲ್ಲಿದ್ದ ಓರ್ವ ಸಾಮಾನ್ಯ ಸೇವಕನ ಮನೆಯಲ್ಲಿ. ಮೋರೋಪಂತ ತಾಂಬೆ ಮತ್ತು ಭಾಗೀರಥಿ ದಂಪತಿಗಳಿಗೆ ಹುಟ್ಟಿದ ಹೆಣ್ಣುಮಗುವಿಗೆ ಗಂಗಾಮಾತೆಯ ಆಶೀರ್ವಾದವಿರಲಿ ಎಂಬ ಆಶಯದಿಂದ ಮಣಿಕರ್ಣಿಕಾ ಎಂದು ನಾಮಕರಣ ಮಾಡಿದರು. ಪುಟ್ಟ ಮಗುವಿನ ಚುರುಕುತನ, ಬುಧ್ಧಿಮತ್ತೆ, ಮುದ್ದಾದ ಮಾತುಗಳಿಂದ ಎಲ್ಲರ ಮನಗೆದ್ದಿದ್ದ ಈಕೆ ಸ್ಥಳೀಯರಿಂದ ” ಛಬೇಲಿ” ಅಂತಲೇ ಕರೆಸಿಕೊಳ್ಳುತ್ತಿದ್ದಳು. ಅನಿವಾರ್ಯ ಕಾರಣಗಳಿಂದ ಕಾಶಿಯನ್ನು ತೊರೆದ ಈ ಕುಟುಂಬ ಮುಂದೆ ಬಾಜೀರಾವ್ನ ಸಂಸ್ಥಾನದಲ್ಲಿ ಆಶ್ರಯ ಪಡೆಯಿತು.
ಬಾಜೀರಾವ್ ನ ದತ್ತು ಪುತ್ರ, ವಯಸ್ಸಿನಲ್ಲಿ ತನಗಿಂತ ಎರಡು ಪಟ್ಟು ದೊಡ್ಡವನಾದ ನಾನಾಸಾಹೇಬನ ಒಡನಾಟ ದಲ್ಲಿ ಬೆಳೆದ ಛಬೇಲಿ ಆತನೊಂದಿಗೆ ಎಲ್ಲ ಶಸ್ತ್ರ ಮತ್ತು ಶಾಸ್ತ್ರ ವಿದ್ಯೆಗಳನ್ನು ಪಡೆದುಕೊಂಡಳು. ಈ ಪುಟ್ಟ ವಯಸ್ಸಿನಲ್ಲಿ ಯೇ ತಾಯಿಯನ್ನು ಕಳೆದುಕೊಂಡ ಪರಿಣಾಮ, ರಾಜಾಂಗಣದಲ್ಲೇ ಈಕೆ ಹೆಚ್ಚು ಕಾಲ ಕಳೆಯುತ್ತಿದ್ದಳು.ಇದರಿಂದಾಗಿ ಬಾಲ್ಯದಲ್ಲೇ ಆಡಳಿತ, ರಾಜಕೀಯ ವಿಷಯಗಳ ಬಗ್ಗೆ ತಿಳಿದುಕೊಂಡಳು. ಈ ನಡುವೆ ತನ್ನ ೭ನೇವಯಸ್ಸಿಗೇ, ಮಧ್ಯವಯಸ್ಸು ದಾಟಿದ್ದ ಝಾನ್ಸಿ ಯ ರಾಜ ಗಂಗಾಧರ ರಾವ್ ನೊಂದಿಗೆ ಈಕೆಯ ಮದುವೆಯಾಯಿತು. ಇಲ್ಲಿಂದ ಮಣಿಕರ್ಣಿಕಾಳ ಹೆಸರು ಲಕ್ಷ್ಮೀ ಬಾಯಿ ಯಾಗಿ ಬದಲಾಗುವ ಇದರೊಂದಿಗೆ, ಈಕೆಯ ಬದುಕಿನ ದಿಕ್ಕೂ ಬದಲಾಯಿತು.
ಲಕ್ಷ್ಮೀ ಬಾಯಿ ರಾಣಿಯಾಗಿದ್ದರೂ ಒಂದು ದಿನವೂ ಸುಖ ಸಂಪತ್ತು ಗಳಲ್ಲಿ ಮೈ ಮರೆಯಲಿಲ್ಲ. ಬದಲಾಗಿ ಝಾನ್ಸಿ ಯಲ್ಲಿ ಹಲವಾರು ಧನಾತ್ಮಕ ಬದಲಾವಣೆ ಗಳಿಗೆ ಕಾರಣಳಾದಳು.ಇತ್ತ ಪತಿ ಗಂಗಾಧರ ತಾನೇ ಅಶಿಸ್ತಿನ ಜೀವನ ನಡೆಸುತ್ತಿದ್ದರೂ ಪ್ರಜೆಗಳ ತಪ್ಪಿಗೆ ಮಾತ್ರ ಕ್ರೂರ ಶಿಕ್ಷೆ ನೀಡುತ್ತಿದ್ದ. ಈ ಪರಿಪಾಠ ವನ್ನು ಬದಲಿಸಿದ ರಾಣಿ ರಾಜ್ಯದಲ್ಲಿ ಗಲ್ಲುಶಿಕ್ಷೆ ನಿಷೇಧಿಸುವಲ್ಲಿ ಯಶಸ್ವಿ ಯಾದಳು.ಪ್ರತಿ ಸಂಕ್ರಮಣ ಹಾಗೂ ಚೈತ್ರ ಗೌರಿ ದಿನಗಳಲ್ಲಿ ಊರಿನ ಮಹಿಳೆಯರಿಗೆ ಅರಶನ ಕುಂಕುಮ ನೀಡುವ ಹೊಸ ಸಂಪ್ರದಾಯ ಆರಂಭಿಸಿದಳು. ಈ ಆಚರಣೆಯಲ್ಲಿ ಜಾತಿ ವರ್ಗ ಗಳ ಭೇದವನ್ನು ಮರೆತು ಎಲ್ಲರನ್ನೂ ಸಮಾನವಾಗಿ ಕಂಡಳು. ಈ ಮೂಲಕ ಭಾರತದ ಧಾರ್ಮಿಕ ಚಿಂತನೆಗಳಿಗೊಂದು ಹೊಸ ರೂಪ ಕೊಟ್ಟಳು. ತಾನು ಅಷ್ಟಾಗಿ ಕಲಾಪ್ರೇಮಿ ಅಲ್ಲದೇ ಇದ್ದರೂ ಕಲಾವಿದ ರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಊರ- ಪರವೂರ ನಾಟಕ ತಂಡಗಳನ್ನು ಕರೆಸಿ , ಪ್ರದರ್ಶನ ವನ್ನು ಏರ್ಪಡಿಸಿ ತಾನೂ ಅದನ್ನು ವೀಕ್ಷಿಸುತ್ತಿದ್ದಳು. ಮತ್ತು ಎಲ್ಲರಿಗೂ ಸೂಕ್ತ ಬಹುಮಾನ ನೀಡಿ ಗೌರವಿಸುತ್ತಿದ್ದಳು. ಹೀಗಾಗಿ ಸುತ್ತಲಿನ ಊರುಗಳ ಕಲಾವಿದರು ತಾವು ಒಮ್ಮೆ ಯಾದರೂ ಝಾನ್ಸಿ ಯಲ್ಲಿ ಪ್ರದರ್ಶನ ನೀಡಬೇಕೆಂದು ಹಂಬಲಿಸುತ್ತಿದ್ದರು. ಹೀಗೆ ರಾಣಿ ಕೇವಲ ರಾಣಿಯಾಗುಳಿಯದೆ ಪ್ರಜೆಗಳ ಹೃದಯ ಸಾಮ್ರಾಜ್ಛಯಾಗಿದ್ದಳು.
ಇವುಗಳೆಲ್ಲದರ ನಡುವೆಯೂ ಲಕ್ಷ್ಮೀ ಬಾಯಿ ತುಂಬಾ ಶಿಸ್ತಿನ ಜೀವನ ನಡೆಸುತ್ತಿದ್ದಳು. ಡಿ.ಬಿ. ಪರಾಸೆನಿಸ್ ಎಂಬ ಓರ್ವ ಯೂರೋಪಿನ ಇತಿಹಾಸಕಾರ ಹೇಳುವಂತೆ ಬೆಳಗ್ಗಿನ ೭ ಗಂಟೆ ಗೇ ಏಳುತ್ತಿದ್ದ ರಾಣಿ, ಶುಭ್ರ ಛಂದೇರಿ ಸೀರೆಯನ್ನುಟ್ಟು ಪೂಜೆಗೆ ಕುಳಿತುಕೊಳ್ಳುತ್ತಿದ್ದಳು. ತನ್ನ ಪೂಜೆಯ ಬಳಿಕ ಸಂಗೀತ ಸೇವೆ ಮತ್ತು ಪುರಾಣ ಪ್ರ ವಚನಗಳು ನಡೆಯುತ್ತಿದ್ದವು. ಇವುಗಳ ಬಳಿಕ ಕಠಿಣ ಶಸ್ತ್ರಾಭ್ಯಾಸ ನಡೆಸುತ್ತಿದ್ದಳು. ಏನೇ ಆದರೂ ಈ ಅಭ್ಯಾಸವನ್ನು ಮಾತ್ರ ತಪ್ಪಿಸಿಕೊಳ್ಳುತ್ತಿರಲಿಲ್ಲ. ಮತ್ತೆ ರಾಜ ದರ್ಬಾರ್. ತನ್ನ ಪತಿ ದರ್ಬಾರ್ ನಡೆಸುತ್ತಿದ್ದ ಸಂದರ್ಭಗಳಲ್ಲಿ ದೂರದಲ್ಲಿ ನಿಂತು ವಿಚಾರ ವಿನಿಮಯ ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತದ್ದಳು. ಪತಿಯ ಮರಣಾನಂತರ ಇದರ ಅನುಭವ ಮತ್ತು ತನ್ನ ತೀಕ್ಷ್ಣ ಬುಧ್ದಿಶಕ್ತಿಯಿಂದ ಜನರ ಸಮಸ್ಯೆಗಳನ್ನು ಪರಿಹರಿಸಿ ಕೊಡುತ್ತಿದ್ದಳು. ನಿತ್ಯ ಸುಮಾರು ೭೫೦ಜನ ಈಕೆಗೆ ಮುಜುರೆ ಒಪ್ಪಿಸಲು ಬರುತ್ತಿದ್ದರು. ಅವರಲ್ಲಿ ಯಾರೊಬ್ಬರು ಒಂದು ದಿನ ತಪ್ಪಿಸಿಕೊಂಡರೂ ನೆನಪಿಟ್ಟು ಮರುದಿನ ಅವರನ್ನು ಪ್ರಶ್ನಿಸುತ್ತಿದ್ದಳು. ತಾನು ದರ್ಬಾರ್ ಗೆ ಬರುವಾಗ ಪೈ ಜಾಮಾ, ತಲೆಗೆ ಸುಂದರ ಅಲಂಕೃತ ಪೇಟ, ಕತ್ತಿನಲ್ಲಿ ಚಿಕ್ಕ ಮುತ್ತಿನ ಹಾರ ಹಾಗೂ ಸೊಂಟದಲ್ಲಿ ಖಡ್ಗ ಹೀಗೆ ಸಂಪೂರ್ಣ ಗಂಡುಡುಗೆಯಲ್ಲಿ ರಾಜಸಭೆ ಪ್ರವೇಶಿಸುವಾಗ ಎಲ್ಲರೂ ರೋಮಾಂಚಿತರಾಗುತ್ತಿದ್ದರು.ತನ್ನ ಭವ್ಯ ಠೀವಿ, ಗಂಭೀರ ಮಾತುಗಳಿಗಷ್ಟೇ ಅಲ್ಲದೆ ತನ್ನ ಪ್ರೌಢ ರಾಜಕೀಯ ನಿಲುವುಗಳಿಂದ ಎಲ್ಲ ವರ್ಗದ ಜನರ ಭರವಸೆಯ ಬೆಳಕಾಗಿದ್ದಳು.
ಇಂತಹ ರಾಣಿಯ ಬದುಕು ನಮ್ಮ ಕಲ್ಪನೆಯಷ್ಟು ಸಿಹಿಯೂ ಸುಲಲಿತವೂ ಆಗಿರಲಿಲ್ಲ. ಆಗಿನ ೧೮ನೇ ಶತಮಾನದ ಭಾರತೀಯ ಹೆಣ್ಣು ಮಕ್ಕಳೆಲ್ಲರೂ ಎದುರಿಸಿದ ಎಲ್ಲಾ ಸಂದಿಗ್ಧಗಳು, ನೋವುಗಳು, ಹತಾಶೆ, ಸಾಲು ಸಾಲು ನಿರಾಶೆಗಳು ಝಾನ್ಸಿ ಯ ರಾಣಿಯನ್ನೂ ಬಿಡಲಿಲ್ಲ. ಪುಟ್ಟ ಬಾಲಕಿ ಮಣಿಕರ್ಣಿಕಾ ವಧುವಾಗಿ ಝಾನ್ಸಿ ಯನ್ನು ಸೇರಿದ ಮೇಲೆ ತನ್ನ ೧೬ನೇ ವಯಸ್ಸಿನಲ್ಲೇ ತಾಯಿಯಾದಳು.ಮುದ್ದಾದ ಗಂಡುಮಗುವನ್ನು ನೋಡಿ ಇಡೀ ಝಾನ್ಸಿ ಯೇ ಸಂಭ್ರಮ ಪಟ್ಟಿತ್ತು.ರಾಜ್ಯ ಕ್ಕೆ ಉತ್ತರಾಧಿಕಾರಿ ಯನ್ನು ಕೊಟ್ಟ ಲಕ್ಷ್ಮೀ ಬಾಯಿ ಯ ಮೇಲೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ. ತನ್ನ ಗಂಡನ ರಾಜಕಾರಣದ ಕಡೆಗಿನ ನಿರ್ಲಕ್ಷ್ಯ ತನ, ವಿಚಿತ್ರ ವರ್ತನೆ ಗಳು, ಬರಿಯ ಭೋಗಜೀವನ ಇವೆಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದ ರಾಣಿ ಗೆ ಬಾಳಿನಲ್ಲಿ ಈ ಮಗು ಹೊಸ ಆಶಾಭಾವವನ್ನು ಮೂಡಿಸಿತ್ತು. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಕೆಲವೇ ದಿನಗಳಲ್ಲಿ ಆ ಮಗು ಅಸುನೀಗಿತು. ಇದರಿಂದ ರಾಜ ಗಂಗಾಧರ ರಾವ್ ಕುಗ್ಗಿ ಹೋದ. ಆತನ ಆರೋಗ್ಯ ವೂ ಕ್ಷೀಣಿಸತೊಡಗಿತು. ಇದರಿಂದ ಒಂದು ಮಗುವನ್ನು ದತ್ತು ಪಡೆಯುವ ಕುರಿತಾಗಿ ಯೋಚಿಸಿದ. ಹೀಗೆ ದತ್ತು ಪಡೆದ ಮೂರೇ ದಿನಗಳಲ್ಲಿ ರಾಜನೂ ಪ್ರಾಣಬಿಟ್ಟ. ಈಗ ರಾಣಿ ಲಕ್ಷ್ಮೀ ಬಾಯಿ ಅಕ್ಷರಶಃ ಏಕಾಂಗಿ., .ಇತ್ತ ಮಗು ಮತ್ತು ಪತಿಯನ್ನೂ ಕಳೆದುಕೊಂಡು, ಪ್ರಜೆಗಳ ಜವಾಬ್ದಾರಿ, ಶತ್ರು ಗಳ ಉಪಟಳ ಹೀಗೆ ರಾಣಿ ಜರ್ಝರಿತಳಾದಳು. ರಾಜನ ಅನಿರೀಕ್ಷಿತ ಸಾವು ಇವಳ ಬಾಳಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.
ಈ ಬಿರುಗಾಳಿ ಯು ರಾಣಿಯ ಬದುಕಿನ ಕೊನೆಯ ದಿನದ ವರೆಗೂ ತನ್ನ ರೌದ್ರ ರೂಪ ತೋರಿಸುತ್ತಲೇ ಹೋಯಿತು. ಹೆಬ್ಬಾವಿನಂತೆ ಬಾಯ್ದೆರೆದು ಕಾದಿದ್ದ ಕಂಪನಿ ಸರಕಾರ ದತ್ತು ಪುತ್ರ ದಾಮೋದರ ನಿಗೆ ಯಾವ ಹಕ್ಕನ್ನೂ ನೀಡಲು ನಿರಾಕರಿಸಿತು.ಝಾನ್ಸಿ ಯ ಆಡಳಿತವನ್ನು ತನ್ನ ಕೈಗೆತ್ತಿಕೊಳ್ಳುವ ಕುರಿತು ಸೂಚನೆ ನೀಡಿತು.
ಈಗ ರಾಣಿಗೆ ಅಗ್ನಿಪರೀಕ್ಷೆಯ ಸಮಯ. ದಾಮೋದರನಿನ್ನೂ ಪುಟ್ಟ ಮಗು. ವಿಧವೆ ನೇರವಾಗಿ ಜನರ ಮುಂದೆ ಹೋಗುವಂತಿಲ್ಲ. ಇತ್ತ ಬ್ರಿಟಿಷರ ಕಾಟ ಬೇರೆ. ಈ ಸಂದರ್ಭ ದಲ್ಲಿ ರಾಣಿ ತೆಗೆದುಕೊಂಡ ನಿರ್ಧಾರ ಭಾರತದ ಇತಿಹಾಸ ದಲ್ಲಿ ಮರೆಯಲಾಗದ ದಿನ. ಪುತ್ರ ವಯಸ್ಕನಾಗುವವರೆಗೆ, ತಾನೇ ಆಡಳಿತ ದ ಚುಕ್ಕಾಣಿ ಕೈಗೆತ್ತಿಕೊಂಡಳು. ಕೇಶಮುಂಡನ ಮಾಡಿಸಿಕೊಳ್ಳಲು ನಿರಾಕರಿಸಿ, ಭಾರತೀಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಳು. ನಿತ್ಯ ಪೂಜೆ ಮಾಡುವ ರೂಡಿಯಿದ್ದ ಧಾರ್ಮಿಕ ಮನೋಭಾವದ ರಾಣಿ, ಕೇಶಮುಂಡನ ದಂತಹ ಮೂಢನಂಬಿಕೆ ಯ ವಿರುದ್ಧ, ಆಯಕಟ್ಟಿನ ಸ್ಥಾನದಲ್ಲಿದ್ದು ಕೊಂಡು ಇಂತಹ ನಿರ್ಧಾರ ಕೈಗೊಂಡು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದಳು. ಇನ್ನೂ ಅಚ್ಚರಿ ಯ ವಿಷಯವೆಂದರೆ ಈ ನಿರ್ಧಾರವನ್ನು ಅಂದಿನ ಯಾವುದೇ ಧಾರ್ಮಿಕ ಮುಖಂಡರು ಅಥವಾ ಇತರ ರು ನಾಯಕರು ವಿರೋಧಿಸಿದ ಉದಾಹರಣೆಗಳಿಲ್ಲ. ಅಷ್ಟರ ಮಟ್ಟಿಗೆ ರಾಣಿಯನ್ನು ಒಪ್ಪಿಕೊಂಡಿದ್ದರುಅಲ್ಲಿನ ಜನ. ಪುರುಷ ಪ್ರಧಾನ ಸಮಾಜದ ಎಲ್ಲಾ ಅಡೆ ತಡೆಗಳ ಮಧ್ಯೆ ಆಕೆ ಯಶಸ್ವಿಯಾಗಿ ಆಡಳಿತ ನಡೆಸಿದ್ದೂ ಒಂದು ಪ್ರಶಂಸನಾರ್ಹ ವಿಷಯವೇ. ಇವೆಲ್ಲವೂ ಆಕೆಯಲ್ಲಿದ್ದ ಶಾಸ್ತ್ರೀಯ ಪ್ರೌಢಿಮೆ ಮತ್ತು ದಿಟ್ಟ ತನವನ್ನು ತೋರಿಸುತ್ತದೆ.
ಗೋಹತ್ಯೆಗೆ ಅನುಮತಿ ಕೊಡುವಂತಹ ಕಾಯ್ದೆ, ತೀರ್ಥಯಾತ್ರೆ ಗಳಿಗೆ ಸುಂಕ, ದೇವಸ್ಥಾನ ದಲ್ಲಿ ವರ್ಷವೂ ನಡೆಯುತ್ತಿದ್ದ ಉತ್ಸವಕ್ಕೆ ಹೇರಿದ ನಿಬಂಧನೆ ಮುಂತಾದ ವುಗಳಿಂದ ರೋಸಿ ಹೋಗಿ ಚಿಂತೆಗೀಡಾದ ರಾಣಿ ಬ್ರಿಟಿಷ್ ಸರಕಾರಕ್ಕೆ ಪತ್ರವೊಂದನ್ನು ಬರೆಯುತ್ತಾಳೆ. ಬ್ರಿಟಿಷ್ ಕಂಪನಿ ಇಲ್ಲಿಯವರೆಗೆ ಮಾಡಿದ ಎಲ್ಲಾ ತಪ್ಪು ಗಳನ್ನು ಪಟ್ಟಿ ಮಾಡಿ, ಅವರು ಉಲ್ಲಂಘಿಸಿದ ಎಲ್ಲಾ ಒಪ್ಪಂದದ ವಿವರಗಳನ್ನು ಬರೆದು, ” ಇಷ್ಟಾದರೂ ನೀವು ಯಾವ ಆಧಾರದ ಮೇಲೆ ಝಾನ್ಸಿ ಯ ಮೇಲಿನ ಅಧಿಕಾರದ ಮಾತುಗಳನ್ನು ಆಡುತ್ತಿದ್ದೀರಾ? ಎಂದು ಖಡಕ್ಕಾಗಿ ಪ್ರಶ್ನೆ ಮಾಡಿದಳು. ಈ ಒಕ್ಕಣೆಯಲ್ಲಿ ಸರಕಾರಕ್ಕೆ ಪತ್ರ ಬರೆದ ಮೊದಲ ಹಾಗೂ ಏಕೈಕ ರಾಜ್ಯಾಧಿಕಾರಿ ಈಕೆ. ಇದರಿಂದ ಕೆರಳಿದ ಬ್ರಿಟಿಷ್ ಸರಕಾರ ಝಾನ್ಸಿ ಯನ್ನು ತನ್ನ ಸುಪರ್ದಿಗೆ ನೇರವಾಗಿ ಪಡೆಯುವ ಪ್ರಯತ್ನ ಮಾಡಿತು. ಆಕೆಗೆ ಈ ಸೂಚನೆಯನ್ನು ಹೊತ್ತು ತಂದ ಬ್ರಿಟಿಷ್ ದೂತನಿಗೆ ಆಕೆ ನೀಡಿದ ಉತ್ತರ ಇಂದಿಗೂ ಉಲ್ಲೇಖನಾರ್ಹ. ” ಮೇರಿ ಝಾನ್ಸಿ ಕಭೀ ನಹೀ ದೂಂಗಿ” ನನ್ನ ಝಾನ್ಸಿ ಯನ್ನು ನಾನೆಂದೂ ಬಿಟ್ಟು ಕೊಡುವುದಿಲ್ಲ. ಯಾರಲ್ಲಿ ಆ ಸಾಮರ್ಥ್ಯ ವಿದೆಯೋ ಅವರೇ ಅದನ್ನು ನನ್ನಿಂದ ಪಡೆದುಕೊಳ್ಳಲಿ. ಹೀಗೆಂದು ಘರ್ಜಿಸಿದ್ದಳು.
ಮುಂದಿನದ್ದು ಯುದ್ಧ ಕಾಂಡ. ತನ್ನ ಶೌರ್ಯದಿಂದಾಗಿ ಎಲ್ಲರಿಂದ “ಬಾಯಿಸಾಹೇಬಾ” ಅಂತಲೇ ಕರೆಸಿಕೊಳ್ಳುತ್ತಿದ್ದ ರಾಣಿ , ನತ್ಯೇಖಾನನನ್ನು ಯುದ್ಧದಲ್ಲಿ ಸೋಲಿಸಿದಾಗ ಈಕೆಯ ಕೀರ್ತಿ ಬುಂದೇಲಖಂಡದಲ್ಲೆಲ್ಲಾ ಹಬ್ಬಿತು. ಎಲ್ಲರೂ ಈಕೆಯ ಪರಾಕ್ರಮವನ್ನು ಕೊಂಡಾಡುವವರೇ.ಕಲ್ಯಾಣ ಸಿಂಹ ಕುಡವಾ ಎಂಬ ಕವಿಯೊಬ್ಬ ” ಲಕ್ಷ್ಮೀ ಬಾಯಿ ರಾಸೋ” ಎಂಬ ಸುಧೀರ್ಘ ಕಾವ್ಯ ರಚಿಸಿದ. ತನ್ನ ಜೀವಿತಾವಧಿಯಲ್ಲೇ ಇಂತಹ ಗೌರವ ಪಡೆದ ಅಪರೂಪದ ವ್ಯಕ್ತಿ ಈಕೆ. ಈ ಕಾವ್ಯ ಎಲ್ಲ ಜನರ ಬಾಯಲ್ಲೂ ಇದು ನಲಿದಾಡಲಾರಂಭಿಸಿತು. ಇದನ್ನು ಕಂಡ ಬ್ರಿಟಿಷರಿಗೆ ಈಕೆಯನ್ನು ಹೀಗೇ ಬಿಟ್ಟರೆ ನಮ್ಮ ಹಾದಿಗೇ ಮುಳ್ಳಾದಾಳು ಎಂದು ಯೋಚಿಸಿ ಈಕೆಯನ್ನು ಹಣಿಯಲು ಬಲು ಚಾಣಾಕ್ಷ ಯೋಜನೆ ಹೂಡಿದರು.
೧೮೫೭ರ ಮೇ ನಲ್ಲಿ ಸ್ಫೋಟಗೊಂಡ ಸ್ವಾತಂತ್ರ್ಯ ಸಂಗ್ರಾಮ ಜೂನ್ ವೇಳೆಗೆ ಝಾನ್ಸಿಯನ್ನು ತಲುಪಿತು. ಇತ್ತ ಅನುಭವ ಇಲ್ಲದ, ಸರಿಯಾದ ತರಬೇತಿಯೂ ಇಲ್ಲದ ಝಾನ್ಸಿ ಯ ಸೇನೆಯ ನೇತೃತ್ವವವನ್ನು ಸ್ವತಃ ತಾನೇ ವಹಿಸಿಕೊಂಡ ರಾಣಿ ಮುಂದಿನ ದಿನಗಳನ್ನು ಕಳೆದದ್ದು ಬರಿಯ ಯುದ್ದರಂಗದಲ್ಲೇ. ಸತತ ೭ ದಿನಗಳ ಕಾಲ ಆಂಗ್ಲರ ಬೃಹತ್ ಸೈನ್ಯವನ್ನು ಹಿಮ್ಮೆಟ್ಟಿಸಿದ ರೀತಿ, ತನ್ನ ವರ ಕುತಂತ್ರದಿಂದಾಗಿ ಝಾನ್ಸಿ ಆಂಗ್ಲರ ಕೈವಶವಾದಾಗ ತಾನೇ ರಣಚಂಡಿಯಂತೆ ಬಿಳಿಯರ ನೆತ್ತರ ಕೋಡಿ ಹರಿಸಿ ಸಮಾಧಾನ ತಂದುಕೊಂಡ ಬಗೆ, ಬ್ರಿಟಿಷ್ ಸರ್ಪಗಾವಲಿನಿಂದ ತಪ್ಪಿಸಿಕೊಂಡು ಕಾಲ್ಪಿಯಾ ಸೇರಿದ ರೀತಿ, ಬೆನ್ನಿಗೆ ಪುತ್ರನನ್ನು ಕಟ್ಟಿಕೊಂಡು ೨ ರಾತ್ರಿ ೨ಹಗಲುಗಳಲ್ಲಿ ನಿರಂತರವಾಗಿ ಆಕೆ ಮಾಡಿದ ಕುದುರೆ ಸವಾರಿ, ಮತ್ತೆ ತನ್ನ ಗುರು ತಾತ್ಯಾ ರೊಂದಿಗೆ ಸೇನೆ ಕಟ್ಟಿ ಬಿಳಿಯರೊಂದಿಗೆ ಹೋರಾಟ, ಮತ್ತೆ ಮತ್ತೆ ಸೋಲು, ಸತತ ಸೋಲುಗಳಿಂದ ಕುಗ್ಗದೆ ಎಲ್ಲರನ್ನೂ ಯುದ್ಧ ಕ್ಕೆ ಪ್ರೇರೇಪಿಸಿವ ರೀತಿ, ಹೀಗೆ ಆಕೆಯ ಬದುಕಿನ ಪ್ರತಿ ದಿನವೂ ಒಂದೊಂದು ಕಥೆಯೇ.
ಹೀಗೆ ೧೮೫೮ರ ರ
ಜೂನ್ ವರೆಗೆ ನಿರಂತರ ಒಂದು ವರ್ಷಗಳ ಕಾಲ ಹೋರಾಡಿದ ರಾಣಿ ಎಲ್ಲೂ ಹಿಂದಿರುಗಿ ನೋಡಿದ್ದಿಲ್ಲ. ತನ್ನ ಧ್ಯೇಯ ದಿಂದ ವಿಮುಖಳಾಗಲಿಲ್ಲ. ತನ್ನ ೨೩ರ ವಯಸ್ಸಿನಲ್ಲೂ ‘ ಸಂಭಾವಿತಸ್ಯ ಚಾಕೀರ್ತಿ ಮರಣಾದತಿರಚ್ಯತೇ’ ಅಂದರೆ ಇನ್ನೊಬ್ಬನ ಹಂಗಿನಲ್ಲಿ ಬದುಕುವ ಬದಲು ಮರಣವನ್ನಪ್ಪುವುದೇ ಲೇಸು. ಎಂಬಂತೆ ಬಾಳಿದ ಈಕೆ, ತನ್ನ ಕೊನೆಯ ದಿನದ ಯುದ್ಧ ದಲ್ಲಿ ರಣಚಂಡಿಯಂತೆ ಕಾಣುತ್ತಿದ್ದಳು. ಸಿಕ್ಕ ಸಿಕ್ಕ ಶತ್ರುಗಳನ್ನೆಲ್ಲ ಸೀಳಿ ಪ್ರಳಯಾಂತಕಳಾಗಿ ಕಾಣುತ್ತಿದ್ದಳು. ಕೊನೆಗೂ ಶಾಖೆಯನ್ನು ಎದುರಿಸಲಾಗದ ಆಂಗ್ಲರು ಹಿಂದಿನಿಂದ ಬಂದು ಆಕೆಯ ತಲೆಗೆ ಬಲವಾಗಿ ಹೊಡೆದರು.ಹೊಟ್ಟೆಗೂ ಇರಿದರು. ಪೆಟ್ಟಿನ ತೀವ್ರತೆಗೆ ಆಕೆಯ ಬಲಗಣ್ಣು ಹೊರಬಂತು. ಆದರೂ ತನಗೆ ಇರಿದವನನ್ನು ಕೊಂದೇ ಬಿಟ್ಟಳು.ಕೊನೆಗೆ ಆಕೆಯ ನಂಬಿಕಸ್ಥ ಸೇವಕನೊಬ್ಬ ಆಕೆಯ ನ್ನು ಹತ್ತಿರದ ಗುಡಿಸಲಿಗೆ ಕರೆತಂದು ಉಪಚರಿಸಿದ.”ಹರ ಹರ ಮಹಾದೇವ ” ಈ ವೀರಾಂಗನೆ ಹರನ ಪಾದ ಸೇರಿದಳು.ಆಕೆಯ ಇಚ್ಛೆಯಂತೆ ಆಕೆಯ ದೇಹಕ್ಕೆ ಶತ್ರುಗಳಿಂದ ಅವಮಾನವಾಗದಂತೆ ಆತನೇ ಹುಲ್ಲಿನ ಚಿತೆಯ ಮೇಲೆ ಆಕೆಯ ದೇಹವನ್ನಿಟ್ಟು ಅಗ್ನಿಸ್ಪರ್ಶ ಮಾಡಿದ.
೨೩ ವರ್ಷಗಳ
ಬದುಕಿನಲ್ಲಿ ಸಾವಿರಾರು ಸ್ವಾತಂತ್ರ್ಯ ವೀರರ ಹೃದಯ ದಲ್ಲಿ ಕಿಚ್ಚಿನ ಕಿಡಿ ಹಚ್ಚಿದಳು.ಬ್ರಿಟಿಷ್ ರಾಣಿ ಯ ಬಾಯಿಂದಲೇ ಭೇಷ್ ಅನ್ನಿಸಿಕೊಂಡಳು..ಈಕೆ ರಾಜ ಗಂಗಾಧರ ನ ರಾಣಿಯಾಗಿ ಗುರುತಿಸಿ ಕೊಳ ಗಳ ಲ ಇಲ್ಲ. ‘ ಝಾನ್ಸಿ ಯ ರಾಣಿ ಲಕ್ಷ್ಮೀ ಬಾಯಿ ಯಾಗಿ ಇತಿಹಾಸ ಬರೆದಳು. ಈಕೆ ಬರಿಯ ವೀರಾಂಗನೆಯಲ್ಲ, ಅನನ್ಯ ಧರ್ಮವಂತೆ, ಕಲಾ ಪ್ರೋತ್ಸಾಹಕಿ, ಮಾತೃ ಹೃದಯಿ,ಚತುರ ರಾಜಕಾರಿಣಿ, ಅಪ್ಪಟ ಸ್ವಾಭಿಮಾನಿ, ಈಕೆ ಕೇವಲ ಭಾರತದ ಸ್ವಾತಂತ್ರ್ಯ ಹೋರಾಟಗಾರರ್ತಿಯಲ್ಲ, ” ಭಾರತದ ಸ್ವಾತಂತ್ರ್ಯ ದೇವತೆ”.
ಈಕೆಯ ಬಲಿದಾನಕ್ಕೆ ೧೫೮ ವರ್ಷಗಳು ಸಂದಿವೆ. ೨೧ನೇ ಶತಮಾನದ ಭಾರತದ ಪ್ರತೀ ಹೆಣ್ಣು ಮಗಳಿಗೂ ಇಂತಹ ದೇವತಾನಾರಿಯ ಸ್ಫೂರ್ತಿ ಇದ್ದರೆ ಭಾರತವನ್ನು ಬೆಳಗಲು ಇದಕ್ಕಿಂತ ಬೇರೆ ಜ್ಯೋತಿ ಬೇಕೇ?
Discussion about this post