Read - < 1 minute
ಬೆಂಗಳೂರು, ಸೆ.19: ರಾಜ್ಯ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿಯಾಗಿ ಡಾ.ಸುಭಾಷ್ ಚಂದ್ರ ಕುಂಟಿಯಾ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ಅವರ ವಿಸ್ತರಣಾ ಅವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ರಾಜ್ಯ ಸರ್ಕಾರ ಹೊಸ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಳ್ಳಲಿದೆ.
ಕೇಂದ್ರ ಸರ್ಕಾರದ ಸಾಕ್ಷರತೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿರುವ ಡಾ.ಸುಭಾಷ್ಚಂದ್ರ ಕುಂಟಿಯಾ ಅವರನ್ನು ಹೊಸ ಮುಖ್ಯಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರವನ್ನು ಕೂಡ ನಡೆಸಿದೆ. ಕೇಂದ್ರ ಸೇವೆಯಿಂದ ಕುಂಟಿಯಾ ಅವರು ಕೂಡ ಮುಖ್ಯಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಸಮ್ಮತಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ನೂತನ ಮುಖ್ಯಕಾರ್ಯದರ್ಶಿ ನೇಮಕದ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಗಳಿವೆ. ಸೇವಾ ಹಿರಿತನದಲ್ಲಿ ಕುಪೇಂದ್ರ ತ್ರಿಪಾಠಿ ಮೊದಲಿಗರಾಗಿದ್ದಾರೆ. ಅವರೂ ಕೂಡ ಕೇಂದ್ರ ಸರ್ಕಾರದ ನವೀಕರಣ ಇಂಧನ ಸಚಿವಾಲಯದ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಸೇವಾವಧಿ ಕೇವಲ ಒಂದು ತಿಂಗಳಿದ್ದು, ಅಕ್ಟೋಬರ್ ಅಂತ್ಯಕ್ಕೆ ವಯೋನಿವೃತ್ತಿ ಹೊಂದಲಿದ್ದಾರೆ. ಕುಂಟಿಯಾ ಅವರಿಗೆ ಒಂದುವರ್ಷ ಎರಡು ತಿಂಗಳ ಸೇವಾವಧಿ ಸಿಗಲಿದೆ. ಹೀಗಾಗಿ ರಾಜ್ಯ ಸರ್ಕಾರ ತ್ರಿಪಾಠಿ ಅವರ ಬದಲಿಗೆ ಕುಂಟಿಯಾ ಅವರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಕಾರ್ಯದರ್ಶಿ ಹುದ್ದೆಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ಕೆ.ರತ್ನಪ್ರಭಾ ಅವರು ಕೂಡ ಆಕಾಂಕ್ಷಿಯಾಗಿದ್ದಾರೆ.
ರತ್ನಪ್ರಭಾ ಅವರನ್ನು ಮುಖ್ಯಕಾರ್ಯದರ್ಶಿ ಮಾಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರ ಒತ್ತಡವೂ ಕೂಡ ಸರ್ಕಾರದ ಮೇಲೆ ಹೇರಲಾಗುತ್ತಿದೆ.
ರತ್ನಪ್ರಭಾ ಅವರ ಪರವಾಗಿ ಭಾರೀ ಲಾಬಿ ನಡೆದರೂ ಪ್ರಯೋಜನವಾಗುತ್ತಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಅರವಿಂದ್ ಜಾದವ್ ಅವರು ಜೂನ್ನಲ್ಲಿ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿದ್ದರು. ರಾಜ್ಯ ಸರ್ಕಾರ ಮತ್ತೆ ಅವರ ಅವಧಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಿತ್ತು. ಆ ಅವಧಿಯೂ ಕೂಡ ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ಹೊಸ ಮುಖ್ಯಕಾರ್ಯದರ್ಶಿ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ.
Discussion about this post