Read - 2 minutes
ನವದೆಹಲಿ: ಸೆ:29: ಇತ್ತ ಸೇನಾ ಮುಖ್ಯಸ್ಥ ರಣಬೀರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಉಗ್ರರ ನೆಲೆಬೀಡು ಧ್ವಂಸಾಚರಣೆ ಘೋಷಿಸುತ್ತಿದ್ದಂತೆ ಅತ್ತ ಸರ್ವಪಕ್ಷಗಳ ಸಭೆಯನ್ನು ಕರೆದ ಪ್ರಧಾನಿ ನರೇಂದ್ರ ಮೋದಿ ಈ ವಿಶೇಷ ಕಾರ್ಯಪಡೆಯ ಸಾಹಸವನ್ನು ವಿವರಿಸಿದರು.
ಇದಕ್ಕಾಗಿ ಎಲ್ಲರ ಬೆಂಬಲವನ್ನು ಯಾಚಿಸಿದರು.
ಸಭೆಯಲ್ಲಿ ಸೇನಾಮುಖ್ಯಸ್ಥ ರಣಬೀರ್ ಸಿಂಗ್ ಎಲ್ಲಾ ಘಟನೆಗಳನ್ನು ವಿವರಿಸಿದರು. ಸಭೆಯ ನಂತರ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು, ಸೇನೆಯ ಕಾರ್ಯಾಚರಣೆಗೆ ಎಲ್ಲಾ ಪಕ್ಷಗಳು ಶ್ಲಾಘನೆ ವ್ಯಕ್ತಪಡಿಸಿವೆ. ನಿಯಂತ್ರಣ ರೇಖೆಯ ಕುಪ್ವಾರ ಮತ್ತು ಕೂಂಚ್ ಬಳಿ ಏಳು ಅಡಗುತಾಣಗಳನ್ನು ಧ್ವಂಸ ಮಾಡಲಾಗಿದ್ದು, ಭಾರತದ ಕಡೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಅಡಗುತಾಣಗಳಲ್ಲಿದ್ದ ಉಗ್ರರು ದೇಶದ ಪ್ರಮುಖ ಸ್ಥಳಗಳು ಮತ್ತು ಪಟ್ಟಣಗಳಲ್ಲಿ ಹಾವಳಿ ನಡೆಸಲು ಯೋಜನೆ ರೂಪಿಸಿದ್ದರು. ಇದನ್ನು ಗುಪ್ತಚರ ಮಾಹಿತಿ ಮೇರೆಗೆ ಖಚಿತಪಡಿಸಿಕೊಂಡ ಸೇನೆ 38 ಉಗ್ರರು ಮತ್ತು ಉಗ್ರರ ರಕ್ಷಣೆಗೆಂದು ನಿಯೋಜಿಸಲಾಗಿದ್ದ 9 ಪಾಕಿಸೈನಿಕರನ್ನು ಈ ಮಿಂಚಿನ ಕಾರ್ಯಾಚರಣೆಯಲ್ಲಿ ಬಲಿತೆಗೆದುಕೊಂಡಿತು ಎಂದು ವೆಂಕಯ್ಯನಾಯ್ಡು ವಿವರಿಸಿದರು.
ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಪಾಕ್ ಪ್ರಾಯೋಜಿತ ಭಯೋತ್ಪಾದನೆ ನಿಗ್ರಹಿಸಲು ಕೈಗೊಳ್ಳುವ ಪ್ರಧಾನಿಗೆ ಯಾವಾಗಲೂ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಜೆಡಿಯು ನಾಯಕ ಶರದ್ ಯಾದವ್ ಗಡಿ ಭಯೋತ್ಪಾದನೆಯನ್ನು ಇದೇ ರೀತಿಯಲ್ಲೇ ಮಟ್ಟ ಹಾಕಬೇಕೆಂದು ದನಿಗೂಡಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಿಪಿಎಂ ನಾಯಕ ಸೀತಾರಾಂ ಯಚೂರಿ, ಬಿಎಸ್ ಪಿ ನಾಯಕ ಸತೀಶ್ ಚಂದ್ರ ಮಿಶ್ರಾ ಮತ್ತು ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು.
ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಜೊತೆಗೆ ಸಚಿವರಾದ ಅರುಣ್ ಜೇಟ್ಲಿ ಸುಷ್ಮಾ ಸ್ವರಾಜ್, ಭದ್ರತಾ ಸಲಹೆಗಾರ ಅಜಿತ್ ಧೋವಲ್ ಉಪಸ್ಥಿತರಿದ್ದರು.
ಸುಷ್ಮಾ-ಸೋನಿಯಾ ಭೇಟಿ:
ಈ ಮಧ್ಯೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಪ್ರತ್ಯೇಕ ಭೇಟಿ ಮಾಡಿ, ದಾಳಿಯ ವಿವರಗಳನ್ನು ವಿವರಿಸಿದರು.
ಸೋನಿಯಾ ಪ್ರತಿಕ್ರಿಯೆ:
ದೇಶದ ಸುರಕ್ಷತೆಗೆ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಗಳಿಗೂ ನಮ್ಮ ಬೆಂಬಲವಿದೆ ಎನ್ನುವುದರ ಜೊತೆಗೆ ಸೇನೆಯ ಕಾರ್ಯಾಚರಣೆಯನ್ನು ಅಭಿನಂದಿಸಿದ್ದಾರೆ.
ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಶಿವಸೇನೆ ಪ್ರಮುಖ ಉದ್ಧವ್ ಠಾಕ್ರೆ, ರಾಜ್ಯ ಸಚಿವ ರಾಜ್ಯವರ್ಧನ ರಾಥೋಡ್ ಪ್ರಧಾನಮಂತ್ರಿ ಹಾಗೂ ಭಾರತೀಯ ಸೇನೆ ಈ ಸಾಹಸ ನಡೆಸಿದ್ದಕ್ಕಾಗಿ ಕೊಂಡಾಡಿದ್ದಾರೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈಗ ಆಟ ಶುರುವಾಗಿದೆ ಎಂದು ಎಂದರೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಡೀ ದೇಶ ಸೇನೆಯ ಜೊತೆಗಿದೆ ಎಂದಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲಾ ಕಾಂಗ್ರೆಸ್ ಪಕ್ಷ ಹೃತ್ಪೂರ್ವಕವಾಗಿ ಸೇನೆ ಈ ಕಾರ್ಯವನ್ನು ಬೆಂಬಲಿಸಿದೆ ಅದಕ್ಕೆ ಅಭಿನಂದನೆಗಳು ಎಂದಿದ್ದಾರೆ.
ಪಾಕಿಸ್ತಾನ ಪ್ರತಿಕ್ರಿಯೆ:
ವಿಷಯ ತಿಳಿಯುತ್ತಿದ್ದಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥರು ಈ ಕಾರ್ಯಾಚರಣೆಯನ್ನು ಅಲ್ಲಗೆಳೆದರು. ಆದರೆ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮತ್ತು ಪ್ರಧಾನಿ ನವಾಜ್ ಷರೀಫ್ ಇದೊಂದು ಪೂರ್ವ ನಿಯೋಜಿತ ಎಂದು ಘೋಷಿಸಿದರು.
ಉಗ್ರ ತಾಣಗಳ ಮೇಲಿನ ಭಾರತ ದಾಳಿಯನ್ನು ಖಚಿತಪಡಿಸಿರುವ ಪಾಕ್, ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಇಸ್ಲಮಾಬಾದ್ ನಲ್ಲಿ ತುರ್ತು ಸಂಪುಟ ಸಭೆ ನಡೆಸಿದರು.
ಇನ್ನು ಅಕ್ಕಪಕ್ಕದ ರಾಷ್ಟ್ರಗಳು ಸ್ನೇಹಯುತವಾಗಿರಬೇಕೆಂದುಕೊಂಡಿರುವು ದು ನಮ್ಮ ದೌರ್ಬಲ್ಯವಲ್ಲ, ಗಡಿಯನ್ನು ಕಾಯುವಷ್ಟು ಸಾಮರ್ಥ್ಯವಿದೆ, ಪ್ರತಿದಾಳಿ ನಡೆಸಲು ಸಿದ್ಧ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಇನ್ನು ಇದೊಂದು ಯೋಜಿತ ದಾಳಿಯಾಗಿದ್ದು, ಭಾರೀ ಚಿಂತನೆ ನಡೆಸಿ ದಾಳಿ ಮಾಡಲಾಗಿದೆ, ನಮ್ಮ ಕಡೆಯಿಂದ ತಕ್ಕ ಉತ್ತರ ನೀಡಲಾಗಿದೆ, ಎಲ್ಒಸಿ ದಾಟಿ ಬಂದರೆ ಹಾಗೂ ಕದನ ವಿರಾಮ ಉಲ್ಲಂಘಿಸಿದರೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
ನಿಯಂತ್ರಣ ರೇಖೆಯ ಬಿಂಭರ್ ವಲಯದಲ್ಲಿ ದಾಳಿಗೆ ಬಲಿಯಾದ ಪಾಕ್ ಸೈನಿಕ ಇಮ್ತಿಯಾಜ್ ಎಂಬಾತನ ಶವವನ್ನು ರಾಷ್ಟ್ರಧ್ವಜದ ಹೊದಿಕೆಯೊಂದಿಗೆ ಅವನ ಸ್ವಂತ ಊರಾದ ಫೈಸಲಾಬಾದ್ ಗೆ ಸಂಜೆ ಕಳುಹಿಸಿಕೊಡಲಾಯಿತು. ಜನತೆ ಘೋಷಣೆಗಳ ಮೂಲಕ ಸ್ವಾಗತಿಸಿಕೊಂಡರು.
ಇಬ್ಬರು ಪಾಕಿಸ್ತಾನಿ ಸೈನಿಕರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಸೇನಾ ವಕ್ತಾರರ ಕಚೇರಿ ಮಧ್ಯಾಹ್ನ ಪ್ರಕಟಿಸಿತು.
ಭಾರತದ ರಾಯಭಾರಿಗೆ ಸಮನ್ಸ್: ಖಂಡನಾ ಪತ್ರ ರವಾನೆ
ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಗೌತಮ್ ಬೊಂಬಾವಾಲೆ ಅವರಿಗೆ ಪಾಕ್ ವಿದೇಶಾಂಗ ಕಚೇರಿ ಸಮನ್ಸ್ ನೀಡಿದೆ. ಇದು ಅಪ್ರಚೋದಿತ ದಾಳಿ ಎಂದು ಖಂಡಿಸಿದೆ. ಪಾಕ್ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಚೌದರಿ ಭಾರತೀಯ ರಾಯಭಾರಿಗೆ ಖಂಡನಾ ಪತ್ರವನ್ನು ನೀಡಿದ್ದಾರೆ. ಅಪ್ರಚೋದಿತ ಕದನ ವಿರಾಮವನ್ನು ಉಲ್ಲಂಘಿಸಿರುವುದು ಖಂಡನಾರ್ಹ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನದ ಪಡೆಗಳು ಸೂಕ್ತ ಪ್ರತಿಕ್ರಿಯೆ ನೀಡಲು ಸಮರ್ಥವಾಗಿವೆ ಎಂದು ಎಚ್ಚರಿಕೆ ನೀಡಲಾಗಿದೆ.
ಇಂತಹ ದಾಳಿಗಳಿಗೆ ಸೂಕ್ತ ಉತ್ತರ ನೀಡದಿದ್ದರೆ ಪಾಕಿಸ್ತಾನ ತಕ್ಕ ಪ್ರತಿಕ್ರಿಯೆ ನೀಡಲು ಸಿದ್ಧವಾಗಿದೆ ಎಂದು ಹೇಳಲಾಗಿದೆ.
Discussion about this post