Read - 2 minutes
ಉಗ್ರರಿಂದ ಸೇನೆ ಸಮವಸ್ತ್ರ ಧರಿಸಿ ದಾಳಿ!
ನವದೆಹಲಿ, ಸೆ.20: ಸೇನೆಯ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಲು ಉಗ್ರರು ಭಾರೀ ತಯಾರಿ ನಡೆಸಿದ್ದರು ಎನ್ನಲಾಗಿದೆ. ಅಲ್ಲದೇ ಸೇನೆಯ ವೇಷದಲ್ಲೇ ಬಂದು ದಾಳಿ ನಡೆಸಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ಈ ಮಧ್ಯೆ ಉರಿ ಸೆಕ್ಟರ್ ನಲ್ಲಿ ಅಡಗಿಕೊಂಡಿದ್ದ 10 ಉಗ್ರರನ್ನು ಮಂಗಳವಾರ ಹೊಡೆದುರುಳಿಸಲಾಗಿದೆ.
ಇನ್ನು ಭಾನುವಾರ ನಡೆಸಿದ ದಾಳಿಯಲ್ಲಿ ಹತ್ಯೆಯಾದ ನಾಲ್ವರು ಉಗ್ರರು ವರ್ಷದೊಳಗಿನವರಾಗಿದ್ದರು ಎಂದು ತಿಳಿದುಬಂದಿದೆ.
ಇನ್ನು ಈ ಉಗ್ರರಿಗೆ ಕುರಿಗಾಹೊಗಳು ಆಶ್ರಯ ನೀಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಕುರಿಗಾಹಿಗಳ ವಿಚಾರಣೆ ಮುಂದುವರಿದಿದೆ.
ಪಾಕ್ ನ ಜೈಶ್ ಎ ಮೊಹಮದ್ ಉಗ್ರ ಸಂಘಟನೆ ಕೈವಾಡ:
ಜಮ್ಮು-ಕಾಶ್ಮೀರದ ಉರಿ ನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 18 ಭಾರತೀಯ ಯೋಧರು ಹುತಾತ್ಮರಾಗಿದ್ದು, ಘಟನೆಗೆ ಪಾಕಿಸ್ತಾನ ಮೂಲದ ಜೈಸ್-ಎ-ಮೊಹಮದ್ ಉಗ್ರ ಸಂಘಟನೆ ಹೊಣೆ ಎಂಬುದು ಸಾಬೀತಾಗಿದೆ.
ಉರಿ ಉಗ್ರರ ದಾಳಿ, ಪಠಾಣ್ ಕೋಟ್ನಂತೆ ಭಾರತದ ಮತ್ತೊಂದು ಕಾರ್ಯಾಚರಣೆಯಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ಭಾರತವನ್ನು ದೂಷಿಸಿವೆ. ಉರಿ ಉಗ್ರರ ದಾಳಿಯಲ್ಲಿ 18 ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ ಎಂಬುದು ಭಾರತದ ಮತ್ತೊಂದು ನಾಟಕ ಎಂದು ಪಾಕಿಸ್ತಾನ ಪತ್ರಿಕೆ ತನ್ನ ಅಂತಾರಾಷ್ಟ್ರೀಯ ಸುದ್ದಿ ಪುಟದಲ್ಲಿ ಪ್ರಕಟಿಸಿದೆ.
ಭಾರತವೇ ತನ್ನ ಯೋಧರ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ವಿರುದ್ಧ ಆರೋಪ ನಡೆಸುತ್ತಿದೆ. ಇದು ಕಾಶ್ಮೀರ ಸಮಸ್ಯೆಯಿಂದ ವಿಶ್ವದ ಗಮನವನ್ನು ಬೇರೆಡೆ ಚದುರಿಸಲು ಭಾರತ ಮಾಡುತ್ತಿರುವ ಡ್ರಾಮಾ ಎಂದು ಹೇಳಿದೆ.
ವಂಚಕ ಭಾರತೀಯ ಮಾಧ್ಯಮಗಳು ಪಾಕಿಸ್ತಾನ ಹೆಸರು ಕೆಡಿಸಲು ಮಾಡುತ್ತಿರುವ ಕುತಂತ್ರ ಎಂದು ಪತ್ರಿಕೆಯಲ್ಲಿ ಭಾರತೀಯ ಮಾಧ್ಯಮಗಳನ್ನು ನಿಂದಿಸಲಾಗಿದೆ.
ಸಿಖ್ ಸಮುದಾಯದ ಪ್ರಾಬಲ್ಯವಿರುವ ಸೇನಾ ನೆಲೆ ಭಾರತದ ಗುರಿಯಾಗಿತ್ತು. ಮುಸ್ಲಿಮರು ಮತ್ತು ಸಿಖ್ರನ್ನು ಭಾರತ ವಿಭಜಿಸುತ್ತಿದೆ. ಕಾಶ್ಮೀರದಲ್ಲಿ ಹೋರಾಟ ನಡೆಸುತ್ತಿರುವ ಮುಸ್ಲಿಮರಿಗೆ ಬೆಂಬಲ ನೀಡುವುದನ್ನು ಭಾರತ ನಿಲ್ಲಿಸಬೇಕು ಎಂದು ಡಾನ್ ಪತ್ರಿಕೆಯಲ್ಲಿ ಬರೆಯಲಾಗಿದೆ.ಭಾರತ ಮತ್ತು ಪಾಕಿಸ್ತಾನ ಸಂಬಂಧಗಳು ಅಪಾಯಕಾರಿ ಮಟ್ಟ ತಲುಪಿವೆ ಎಂದು ಹೇಳಿದೆ.
ಎನ್ ಐ ಎ ಯಿಂದ ತನಿಖೆ:
ಕಾಶ್ಮೀರದ ಉರಿ ವಲಯದಲ್ಲಿ ಪಾಕಿಸ್ತಾನ ಬೆಂಬಲಿತ ಜೈಷ್-ಇ-ಮಹಮದ್ ಉಗ್ರಗಾಮಿಗಳು ನಡೆಸಿದ ಘೋರ ಹತ್ಯಾಕಾಂಡ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತೀವ್ರಗೊಳಿಸಿದೆ.
ಉರಿ ಸೆಕ್ಟರ್ ನಲ್ಲಿ ನಡೆದ ಉಗ್ರರ ದಾಳಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಎನ್ಐಎ ಈ ಬಗ್ಗೆ ತನಿಖೆ ನಡೆಸಲು ಆರು ಅಧಿಕಾರಿಗಳ ತಂಡವನ್ನು ರಚಿಸಿದೆ. ಈ ತಂಡ ಶೀಘ್ರದಲ್ಲೇ ಉರಿ ವಲಯಕ್ಕೆ ಭೇಟಿ ನೀಡಿ ಮತ್ತಷ್ಟು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಿದೆ.
ಈ ದಾಳಿಯಲ್ಲಿ ಹತರಾದ ನಾಲ್ವರು ಉಗ್ರರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಿರುವ ತಂಡವು ಅಗತ್ಯವಿದ್ದರೆ ಅವುಗಳನ್ನು ಹೆಚ್ಚಿನ ತಪಾಸಣೆಗಾಗಿ ಅಮೆರಿಕಾಗೆ ರವಾನಿಸಲಿದೆ.
ಕೃತ್ಯ ನಡೆದ ಸ್ಥಳದಲ್ಲಿ ಉಗ್ರರಿಂದ ವಶಪಡಿಸಿಕೊಂಡಿರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ವಸ್ತುಗಳ ಮೇಲೆ ಪಾಕಿಸ್ತಾನದ ಗುರುತುಗಳಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಎನ್ಐಎ ತನಿಖೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಏತನ್ಮಧ್ಯೆ, ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಇಂದು ಸಹ ರಾಜಧಾನಿಯಲ್ಲಿ ಮತ್ತೆ ಸಭೆ ನಡೆಸಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸಿದರು. ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಸೇರಿದಂತೆ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಶ್ರೀನಗರ ವರದಿ: ಈ ಮಧ್ಯೆ, ಶ್ರೀನಗರಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕಾಶ್ಮೀರ ಪರಿಸ್ಥಿತಿಯನ್ನು ಪರಾಮರ್ಶಿಸಿದರು. ವಿವಿಧ ಭದ್ರತಾ ಪಡೆಗಳು, ಪೊಲೀಸ್ ಮತ್ತು ಬೇಹುಗಾರಿಕೆ ಸಂಸ್ಥೆಯ ಉನ್ನತಾಧಿಕಾರಿಗಳ ಸಭೆ ನಡೆಸಿದ ಅವರು ಮುಂದೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಮಾಲೋಚಿಸಿದರು.
ಉರಿ ದಾಳಿ: ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ
ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಉಗ್ರರ ದಾಳಿ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಉರಿ ಹಾಗೂ ಜಮ್ಮು-ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಯಲಿದೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್, ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್, ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಉರಿ ಸೇನಾ ನೆಲೆಯಲ್ಲಿ ಉಗ್ರರು ಅಟ್ಟಹಾಸಗೈದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುನ್ನತ ಮಟ್ಟದ ಸಭೆ ನಡೆಸಿದ್ದು, ಬಳಿಕ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾಗಿ ಪರಿಸ್ಥಿತಿಯ ಸಂಪೂರ್ಣ ವಿವರ ನೀಡಿದ್ದಾರೆ. ಈ ನಡುವೆ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಪಾಕ್ನಲ್ಲಿನ ಉಗ್ರರ ಶಿಬಿರಗಳನ್ನು ಮಾತ್ರ ಗುರಿಯಾಗಿಸಿಕೊಂಡು ಸೀಮಿತ ದಾಳಿ (ಸರ್ಜಿಕಲ್ ಸ್ಟ್ರೈಕ್) ದಾಳಿ ನಡೆಸುವುದು ಸಹಿತ ಎಲ್ಲ ಆಯ್ಕೆಗಳನ್ನು ಕೇಂದ್ರ ಸರಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರರ ವಿರುದ್ಧ ಸಮರ ಮುಂದುವರಿಯಲಿದೆ: ಸುಮಿತ್ರಾ ಮಹಾಜನ್
ಉರಿ ಸೇನಾ ಕ್ಯಾಂಪ್ ಮೇಲಿನ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್, ಭಯೋತ್ಪಾದನೆ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮರ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತ ಭಯೋತ್ಪಾದನೆ ವಿರುದ್ಧ ನಿರಂತರ ಹೋರಾಟ ಮುಂದುವರಿಸಲಿದೆ, ಅಲ್ಲದೇ ಭಯೋತ್ಪಾದನೆ ವಿರುದ್ಧ ದೇಶವೇ ಒಂದಾಗಲಿದೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಾತನಾಡಿ, ಪ್ರಧಾನಿ ಮೋದಿ ಸರ್ಕಾರ ಭಯೋತ್ಪಾದನೆ ವಿರುದ್ಧ ಶಾಂತಿ ಸಮರ ಸಾರಲಿದೆ ಎಂಬ ವಿಶ್ವಾಸ ದೇಶದ ಜನತೆಗೆ ನೀಡಲಿದೆ, ಪಾಕ್ ಪ್ರಾಯೋಜಿತ ಉಗ್ರವಾದಕ್ಕೆ ಭಾರತ ತಕ್ಕ ಪಾಠ ನೀಡಲಿದೆ ಎಂದು ಹೇಳಿದರು.
ಉರಿ ದಾಳಿಗೆ ಅಮೆರಿಕ ಸಂಸತ್ ಖಂಡನೆ
ವಾಶಿಂಗ್ಟನ್: ಉರಿ ಉಗ್ರರ ಮೇಲಿನ ದಾಳಿಗೆ ವಿಶ್ವದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.
ಅಮೇರಿಕಾ ಸಂಸತ್ ಕೂಡ ದಾಳಿಯನ್ನು ಖಂಡಿಸಿ, ಆರೋಪಿಗಳನ್ನು ನ್ಯಾಯಾಲಯದ ವ್ಯಾಪ್ತಿಗೆ ತಂದು ಕಠಿಣ ಶಿಕ್ಷೆ ನೀಡಬೇಕೆಂದು ಹೇಳಿದೆ.
ಭಾರತದ ಜಮ್ಮು-ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರ ದಾಳಿ ನಡೆದದ್ದು ಖಂಡನೀಯ, ಈ ರೀತಿ ಉಗ್ರ ದಾಳಿಗೆ ಪ್ರೋತ್ಸಾಹ ನೀಡಿದವರನ್ನು ನ್ಯಾಯಾಲಯದ ವ್ಯಾಪ್ತಿಗೆ ಕರೆತರಬೇಕು ಎಂದು
ಸೆನೆಟರ್ ಮಾರ್ಕ್ ವಾರ್ನರ್ ಹೇಳಿದ್ದಾರೆ.
ಅಲ್ಲದೇ ಮಲಗಿದ್ದ ಸೈನಿಕರ ಮೇಲೆ ದಾಳಿ ನಡೆಸಿರುವುದು ಹೇಡಿಗಳ ಕೃತ್ಯ ಎಂದು ಸೆನೆಟರ್ ಟಾಮ್ ಕಾಟನ್ ಹೇಳಿದ್ದಾರೆ.
ಅಲ್ಲದೇ ದಾಳಿಯಲ್ಲಿ ಹುತಾತ್ಮರಾದ 18 ಯೋಧರಿಗೆ ಸಂತಾಪ ಸೂಚಿಸಿದರು.
Discussion about this post