ಬೆಂಗಳೂರು, ಸೆ.17: ಕಾರ್ಯಕ್ರಮವನ್ನು ಹಣದ ಮೂಲಕವೂ ನಡೆಸಬಹುದು, ಆದರೆ ಅದೆಷ್ಟೇ ದೊಡ್ಡ ಕಾರ್ಯಕ್ರಮವಾದರೂ ಶ್ರೀರಾಮಚಂದ್ರಾಪುರಮಠದಲ್ಲಿ ಸೇವೆಯ ಆಧಾರದಲ್ಲಿ ಕಾರ್ಯಕರ್ತರ ಭಾಗವಹಿಸುವ ಮೂಲಕ ನಡೆಯುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆದ ಗೋಚಾತುರ್ಮಾಸ್ಯದ ಕಾರ್ಯಕರ್ತರ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಆಂಜನೇಯ ಕಾರ್ಯಕರ್ತರಿಗೆ ಆದರ್ಶವಾಗಿದ್ದು, ಒಬ್ಬ ಉತ್ತಮ ಕಾರ್ಯಕರ್ತನಾಗದೇ ಪದಾಧಿಕಾರಿ ಆಗಲು ಸಾಧ್ಯವಿಲ್ಲ. ಶ್ರೀ ಮಠದಲ್ಲಿ ಕಾರ್ಯಕರ್ತನಾಗಿರುವುದಕ್ಕೆ ಸರ್ವೋಚ್ಚ ಗೌರವವಿದ್ದು, ಶ್ರೀಮಂತಿಕೆಯ ಮೇಲೆ ಯಾವುದೇ ಜವಾಬ್ದಾರಿಯನ್ನು ನೀಡಲಾಗುತ್ತಿಲ್ಲ ಎಂದ ಶ್ರೀಗಳು, ರಾಮರಾಜ್ಯದ ಸ್ಥಾಪನೆ, ಗೋಸಂರಕ್ಷಣೆಯ ಮಹಾಸಂಕಲ್ಪದಂತಹ ಕಾರ್ಯಗಳು ಆಗಬೇಕಾಗಿದ್ದು , ಕಾರ್ಯಕರ್ತರು ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿ ಎಂದು ಆಶೀರ್ವದಿಸಿದರು.
ಶ್ರೀಮಠದ ಸೇವಾವಿಭಾಗದಿಂದ ಹೊರತರಲಾದ ಕಾರ್ಯಕರ್ತರ ಕೈಪಿಡಿಯನ್ನು ಶ್ರೀಗಳು ಲೋಕಾರ್ಪಣೆಮಾಡಿದರು.
ಗೋಚಾತುರ್ಮಾಸ್ಯ ಸಮಿತಿಯ ಪದಾಧಿಕಾರಿಗಳು, ಚಾತುರ್ಮಾಸ್ಯದ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಸೇವೆಸಲ್ಲಿಸಿದ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದು ಶ್ರೀಗಳಿಂದ ಆಶೀರ್ವಾದ ಪಡೆದರು.
Discussion about this post