ಬೆಂಗಳೂರ: ಸೆ;17: ಕಾವೇರಿ ವಿಚಾರವನ್ನು ರಾಜಕೀಯಗೊಳಿಸದೇ, ವಿಶೇಷ ತಂಡ ಕರೆಸಿ ಪರಿಸ್ಥಿತಿ ಅವಲೋಕಿಸಿ, ನ್ಯಾಯಾಲಯದ ಮುಂದೆ ನೀಡಬೇಕು ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಹುಟ್ಟುಹಬ್ಬದ ಅಂಗವಾಗಿ ಹಿಂದೂಸೇವಾ ಪ್ರತಿಷ್ಠಾನದ ವಿಶೇಷ ಸೇವಾ ಪ್ರಕಲ್ಪವಾಗಿರುವ ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರವನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸಬೇಡಿ, ಜನರಿಗೆ ಕುಡಿಯಲು ನೀರು ಅತ್ಯವಶ್ಯಕವಾಗಿದೆ. ಎರಡೂ ರಾಜ್ಯಗಳಿಗೂ ನೀರಿನ ಅಗತ್ಯವಿದೆ. ಆದರೆ ಇಲ್ಲಿ ನೀರು ಎಷ್ಟಿದೆ ಎಂಬುದನ್ನು ನ್ಯಾಯಾಲಯಕ್ಕೆ ಸೂಕ್ತ ದಾಖಲೆಯೊಂದಿಗೆ ಮನವರಿಕೆ ಮಾಡಬೇಕು. ಇದಕ್ಕಾಗಿ ವಿಶೇಷ ತಂಡವನ್ನು ಕರೆಸಿ ಅಧ್ಯಯನ ನಡೆಸುವುದು ಸೂಕ್ತ ಎಂದು ಹೇಳಿದರು.
ಇನ್ನು ನೀರಿನ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಎಂಬುದಿಲ್ಲ, ಇದರಲ್ಲಿ ಯಾವುದೇ ರಾಜಕಾರಣವಿಲ್ಲ, ನ್ಯಾಯಾಲಯದ ಮುಂದಿರುವುದರಿಂದ ಪ್ರಧಾನಿ ಮಧ್ಯಸ್ಥಿಕೆಗಿಂತ ವಸ್ತುಸ್ಥಿತಿ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
ಈ ಮುನ್ನ ಮಕ್ಕಳಿಗೆ ತಿಂಡಿ-ತಿನಿಸು ಹಂಚಿದರು. ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.
Discussion about this post