ಯಾದಗಿರಿ, ಅ.3: ಕಾವೇರಿ ನದಿ ನೀರು ಉಳುವಿಗಾಗಿ ಸುಪ್ರೀಂ ಕೋರ್ಟ್ ಧೋರಣೆಯನ್ನು ಖಂಡಿಸಿ ಯಾದಗಿರಿ ಜಿಲ್ಲೆಯಾದ್ಯಂತ ಕರಾಳ ದಿನಾಚರಣೆ ಹಾಗೂ ಮಾನ್ಯ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ವಿವಾದ ಶೀಘ್ರ ಇತ್ಯರ್ಥಗೊಳಿಸುವಂತೆ ಕರವೇ ಜಿಲ್ಲಾ ಘಟಕದ ಕಾರ್ಯಕರ್ತರು ಆಗ್ರಹಿಸಿ ಸೋಮವಾರ ನಗರದ ಸುಭಾಷ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕರ್ನಾಟಕ ಕಾವೇರಿ ಕೊಳ್ಳದಲ್ಲಿ ಕುಡಿಯುವ ನೀರಿಗೂ ತೀವ್ರ ತೊಂದರೆಯಾಗಿರುವ ಹೊತ್ತಿನಲ್ಲೂ ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದು, ಕಂಡಾಗ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಅನ್ನುವ ರಾಜ್ಯವಿದೆಯಾ ಅನ್ನುವ ಪ್ರಶ್ನೆ ಕನ್ನಡಿಗರಲ್ಲಿ ಹುಟ್ಟುತ್ತಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ, ಕನ್ನಡಿಗರಿಗೆ ನ್ಯಾಯ ದೊರೆಯುವತ್ತ ದೆಹಲಿಯ ವ್ಯವಸ್ಥೆ, ಮಾನ್ಯ ಗೌರವಾನ್ವಿತ ರಾಷ್ಟ್ರಪತಿಗಳು ರಾಜ್ಯಕ್ಕೆ ಅನ್ಯಾಯ ಮಾಡದಂತೆ ಮಧ್ಯೆ ಪ್ರವೇಶಿಸಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ರಾಷ್ಟ್ರಪತಿಗೆ ಬರೆದ ಮನವಿ ಸಲ್ಲಿಸಲಾಯಿತು.
ನೇತೃತ್ವವನ್ನು ಹೈ.ಕ ಸಂಚಾಲಕ ಶರಣು ಇಟಗಿ, ಜಿಲ್ಲಾಧ್ಯಕ್ಷ ಸಿದ್ದುರೆಡ್ಡಿ ತಂಗಡಗಿ, ವಿದ್ಯಾರ್ಥಿ ಅಧ್ಯಕ್ಷ ಖಾಸಿಂ ಪಟೇಲ್, ಹೋಬಳಿ ಅಧ್ಯಕ್ಷ ರವಿಕುಮಾರ ದೇವರಮನಿ, ಜಿಲ್ಲಾ.ಪ್ರ.ಕಾರ್ಯದರ್ಶಿ ಅಂಭ್ರೇಶ, ಮರಲಿಂಗ , ಶುವು ನಾಯಕ , ವೆಂಕಟೇಶ ನಾಯಕ, ಆನಂದ ವಿಶ್ವಕರ್ಮ, ಶಿವಶಂಕರ ತಳಬಿಡಿ, ಪ್ರಭು ತಳಬಿಡಿ, ಭೀಮು ತಳಬಿಡಿ, ಶಿವು ಸ್ವಾಮಿ, ಸೈದಪ್ಪ ನಾಯ್ಕಲ್, ಸಿದ್ದು ಕಾಡಂಗೇರಾ, ಅರುಣ ಖಾನಾಪೂರ , ವಿಜಯ , ಭೀಮು ಇತರಿದ್ದರು.
ನೀರೇ ಇಲ್ಲದ ಹೊತ್ತಿನಲ್ಲಿ, ಒಂದೆಡೆ ಕರ್ನಾಟಕ ತಮಿಳುನಾಡುಗಳ ನಡುವಿನ ಸಂಬಂಧವೇ ಹದಗೆಡುತ್ತಿದ್ದರೂ, ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಜಾಣ ಕಿವುಡು ತೋರುತ್ತಿದೆ. ಹದಿನೇಳು ಜನ ಸಾಂಸದರನ್ನು ದೆಹಲಿಗೆ ಕಳುಹಿಸಿ ಕರ್ನಾಟಕದ ಬಗೆಗಿನ ಕೇಂದ್ರದ ಈ ಅಸಡ್ಡೆಯ ಧೋರಣೆ ಕನ್ನಡಿಗರನ್ನು ಎಷ್ಟು ಹಗುರವಾಗಿ ಪರಿಗಣಿಸಲಾಗಿದೆ ಅನ್ನುವುದನ್ನು ತೋರುತ್ತಿದೆ. ಕರ್ನಾಟವೇನಿದ್ದರೂ ಚುನಾವಣೆಯಲ್ಲಿ ಸೀಟು ಬಾಚಿಕೊಂಡು ದೇಹಲಿಯಲ್ಲಿ ಅಧಿಕಾರ ಮಾಡಲು ಮಾತ್ರ ಬೇಕೇ ಅನ್ನುವ ಪ್ರಶ್ನೆ ಇಂದು ಪ್ರತಿಯೊಬ್ಬ ಕನ್ನಡಿಗರಲ್ಲಿದೆ. ಇನ್ನೊಂದೆಡೆ ಅಧಿಕಾರ ಹೋದರೂ ಚಿಂತೆಯಿಲ್ಲ, ಆದರೆ ನೀರು ಬಿಡುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಕೊನೆಯಲ್ಲಿ ತನ್ನ ಹೈಕಮಾಂಡಿನ ಮಾತು ಮೀರದೇ ನೀರು ಬಿಡುತ್ತಾ, ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೆಂಗಳೂರಿನಲ್ಲಾದ ಕಾನೂನು ಸುವ್ಯವಸ್ಥೆಯ ಲೋಪವನ್ನು ಕನ್ನಡಪರ ಸಂಘಟನೆಗಳ ತಲೆಗೆ ಕಟ್ಟುವ ಹೀನ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.
Discussion about this post