ಮೈಸೂರು, ಸೆ.20: ಈ ಬಾರಿ ಮೈಸೂರು ದಸರಾದಲ್ಲಿ ಗೋಲ್ಡನ್ ಚಾರಿಯೆಟ್ ರೈಲಿನ ಮೂಲಕ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಲಾಗುವುದು.
ದಸರಾ ಸಂದರ್ಭದಲ್ಲಿ ಐದು ದಿನಗಳ ಕಾಲ ಗೋಲ್ಡನ್ ಚಾರಿಯಟ್ ರೈಲಿನ ಪ್ರವಾಸವನ್ನು ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ತಿಳಿಸಿದರು.
ಅ.1,3,5,7 ಹಾಗೂ 9ರಂದು ಗೋಲ್ಡನ್ ಚಾರಿಯೆಟ್ ರೈಲಿನಲ್ಲಿ ಮೈಸೂರು ವಿಶೇಷ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಗೋಲ್ಡನ್ ಚಾರಿಯೆಟ್ ರೈಲಿಗೆ ನೋಂದಣಿ ಮಾಡಿಕೊಳ್ಳುವ ಪ್ರವಾಸಿಗರಿಗೆ ನಿಗದಿತ ದಿನದಂದು ಬೆಂಗಳೂರಿನ ತಾಜ್ವೆಸ್ಟ್ಎಂಡ್ ಹೋಟೆಲಿನಲ್ಲಿ ಉಪಹಾರ ನೀಡಿ ಯಶವಂತಪುರ ರೈಲು ನಿಲ್ದಾಣಕ್ಕೆ ಕರೆತರಲಾಗುತ್ತದೆ.
ಪಂಚತಾರಾ ಮಾದರಿಯ ರೆಸ್ಟೋರೆಂಟ್, ಜಿಮ್, ಬಿಸಿನೆಸ್ ಸೆಂಟರ್ ಸೌಲಭ್ಯವಿರುವ ಈ ರೈಲಿನಲ್ಲಿ ಪ್ರವಾಸಿಗರನ್ನು ಕರೆತಂದು ಶ್ರೀರಂಗಪಟ್ಟಣದಲ್ಲಿ ಹೆರಿಟೇಜ್ ವಾಕ್ ಮಾಡಿಸಿ ನಂತರ ಮೈಸೂರಿಗೆ ಕರೆತಂದು ಲಲಿತಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಲ್ಲಿಂದ ಜಯಲಕ್ಷ್ಮಿ ವಿಲಾಸ, ಅಂಬಾವಿಲಾಸ, ಅರಮನೆಯಲ್ಲಿರುವ ಆನೆಗಳನ್ನು ತೋರಿಸಿ ರಾತ್ರಿ ಊಟ ಹಾಗೂ ವಾಸ್ತವ್ಯದ ವ್ಯವಸ್ಥೆ ಮಾಡಿ ಮರು ದಿನ ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದು ಹೇಳಿದರು.
ಪ್ರತಿ ಪ್ರವಾಸಿಗರಿಗೆ 30 ಸಾವಿರ ರೂ.ಗಳನ್ನು ನಿಗದಿ ಮಾಡಲಾಗಿದೆ ಎಂದು ಕುಮಾರ್ ಪುಷ್ಕರ್ ತಿಳಿಸಿದರು.















