ಮಡಿಕೇರಿ ಅ.29 : ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಕ್ರಮವನ್ನು ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ತೀವ್ರವಾಗಿ ಖಂಡಿಸಿದ್ದು, ಜಯಂತಿ ಆಚರಣೆಗೆ ಅವಕಾಶ ನೀಡುವುದಿಲ್ಲವೆಂದು ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷರಾದ ಅಭಿಮನ್ಯು ಕುಮಾರ್, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿ ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸದಂತೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ವಿರೋಧಗಳ ನಡುವೆಯೂ ಟಿಪ್ಪು ಜಯಂತಿ ಆಚರಿಸಿದರೆ ಯಾವುದೇ ಕಾರಣಕ್ಕೂ ಹೊರ ಜಿಲ್ಲೆ, ಹೊರ ರಾಜ್ಯದವರಿಗೆ ಕೊಡಗು ಜಿಲ್ಲಾ ಕೇಂದ್ರ ಸ್ಥಾನ ಮತ್ತು ತಾಲ್ಲೂಕು ಕೇಂದ್ರಗಳಿಗೆ ಬರಲು ಅವಕಾಶ ನೀಡಬಾರದೆಂದು ಒತ್ತಾಯಿಸಿದರು. ಟಿಪ್ಪು ಜಯಂತಿಯಿಂದ ಜಿಲ್ಲೆಯ ಜನತೆಯ ಆತ್ಮಾಭಿಮಾನಕ್ಕೆ ಧಕ್ಕೆಯಾಗಿದೆ. ಹೀಗೆಂದು ನಾವು ಜಯಂತಿಯ ವಿರುದ್ಧ ಕಲ್ಲು, ದೊಣ್ಣೆಯೊಂದಿಗೆ ಹೋರಾಟ ನಡೆಸುವುದಿಲ್ಲ. ಬದಲಿಗೆ ಹೋರಾಟ ಶಾಂತಿಯುತವಾಗಿರುತ್ತದೆ ಎಂದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಜಿಲ್ಲೆಯ ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷ ಹುಟ್ಟು ಹಾಕುವ ಯತ್ನವಾಗಿದೆ ಎಂದು ಆರೋಪಿಸಿದರು.
ಪ್ರಸ್ತುತ ಟಿಪ್ಪು ಜಯಂತಿ ಪರವಾಗಿ ಮಾತನಾಡುತ್ತಿರುವ ಮೂಲಭೂತವಾದಿಗಳು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನೆಂದು ಹೇಳಿಕೊಳ್ಳುತ್ತಾರೆ. ಆದರೆ, ಟಿಪ್ಪು ಆಳ್ವಿಕೆಯ ಅವಧಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯ ಇನ್ನೂ ಮೊಳೆತಿರಲಿಲ್ಲ. ಟಿಪ್ಪು ತನ್ನ ಮಕ್ಕಳನ್ನು ತನ್ನ ರಾಜ್ಯ ಮತ್ತು ತನ್ನನ್ನು ಉಳಿಸಿಕೊಳ್ಳುವ ಉದ್ದೇಶದಿಂದಷ್ಟೆ ಬ್ರಿಟೀಷರ ಬಳಿ ಒತ್ತೆಯಾಗಿಟ್ಟಿದ್ದ. ಇಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಟಿಪ್ಪು ಬಗ್ಗೆ ತಪ್ಪು ಸಂದೇಶಗಳನ್ನಷ್ಟೆ ನೀಡಲಾಗುತ್ತಿದೆಯೆಂದು ಅಭಿಮನ್ಯು ಕುಮಾರ್ ಟೀಕಿಸಿದರು.
ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಬೇಡವೆಂದು ಜಿಲ್ಲೆಯ ಮೂರು ತಾಲ್ಲೂಕು ಪಂಚಾಯ್ತಿಗಳಲ್ಲಿ ನಿರ್ಣಯವನ್ನು ಕೈಗೊಳ್ಳಲಾಗುತ್ತಿದೆಯೆಂದು ತಿಳಿಸಿದ ಅಭಿಮನ್ಯು ಕುಮಾರ್, ಜಿಲ್ಲೆಯ ಶಾಸಕರನ್ನು ಒಳಗೊಂಡಂತೆ ಸಾಕಷ್ಟು ಜನಪ್ರತಿನಿಧಿಗಳು ಟಿಪ್ಪು ಜಯಂತಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಜಿಲ್ಲಾಡಳಿತ ಟಿಪ್ಪು ಜಯಂತಿಯನ್ನು ಕೇವಲ ಒಂದು ಕೋಮಿಗೆ ಸೀಮಿತವಾಗಿ ಆಚರಿಸಲು ಸಾಧ್ಯವಿಲ್ಲ. ವಿರೋಧದ ನಡುವೆ ಜಯಂತಿ ಆಚರಣೆಗೆ ಮುಂದಾದಲ್ಲಿ ಅದನ್ನು ಜಿಲ್ಲೆಯ ಶೇ.80 ರಷ್ಟು ಮಂದಿ ಒಗ್ಗೂಡಿ ವಿರೋಧಿಸುವುದಾಗಿ ತಿಳಿಸಿದರು.
ಸಮಿತಿ ಸದಸ್ಯ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಿಸಬೇಕೆಂದು ಯಾರೂ ಕೇಳಿಲ್ಲ. ಹೀಗಿದ್ದೂ ಜಯಂತಿ ಆಚರಿಸುವುದು ಬೇಡವೆನ್ನುವುದು ತಮ್ಮ ಆಗ್ರಹ. ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಅವಧಿಯಲ್ಲಿ ಕೊಡಗಿನಲ್ಲಿ ನಡೆಸಿರುವ ದುಷ್ಕೃತ್ಯಗಳಿಗೆ, ಮತಾಂತರಗಳಿಗೆ ಇಂದಿಗೂ ಸಾಕ್ಷ್ಯಗಳಿವೆ. ಇಂತಹ ಇತಿಹಾಸವನ್ನು ತಿರುಚುವ ಕೆಲಸ ತಮ್ಮದಲ್ಲವೆಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ವಿರೋಧ ಇರುವ ಬಗ್ಗೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಬೇಕಾಗಿದೆ. ಟಿಪ್ಪು ಜಯಂತಿಯ ಮೂಲಕ ಸಮಾಜವನ್ನು ಒಡೆಯುವ ಪ್ರಯತ್ನ ಸಾಗಿದೆ ಎಂದು ರವಿಕುಶಾಲಪ್ಪ ಆರೋಪಿಸಿದರು.
ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಕಲಾವತಿ, ಪೂಣರ್ಿಮಾ ಗೋಪಾಲ್, ಮುರುಳಿ ಕರುಂಬಯ್ಯ ಉಪಸ್ಥಿತರಿದ್ದರು.
Discussion about this post