Read - < 1 minute
ಬೆಂಗಳೂರು, ಸೆ.19: ನಿಗಮ ಮಂಡಳಿಗಳ ನೇಮಕಾತಿ, ಸಚಿವ ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಪದಾಧಿಕಾರಿಗಳ ನೇಮಕಾತಿಯ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.22ರಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಜತೆ ದೆಹಲಿಗೆ ತೆರಳಲಿದ್ದಾರೆ.
ಕೆ.ಜೆ.ಜಾರ್ಜ್ ಗೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿರುವುದರಿಂದ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ತಯಾರಿ ನಡೆದಿದೆ. ಅದೇ ರೀತಿ 100ಕ್ಕೂ ನಿಗಮ ಮಂಡಳಿಗಳಿಗೆ ಅಧ್ಯಕ್ಷ -ಉಪಾಧ್ಯಕ್ಷರನ್ನು ನೇಮಿಸಲು ಪಟ್ಟಿ ಸಿದ್ಧಗೊಂಡಿದ್ದು, ಅದಕ್ಕೆ ಹೈಕಮಾಂಡ್ ಅನುಮತಿ ಪಡೆಯಲು ಸಿಎಂ ತೆರಳುತ್ತಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಬಾರಿ ನಿಗಮ ಮಂಡಳಿ ನೇಮಕಾತಿ ವೇಳೆ 93ಮಂದಿಯ ಪೈಕಿ ಸುಮಾರು 20ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ಮೊದಲ ಅವಧಿಗೆ ನೇಮಕವಾದ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವಧಿ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಎರಡನೇ ಅವಧಿಗೆ ನೇಮಕಾತಿ ಮಾಡಲು ಪಟ್ಟಿ ಸಿದ್ದಗೊಳಿಸಲಾಗಿತ್ತು.
ರಾಜಕೀಯ ಒತ್ತಡಗಳಿಗೆ ಮಣಿದು ಶಾಸಕರಿಗೆ ಮತ್ತು ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಆದರೆ, ಇದಕ್ಕೆ ಹೈಕಮಾಂಡ್ ಅನುಮತಿ ನೀಡಿರಲಿಲ್ಲ.
ಶೋಷಿತ ವರ್ಗಗಳಿಗೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಿ ಪರಿಷ್ಕರಿಸುವಂತೆ ಹೈಕಮಾಂಡ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಿ ಪರಿಷ್ಕರಣೆಗೊಂಡಿದ್ದು, ಅದರ ಅಂಗೀಕಾರ ಪಡೆದುಕೊಳ್ಳಲು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ.
ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆ:
2018ರ ವಿಧಾನಸಭೆ ಚುನಾವಣೆಗೆ ತಯಾರಾಗಲು ಕೆಪಿಸಿಸಿಯನ್ನು ಪುನಾರಚಿಸಲಾಗುತ್ತಿದೆ. ಈ ಬಾರಿ ಯುವಕರಿಗೆ ಮತ್ತು ಶೋಷಿತ ಸಮುದಾಯಗಳಿಗೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಹೆಚ್ಚಿನ ಆದ್ಯತೆ ಕೊಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಹುತೇಕ ಜಿಲ್ಲಾಧ್ಯಕ್ಷರನ್ನು ಕೂಡ ಬದಲಾವಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಜತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ವಿರೋಧಪಕ್ಷಗಳು ರಾಜ್ಯದಲ್ಲಿ ಹೆಚ್ಚು ಅಪಪ್ರಚಾರದಲ್ಲಿ ತೊಡಗಿದ್ದು. ಅದಕ್ಕೆ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ವಿಫಲವಾಗುತ್ತಿದೆ. ಕಾಂಗ್ರೆಸ್ ಗೆ ಸುಮಾರು 20ಕ್ಕೂ ಹೆಚ್ಚು ಮಂದಿ ವಕ್ತಾರರನ್ನು ನೇಮಿಸಲಾಗಿದೆ. ಆದರೆ, ಅದರಲ್ಲಿ ಬಹುತೇಕ ಮಂದಿ ಗಂಭೀರ ಸಂದರ್ಭದಲ್ಲಿ ಪಕ್ಷವನ್ನು ಸಮರ್ಏಇ ಸಿಕೊಳ್ಳಲು ವಿಫಲರಾಗಿದ್ದಾರೆ.
ಕೆಲವರು ಹೆಸರಿಗೆ ಮಾತ್ರ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನಪಡೆದು ಸ್ವ ಹಿತಾಸಕ್ತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಅಂತಹವರನ್ನು ಬದಲಾವಣೆ ಮಾಡಿ ಪಕ್ಷಕ್ಕಾಗಿ ಬದ್ಧತೆಯಿಂದ ದುಡಿಯುವವರನ್ನು ಗುರುತಿಸಲು ಪದಾಧಿಕಾರಿಗಳನ್ನು ಪರಿಷ್ಕರಿಸಲಾಗುತ್ತಿದೆ.
Discussion about this post