ಬೆಂಗಳೂರ: ಸೆ:17; ಕಾವೇರಿ ಗಲಭೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಪಾತ್ರವಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಡಿವಿ ಸದಾನಂದಗೌಡ ಇಂತಹ ಬಾಲಿಶ ಹೇಳಿಕೆಯನ್ನು ಗೃಹ ಸಚಿವ ಪರಮೇಶ್ವರ ನೀಡಬಾರದು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗಂಗೇನಹಳ್ಳಿ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿ ಇರುವ ಪರಮೇಶ್ವರ ಹೇಳಿಕೆ ಸರಿಯಲ್ಲ, ನಿರ್ದಿಷ್ಟ ದಾಖಲೆ ಇದ್ದರೆ ತಪ್ಪಿತಸ್ಥ ವ್ಯಕ್ತಿ ಗಳ ಮೇಲೆ ಕ್ರಮ ತೆಗೆದುಕೊಳ್ಳಲಿ. ತಮ್ಮ ಲೋಪವನ್ನು ಮುಚ್ಚಿಕೊಳ್ಳಲು ಇಂತಹ ಮಾತು ಆಡೋದು ಬಿಡಬೇಕು..
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿದೆ. ಇದನ್ನು ಮುಚ್ಚಿ ಕೊಳ್ಳಲು ಪ್ರಧಾನಿ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಪ್ರತ್ಯಾರೋಪ ಮಾಡಿದರು.
ಇಂತಹ ರಾಜಕಾರಣವನ್ನು ದೇಶದ ಜನ ಒಪ್ಪಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಪರಮೇಶ್ವರ ಗೃಹ ಸಚಿವ ಸ್ಥಾನದಲ್ಲಿ ಇರುವ ಅರ್ಹತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಡಾ.ಜಿ.ಪರಮೇಶ್ವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಗಲಭೆಯಲ್ಲಿ ಆರ್ ಎಸ್ ಎಸ್ ಕೈವಾಡವಿದೆ ಎಂಬ ಪರಮೇಶ್ವರ್ ಹೇಳಿಕೆಗೆ ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರ್ ಎಸ್ ಎಸ್ ಬಗ್ಗೆ ಹೇಳಿಕೆ ನೀಡಿ ಯಾವ ಸ್ಥಿತಿ ಅನುಭವಿಸುತ್ತಿದ್ದಾರೆ ಎಂಬುದು ಗೊತ್ತಿರಲಿ, ಆರ್ ಎಸ್ ಎಸ್ ಕೈವಾಡವಿರುವ ಬಗ್ಗೆ ದಾಖಲೆಗಳಿದ್ದರೆ ತೋರಿಸಲಿ ಇಲ್ಲ ರಕ್ಷಣ ಕ್ಷಮೆಯಾಚಿಸಲಿ ಎಂದು ಒತ್ತಾಯಿಸಿದ್ದಾರೆ.
Discussion about this post