ನವದೆಹಲಿ, ಸೆ.16: ಭಾರತಕ್ಕೆ ತಲೆನೋವಾಗಿ ಪರಿಣಮಿಸಿರುವ ಪಾಕಿಸ್ಥಾನಕ್ಕೆ ಅವಕಾಶ ಸಿಕ್ಕಾಗಲೆಲ್ಲಾ ತಿರುಗೇಟು ನೀಡುವ ಭಾರತ, ಪಾಕ್ ನಿಂದ ಪ್ರತ್ಯೇಕತೆ ಬಯಸುತ್ತಿರುವ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳಿಗೆ ರಾಜಕೀಯ ಆಶ್ರಯ ನೀಡಲು ಚಿಂತಿಸಿದೆ. ಈ ಮೂಲಕ, ಪಾಕಿಸ್ಥಾನಕ್ಕೆ ತಿರುಗೇಟು ನೀಡಲು ಪ್ರಧಾನಿ ಮೋದಿ ಚಿಂತಿಸಿದ್ದಾರೆ.
ಬಲೂಚಿಸ್ತಾನದ ಪ್ರತ್ಯೇಕತವಾದಿ ಮುಖಂಡರು ಮನವಿ ಮಾಡಿಕೊಂಡರೆ ಕೆಲವೇ ವಾರಗಳಲ್ಲಿ ಅವರಿಗೆ ಕೇಂದ್ರ ಸರ್ಕಾರ ರಾಜಕೀಯ ಆಶ್ರಯ ಒದಗಿಸಲಿದೆಯಂತೆ. ಭಾರತದ ಈ ನಿರ್ಧಾರವನ್ನು ಬಲೂಚಿಸ್ತಾನದ ಪ್ರಮುಖ ನೇತಾರ ಬ್ರಹ್ಮಾಗಡ್ ಬುಗ್ತಿ ಸ್ವಾಗತಿಸಿದ್ದು ಇದೊಂದು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಬಲೂಚಿಸ್ತಾನದ ಮುಖಂಡರಿಗೆ ಭಾರತದಲ್ಲಿ ರಾಜಕೀಯ ಆಶ್ರಯ ನೀಡಲು ಸರ್ಕಾರ ಬದ್ಧವಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸುಮಾರು ವರ್ಷಗಳಿಂದ ಸ್ವಾತಂತ್ರ್ಯ ಬಯಸುತ್ತಿರುವ ಬಲೂಚಿಸ್ತಾನಿಯರು ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಮೋದಿ ಪ್ರಧಾನಿಯಾದ ನಂತರ, ಪಾಕಿಸ್ಥಾನಕ್ಕೆ ತಿರುಗೇಟು ನೀಡುವ ತಂತ್ರಗಾರಿಕೆಯನ್ನು ಮಾಡುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಕಳೆದ ತಿಂಗಳ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಲೂಚಿಸ್ತಾನದ ವಿಚಾರ ಪ್ರಸ್ತಾಪ ಮಾಡಿದ ಮೇಲೆ ಬಲೂಚಿ ಹೋರಾಟಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ.















