Read - < 1 minute
ಹುಬ್ಬಳ್ಳಿ, ಸೆ.30: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಧಾರವಾಡ ಜಿಲ್ಲಾ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಶೋಷಿತ ಸಮುದಾಯಗಳಿಗೆ ನೆರವು ಜಾಸ್ತಿ. ಈವರೆಗೂ ಕಾಂಗ್ರೆಸ್ ಸರ್ಕಾರಗಳು ಕುಡಿತ ಚಟ ಹತ್ತಿಸಿ ಮತಗಳನ್ನು ಪಡೆಯುತ್ತಿದ್ರು. ಈಗ ನಾವು ಹಣ, ಹೆಂಡ ನೀಡಿ ನಾವು ಮತಗಳನ್ನು ಪಡೆಯುವದಿಲ್ಲ ಎಂದರು.
ಯಡಿಯೂರಪ್ಪಗೂ, ನಮಗೂ ಸಣ್ಣಪುಟ್ಟದ್ದು ಆಗ್ತಾನೆ ಇರುತ್ತೆ. ಅದು ಸದ್ಯದಲ್ಲೇ ನಿವಾರಣೆಯಾಗುತ್ತೆ. ನಮಗೆ ಆ ಜಾತಿ ಈ ಜಾತಿ ಇಲ್ಲ. ತುಳಿತಕ್ಕೆ ಒಳಗಾದವರಿಗಾಗಿ ರಾಯಣ್ಣ ಬ್ರಿಗೇಡ್ ಕೆಲಸ ಮಾಡುತ್ತೆ. ಬೆಂಗಳೂರಿನ ಸಮಾವೇಶಕ್ಕೆ ಪ್ರಧಾನಿ ಮೋದಿಯವರನ್ನು ಕರೆತರುತ್ತೇವೆ ಎಂದರು.
ಇಡೀ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಮಾತಾಡ್ತಿದ್ದಾರೆ. ಆಗ ಸ್ವಾತಂತ್ರ್ಯಕ್ಕಾಗಿ ಚೆನ್ನಮ್ಮನ ಜತೆ ರಾಯಣ್ಣ ಕೂಡ ಬ್ರಿಟಿಷ್ ರನ್ನ ದೇಶದಿಂದ ಹೊರಗೆ ಅಟ್ಟೋಕೆ ಹೋರಾಡಿದ್ದ. ಈಗ ಹಿಂದುಳಿದವರು ಹಾಗೂ ದಲಿತರ ನ್ಯಾಯಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕೆಲಸ ಮಾಡುತ್ತೆ. ಸಂಗೊಳ್ಳಿ ರಾಯಣ್ಣ ಈಗ ಬರೀ 2 ತಿಂಗಳ ಮಗು. ಹಾವೇರಿ ಸುತ್ತ ಈಗ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಈವರೆಗೂ ಎಲ್ಲ ಸರ್ಕಾರಗಳಿಗೂ ಈ ಸಮುದಾಯಗಳು ಮತ ಹಾಕಿವೆ.
ಈ ಬಾರಿ ರಾಯಣ್ಣ ಬ್ರಿಗೇಡ್ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತೇವೆ. ಮುಂದಿನ ಬಿಜೆಪಿ ಸರ್ಕಾರದಲ್ಲಿ ಶೋಷಿತ ಸಮುದಾಯಗಳಿಗೆ ಕೆಲಸ ಮಾಡುತ್ತೇವೆ. ಯಡಿಯೂರಪ್ಪ ಕೂಡ ರಾಯಣ್ಣ ಬ್ರಿಗೇಡ್ ಗೆ ಬೆಂಬಲ ಕೊಡ್ತಾರೆ. ಪ್ರತಿಯೊಂದು ಸಮುದಾಯಕ್ಕೂ ನೆರವು ನೀಡಲಾಗಿದೆ. ಆ ಎಲ್ಲ ಸಮುದಾಯಗಳೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಸೇರಿ ಮಠಗಳ ಉದ್ಧಾರಕ್ಕೂ ಬಿಜೆಪಿ ಸರ್ಕಾರ ಹಣ ನೀಡಿದೆ . ಕಾಗಿನೆಲೆಗೆ ಪ್ರತಿಷ್ಠಾನ ಮಾಡಿ 25 ಕೋಟಿ ರೂ. ಅನುದಾನ ನೀಡಿದ್ದೇವೆ.
ಬಿಜೆಪಿ ಸರ್ಕಾರ ತರಲು ಎಲ್ಲರೂ ಶ್ರಮಿಸುತ್ತೇವೆ. 10 ಸಾವಿರ ಕೋಟಿ ರೂ.ಯನ್ನ ನಾವು ಅಧಿಕಾರಕ್ಕೆ ಬಂದರೆ ನೆರವು ನೀಡುತ್ತೇವೆ. ಪ್ರತಿ ಸಮುದಾಯಗಳೂ ಸ್ವಾಭಿಮಾನದಿಂದ ಬದುಕಬೇಕು. ಸಿದ್ದರಾಮಯ್ಯ ಈ ಸಾರಿ ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ ತೆಗೆದಿರಿಸಬೇಕು. ಹಾಗಿದ್ರೇ ಅವರೇ ಮುಖ್ಯಮಂತ್ರಿ ಆಗಲಿ. ಇಲ್ಲದಿದ್ದರೆ ನಾವು ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತು ಎಸೆಯುತ್ತೇವೆ ಎಂದರು.
ಇಡೀ ವಿಶ್ವದಲ್ಲಿ ಇವತ್ತು ಮಹತ್ವದ ದಿನ. ಮೊನ್ನೆ ಉಗ್ರರು ಹೇಡಿಗಳಂತೆ ರಾತ್ರಿ ಕದ್ದು ನಮ್ಮ ಸೈನಿಕರನ್ನು ಹತ್ಯೆ ಮಾಡಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 38ಕ್ಕೂ ಹೆಚ್ಚು ಉಗ್ರರನ್ನ ಮಟ್ಟ ಹಾಕಿದ್ದಾರೆ ಎಂದರು.
Discussion about this post