Read - < 1 minute
ಶಿವಮೊಗ್ಗ, ಸೆ.14: ಪರಿಶಿಷ್ಟ ಪಂಗಡದವರು ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆನ್ನುವ ವಿಚಾರಧಾರೆಯ ಮೇಲೆ ನಿಂತಿರುವ ಬಿಜೆಪಿಯ ತತ್ವಗಳನ್ನು ಒಪ್ಪಿಕೊಂಡಿದ್ದು, ಪಕ್ಷವನ್ನು ಬೆಳೆಸುವತ್ತ ಕೆಲಸ ಮಾಡಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಕರೆ ನೀಡಿದ್ದಾರೆ.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪರಿಶಿಷ್ಟ ಪಂಗಡ ಮೋರ್ಚಾ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಕಾರಿ ಸಮಿತಿಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದವರಾಗಿದ್ದು, ವಾಲ್ಮೀಕಿ ರಾಮಾಯಣವನ್ನು ಬರೆಯುವ ಮೂಲಕ ಎಲ್ಲಾ ಜನಾಂಗದವರು ಒಟ್ಟಿಗೆ ಬಾಳುವಂತೆ ಮಾಡಿದ್ದಾರೆ. ಈ ಸಮಾಜದವರು ವಿದ್ಯಾವಂತರಾಗುವ ಮೂಲಕ ಸಮಾಜಮುಖಿಗಳಾಗಿ ಸ್ವಾಭಿಮಾನ ಬದುಕನ್ನು ಕಾಣಬೇಕೆಂದರು.
ರಾಜ್ಯ ಸರ್ಕಾರ ಕಳೆದ ವರ್ಷ ಬಜೆಟ್ನಲ್ಲಿ ಎಸ್ಟಿ ಸಮುದಾಯಕ್ಕೆ ೧೬ ಸಾವಿರ ಕೋಟಿ ರೂ.ನ್ನು ಮೀಸಲಿಟ್ಟಿದ್ದರೂ ಸಹ ಕೇವಲ ೭ ಸಾವಿರ ಕೋಟಿ ರೂ. ಮಾತ್ರ ಖರ್ಚು ಮಾಡಿದೆ. ಉಳಿದ ಶೇ. ೬೦ ರಷ್ಟು ಹಣವನ್ನು ಹಾಗೆಯೇ ಉಳಿಸಿಕೊಂಡಿದೆ. ಈ ಜನಾಂಗದವರು ಸರ್ಕಾರಿ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಹಿಂದೆ ಬೀಳಬಾರದು. ಸಂಬಂಧದ ಅಧಿಕಾರಿಗಳ ಕಚೇರಿಗೆ ತೆರಳಿ ಸೌಲಭ್ಯ ಪಡೆದುಕೊಳ್ಳಬೇಕೆಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಎಲ್ಲಾ ಧರ್ಮದವರಿಗೂ ಸಾಕಷ್ಟು ನೆರವನ್ನು ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಎಸ್ಟಿ ಸಮುದಾಯಕ್ಕೆ ಯಾವ ನೆರವನ್ನೂ ನೀಡಿಲ್ಲ. ಇದನ್ನು ಈ ಸಮಾಜದವರು ಅರಿತುಕೊಂಡು ಜನಾಂಗದ ಅಭಿವೃದ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ರುದ್ರೇಗೌಡ ವಹಿಸಿದ್ದರು. ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಬಿ. ಶಿವಪ್ಪ ಮೋರ್ಚಾದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮಾಜಿ ಎಂಎಲ್ಸಿ ಸಿದ್ರಾಮಣ್ಣ, ಮುಖಂಡರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ, ಎಸ್.ಬಿ. ಪಾಟೀಲ್ ಮೊದಲಾದವರು ಉಸ್ಥಿತರಿದ್ದರು.
Discussion about this post