Read - < 1 minute
ನವದೆಹಲಿ, ಅ.15: ಮಾಜಿ ರಾಷ್ಟ್ರಪತಿ, ಭಾರತ ರತ್ನ ದಿವಂಗತ ಎ.ಪಿ.ಜೆ.ಅಬ್ದುಲ್ ಕಲಾಂ ಅವರ 85ನೇ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕಲಾಂ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪ್ರತಿಯೊಬ್ಬ ಭಾರತೀಯನ ಆಲೋಚನೆಯನ್ನು ತಮ್ಮೆಡೆಗೆ ಸೆಳೆದಿದ್ದ ನಮ್ಮ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇನೆಂದು ಹೇಳಿದ್ದಾರೆ.
ಎಪಿಜೆ ಅಬ್ದುಲ್ ಕಲಾಂ ಅವರು 2002ರ ಜುಲೈ 25ರಿಂದ 2007ರ ಜುಲೈ 25ರ ವರೆಗೂ ಭಾರತದ 11ನೇ ರಾಷ್ಟ್ರಪತಿಗಳಾಗಿದ್ದರು. 1997ರಲ್ಲಿ ಭಾರತ ಸರ್ಕಾರ ಕಲಾಂ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಕಲಾಂ ಅವರು ರಾಷ್ಟ್ರಪತಿ ಆಗುವುದಕ್ಕೂ ಮುನ್ನ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಎ) ಮತ್ತು ಇಸ್ರೋದಲ್ಲಿ ವೈಮಾನಿಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿದ ಅವರನ್ನು ಮಿಸೈಲ್ ಮ್ಯಾನ್ ಆಫ್ ಇಂಡಿಯಾ (ಕ್ಷಿಪಣಿಗಳ ಜನಕ) ಎಂದೇ ಕರೆಯಲಾಗುತ್ತದೆ. ಕಲಾಂ ಸ್ವತ: ಹಲವಾರು ಕೃತಿಗಳನ್ನು ರಚಿಸಿದ್ದಾರೆ. `ವಿಂಗ್ಸ್ ಆಫ್ ಫೈರ್’ ಎಂಬುದು ಇವರ ಆತ್ಮಕಥೆ. ಇವರು ತಮ್ಮ `ಇಂಡಿಯಾ ಮೈ ಡ್ರೀಮ್’, `ಇಂಡಿಯಾ 2020′ ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ. `ಮೈ ಜರ್ನಿ’, `ಟಾರ್ಗೆಟ್ ತ್ರಿ ಬಿಲಿಯನ್’- ಇವು ಇವರ ಪ್ರಮುಖ ಕೃತಿಗಳು. ಅಪ್ರತಿಮ ದೇಶಭಕ್ತರೂ ಉತ್ತಮ ವಾಗ್ಮಿಯೂ ಆಗಿರುವ ಕಲಾಂ, ಸಹಸ್ರ ಜನತೆಯ ವಿಶೇಷವಾಗಿ ಮಕ್ಕಳ ಸ್ಪೂರ್ತಿ. ದೇಶದ ಹೆಮ್ಮೆ.
Discussion about this post