ಬೆಂಗಳೂರು, ಅ.6: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಡುವೆ ಹೊಗೆಯಾಡುತ್ತಿದ್ದ ಭಿನ್ನಮತ ಬಹುತೇಕ ಶಮನಗೊಂಡಿದ್ದು, ಇಂದು ಬೆಳಗ್ಗೆ ಬಿಎಸ್ವೈ ಮನೆಯಲ್ಲಿ ನಡೆದ ಉಪಹಾರ ಕೂಟದಲ್ಲಿ ಈಶ್ವರಪ್ಪ ಭಾಗಿಯಾದರು.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ಲಾಲ್ ಜಿ ಈ ನಾಯಕರ ನಡುವಿನ ಭಿನ್ನಮತಕ್ಕೆ ಪೂರ್ಣ ವಿರಾಮ ಹಾಕಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಇದೇ ವೇಳೆ ರಾಜ್ಯ ರಾಜಕೀಯ ಬೆಳವಣಿಗೆಗಳು ಕುರಿತಾಗಿ ಸುಧೀರ್ಘ ಚರ್ಚೆ ನಡೆಸಲಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ತಯಾರಿ ಕುರಿತಾಗಿಯೂ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಇದೇ ವೇಳೆ ಮುಂಬರುವ ಚುನಾವಣೆಯ ದೃಷ್ಠಿಯಿಂದ ರಾಜ್ಯ ನಾಯಕರೆಲ್ಲಾ ಒಂದೇ ದೋಣಿಯಲ್ಲಿ ಪಯಣಿಸಬೇಕು. ಎಲ್ಲರೂ ಒಟ್ಟಾಗಿ ನಡೆದಾಗ ಚುನಾವಣೆಯಲ್ಲಿ ಯಶಸ್ಸು ಸಾಧ್ಯ ಎಂಬ ಸಂದೇಶವನ್ನು ವರಿಷ್ಟರು ನೀಡಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿಯೊಳಗಿನ ಇಂದಿನ ಬೆಳವಣಿಗೆಯಿಂದ ರಾಜ್ಯ ಬಿಜೆಪಿಯಲ್ಲಿ ಮೂಡಿದ್ದ ಅಸಮಾಧಾನದ ಹೊಗೆ ಶಾಂತವಾಗಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಸೋಲಿಸುವ ಏಕಮಾತ್ರ ಗುರಿಯನ್ನು ಪಕ್ಷ ಹೊಂದಿದೆ ಎಂದು ವರದಿಯಾಗಿದೆ.
ಇಂದಿನ ಉಪಹಾರ ಕೂಟದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ ಲಾಲ್, ಸಹ ಕಾರ್ಯದರ್ಶಿ ಅರುಣ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ. ರವಿ ಮತ್ತಿತರರು ಭಾಗವಹಿಸಿದ್ದರು.
Discussion about this post