Read - < 1 minute
ಉರಿ,ಸೆ.21: ಉರಿ ವಲಯದಲ್ಲಿನ ಸೇನಾ ನೆಲೆಗೆ ನುಗ್ಗಿ ದಾಳಿ ನಡೆಸಿದ್ದ ಪಾಕಿಸ್ತಾನ ಮೂಲದ ಉಗ್ರರು ಭಾರತೀಯ ಯೋಧರನ್ನು ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಯೊಳಗೆ ಕೂಡಿಹಾಕಿ ಸಜೀವ ದಹನ ಮಾಡಿ ಹೇಡಿಗಳಂತೆ ಕ್ರೌರ್ಯ ಮೆರೆದಿದ್ದಾರೆ. ಸೈನಿಕರು ಹೊರಬರದಂತೆ ಕೋಣೆಗಳನ್ನು ಬೋಲ್ಟ್ಗಳಿಂದ ಭದ್ರಪಡಿಸಿದ್ದರು.
ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಗೆ ಸಮೀಪವಿರುವ ಸೇನಾ ನೆಲೆಯ ಬಗ್ಗೆ ಚೆನ್ನಾಗಿ ಬಲ್ಲವರಂತೆ ಪ್ರವೇಶಿಸಿದ್ದ ಉಗ್ರರಿಗೆ ತಮ್ಮ ಗುರಿಗಳ ಬಗ್ಗೆ ಹೆಚ್ಚು ಜ್ಞಾನ ಉಳ್ಳವರಾಗಿದ್ದರು. ದಾಳಿಗೂ ಮುನ್ನ ಒಂದು ದಿನ ಪದಾತಿ ದಳದ ಪ್ರಧಾನ ಕಚೇರಿ ಸಂಕೀರ್ಣದ ಮೇಲ್ಭಾಗದಲ್ಲಿನ ಪರ್ವತಗಳಲ್ಲಿ ಅಡಗಿದ್ದರು ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬೇಲಿ ತುಂಡರಿಸಿ ಒಳನುಗ್ಗಿದ್ದ ಉಗ್ರರು
18 ಭಾರತೀಯ ಯೋಧರನ್ನು ಬಲಿಪಡೆದು, 20ಕ್ಕೂ ಹೆಚ್ಚು ಸೈನಿಕರನ್ನು ಗಾಯಗೊಳಿಸಿದ ನಾಲ್ಕು ಭಯೋತ್ಪಾದಕರು ಲಷ್ಕರ್-ಇ-ತೋಯ್ಬಾ(ಎಲ್ಇಟಿ) ಉಗ್ರ ಸಂಘಟನೆಗೆ ಸೇರಿದವರು. ಹೆಚ್ಚು ಸೇನಾ ಕಣ್ಗಾವಲಿರುವ ಎರಡು ಕಡೆ ತಡೆ ಬೇಲಿಯನ್ನೇ ತುಂಡರಿಸಿ ಒಳನುಸುಳಿದ್ದರು ಎಂಬ ವಿಷಯ ತನಿಖೆಯಿಂದ ಗೊತ್ತಾಗಿದೆ.
ಉಗ್ರರಿಗೆ ಒಳಗಿನವರ ಸಹಕಾರ?
ಸೇನಾ ನೆಲೆಗೆ ಉಗ್ರರು ಸಲೀಸಾಗಿ ಪ್ರವೇಶಿಸಲು ಒಳಗಿನವರು ಸಹಕಾರ ನೀಡಿದ್ದಾರೆ ಎಂಬ ವಿಷಯವನ್ನು ತನಿಖಾಧಿಕಾರಿಗಳು ತಳ್ಳಿಹಾಕಿಲ್ಲ. ಅಂತೆಯೇ ಇದಕ್ಕೂ ಮೊದಲು ದಾಳಿಕೋರರು ಎರಡು ಕಡೆ ಪರಿಧಿಯ ತಂತಿಯನ್ನು ತುಂಡರಿಸಿದ್ದಾರೆ.
ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಯನ್ನು ಮುಚ್ಚಿದ ಬಳಿಕ ಇಬ್ಬರು ಉಗ್ರರು ಅಧಿಕಾರಿಗಳ ವಸತಿ ಪ್ರದೇಶದ ಕಡೆ ಧಾವಿಸಲು ಮುಂದಾದರು, ಆದರೆ ಮತ್ತಷ್ಟು ಹಾನಿ ಸಂಭವಿಸುವ ಮುನ್ನವೇ ಆ ಇಬ್ಬರೂ ದಾಳಿಕೋರರನ್ನು ಸದೆಬಡಿಯಲಾಯಿತು.
ಉಗ್ರರಿಂದ ಎರಡು ಜಿಪಿಎಸ್(ಭೂಮಂಡಲ ಸ್ಥಾನೀಕರಣ ವ್ಯವಸ್ಥೆ) ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವು ದಾಳಿಯಲ್ಲಿ ಹಾನಿಗೊಂಡಿವೆ. ಅಂತೆಯೇ ಈ ಸಾಧನಗನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ವಶಕ್ಕೆ ನೀಡಲಾಗಿದೆ.
ಒಂದು ದಿನ ಮುನ್ನವೇ ಪ್ರವೇಶ
ಸೆ.11ರಂದು ಪೂಂಚ್ನಲ್ಲಿ ಅದೇ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಯಿಂದ ಹೊರಬಿದ್ದ ಗುಂಪು ಎಲ್ಇಟಿಯಿಂದ ನಿಯೋಜಿತ ನಾಲ್ಕು ಉಗ್ರರು ದಾಳಿಗೂ ಒಂದು ದಿನ ಮುನ್ನವೇ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಿಂದ ಎಲ್ಒಸಿಯಲ್ಲಿ ಗಡಿ ನುಸುಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾಳಿಕೋರರು ಜೈಶ್-ಇ-ಮೊಹಮ್ಮದ್(ಜೆಇಎಂ), ಇಲ್ಲವೇ ಪಾಕಿಸ್ಥಾನ ಮೂಲದ ಭಯೋತ್ಪಾದನಾ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಸೇನಾ ಕಾಯರ್ಾಚರಣೆಗಳ ಪ್ರಧಾನ ನಿದರ್ೇಶಕ(ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ದಾಳಿ ಬಳಿಕ ಮಾಧ್ಯಮಗಳಿಕೆ ಹೇಳಿಕೆ ನೀಡಿದ್ದರು.
ನಾಲ್ಕು ವಿದೇಶಿ ಉಗ್ರರು ಪಾಕಿಸ್ಥಾನಿ ಮುದ್ರೆ ಇರುವ ಸಾಮಗ್ರಿಗಳನ್ನು ಇರಿಸಿಕೊಂಡಿದ್ದರು. ಅಲ್ಲದೇ ಪ್ರಾಥಮಿಕ ವರದಿಗಳ ಪ್ರಕಾರ ಉಗ್ರರು ಜೈಶ್-ಇ-ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದೂ ಸಿಂಗ್ ಹೇಳಿದ್ದರು.
ಟೆಂಟ್ಗಳಿಗೆ ಪೆಟ್ರೋಲಿಯಂ ಜೆಲ್ಲಿ, ಜಿಲೆಟಿನ್ನಿಂದ ಬೆಂಕಿ
ಉರಿ ಮತ್ತು ಪೂಂಚ್ನಲ್ಲಿ ದಾಳಿ ನಡೆಸಿದ ಉಭಯ ಉಗ್ರರ ಗುಂಪುಗಳು ಜಿಲೆಟಿನ್ ಮತ್ತು ಪೆಟ್ರೋಲಿಯಂ ಜೆಲ್ಲಿ ಮಿಶ್ರಿತ ಸಣ್ಣ ಪ್ಲಾಸ್ಟಿಕ್ ಬಾಟಲ್ಗಳನ್ನು ಹೊಂದಿದ್ದರು, ಇವುಗಳಿಂದಲೇ ಯೋಧರ ಡೇರಾಗಳಿಗೆ ಬೆಂಕಿ ಹಚ್ಚಿದ್ದಾರೆ.
ಉರಿಯಲ್ಲಿನ ಸೇನಾ ನೆಲೆ ಮೇಲೆ ಉಗ್ರರ ದಾಳಿ ಸಂಬಂಧ ರಾಷ್ಟ್ರೀಯ ತನಿಖಾ ತಂಡ ಮಂಗಳವಾರ ದೂರನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಪ್ರಕರಣದ ಮಾಹಿತಿ ಪಡೆದಿದ್ದ ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು.
Discussion about this post