ಶಿವಮೊಗ್ಗ: ಅ:24; ಕಾರ್ಯನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದ ಬೆಂಗಳೂರು ಮೂಲದ ದ್ವಿತೀಯ ಪಿಯು ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ಹೊರವಲಯದ ಸಕ್ರೆಬೈಲ್ನಲ್ಲಿ ಆರು ಮಂದಿ ದುಷ್ಕರ್ಮಿಗಳ ತಂಡ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಮಂದಿ ಕಾಮುಕರನ್ನು ಬಂಧಿಸಿದ್ದು , ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ.
ಶಿವಮೊಗ್ಗದ ಸುರುಭಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದೂರು ದಾಖಲಾಗಿದ್ದು, ಆರು ಮಂದಿ ದುಷ್ಕರ್ಮಿಗಳು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.
ಘಟನೆ ಹಿನ್ನೆಲೆ:
ಬೆಂಗಳೂರಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ವಿದ್ಯಾರ್ಥಿನಿ ಖಾಸಗಿ ಕಾರ್ಯನಿಮಿತ್ತ ರೈಲಿನಲ್ಲಿ ಶಿವಮೊಗ್ಗಕ್ಕೆ ತೆರಳಿದ್ದರು. ರೈಲ್ವೆ ನಿಲ್ದಾಣದಲ್ಲಿ ಆಟೋ ಹತ್ತಿದ ಆಕೆ ಸಹ್ಯಾದ್ರಿ ಕಾಲೇಜು ಬಳಿ ತೆರಳುವಂತೆ ಚಾಲಕ ಶಾರುಖ್ ಗೆ ಹೇಳಿದ್ದಳು.
ಸ್ವಲ್ಪ ದೂರ ಹೋದ ಬಳಿಕ ಇದೇ ಆಟೋದಲ್ಲಿ ಶಾರುಖ್ನ ಇಬ್ಬರು ಸ್ನೇಹಿತರು ಹತ್ತಿದರು. ಇದಕ್ಕೆ ವಿದ್ಯಾರ್ಥಿನಿ ಆಕ್ಷೇಪಿಸಿದಾಗ ಇವರು ನಮ್ಮ ಸ್ನೇಹಿತರು ನಿಮ್ಮ ಮನೆಯ ಹತ್ತಿರವೇ ಇವರ ಮನೆಯೂ ಇದ್ದು ಅಲ್ಲಿಯೇ ಇಳಿದುಕೊಳ್ಳುತ್ತಾರೆ ಎಂದು ಸುಳ್ಳು ಹೇಳಿದ.
ಸಹ್ಯಾದ್ರಿ ಕಾಲೇಜು ಬಳಿ ಹೋಗದೆ ತುಂಗಭದ್ರಾ ನದಿ ಸಮೀಪದ ರಸ್ತೆಯಲ್ಲಿ ನೇರವಾಗಿ ಸಕ್ರೆಬೈಲ್ನತ್ತ ಹೊರಟ. ಈ ವೇಳೆ ವಿದ್ಯಾರ್ಥಿನಿ ಪ್ರತಿಭಟಿಸುತ್ತಿದ್ದಂತೆ ಅವಳ ಕೈಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿದರು. ಈ ವೇಳೆಗಾಗಲೇ ಇದೇ ಸ್ಥಳಕ್ಕೆ ಇನ್ನಿಬ್ಬರು ದುಷ್ಕರ್ಮಿಗಳು ಆಗಮಿಸಿದ್ದರು.
ಆರು ಮಂದಿ ಸೇರಿ ಈ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ದೂರು ನೀಡಿದ್ದಾರೆ.
ಇದೀಗ ಪೊಲೀಸರು ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Discussion about this post