Read - 2 minutes
ಬೆಂಗಳೂರು, ಸೆ.14: ಸದ್ಭಾವನೆಯ ಸಂಕೇತವಾಗಿ ತಮಿಳುನಾಡಿಗೆ ೫ ದಿನಗಳ ಕಾಲ ೧೦ ಸಾವಿರ ಕ್ಯೂಸೆಕ್ಸ್ ನೀರು ಹರಿಸಿದ್ದೇ ಕಾವೇರಿ ವಿವಾದ ಈ ಮಟ್ಟದಲ್ಲಿ ಸೃಷ್ಠಿಯಾಗಲು ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಾಂಸದ ಬಿ.ಎಸ್. ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕಾವೇರಿ ವಿವಾದ ಗಲಭೆ ಹಾಗೂ ಹಿಂಸಾರೂಪ ಪಡೆದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಯಾವಾಗಲೂ ನೆಲ, ಜಲ, ಭಾಷೆ ಮತ್ತುಗಡಿ ವಿವಾದಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸುತ್ತಾ ಬಂದಿದೆ. ಆ.೨೭ರಂದು ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ರಾಜ್ಯದ ಜಲಾಶಯಗಳಲ್ಲಿ ಮಳೆಯ ಕೊರತೆಯಿಂದಾಗಿ ಇರುವ, ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಕೃಷಿ ಸಲುವಾಗಿ ಬಳಕೆಗೆ ನೀರು ಲಭ್ಯವಿಲ್ಲ. ಕೇವಲ ಕುಡಿಯುವ ಸಲುವಾಗಿ ನೀರನ್ನು ಸಂರಕ್ಷಿಸಬೇಕಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು.
ರಾಜ್ಯ ಸರ್ಕಾರದ ಈ ನಿಲುವಿಗೆ ಬಿಜೆಪಿ ತನ್ನ ಬೆಂಬಲ ನೀಡಿತ್ತು ಎಂದಿದ್ದಾರೆ.
ಆದರೆ, ಸೆ. ೨ ರಂದು ರಾಜ್ಯ ಸರ್ಕಾರ ಸ್ವ-ಇಚ್ಛೆಯಿಂದ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರವೊಂದನ್ನು ಸಲ್ಲಿಸಿ, ಸದ್ಭಾವನೆಯ ಸಂಕೇತವಾಗಿ ೫ ದಿನಗಳ ಕಾಲ ೧೦ ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಈಗಿನ ಸಂಕಷ್ಟಕ್ಕೆ ಈ ಅಂಶವೇ ಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ.
ಸದ್ಭಾವನೆಯ ಸಂಕೇತವಾಗಿರಾಜ್ಯ ಸರ್ಕಾರ ಪ್ರಮಾಣಪತ್ರದಲ್ಲಿ ನೀರು ಬಿಡುಗಡೆಗೆ ಒಪ್ಪಿದ್ದರಿಂದ ಕರ್ನಾಟಕ ೧೦ ದಿನಗಳ ಕಾಲ ೧೫ ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ರಾಜ್ಯ ಸರ್ಕಾರವು ಸದ್ಭಾವನೆಯ ಸಂಕೇತವಾಗಿ ನೀರು ಬಿಡುಗಡೆಗೆ ಒಪ್ಪಿದ್ದು ಸರ್ವ ಪಕ್ಷಗಳ ಸಭೆಯ ತೀರ್ಮಾನಕ್ಕೆ ವ್ಯತಿರಿಕ್ತವಾಗಿತ್ತು ಎಂದು ಬಿಎಸ್ವೈ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈ ನಿಲುವಿನ ಬಗ್ಗೆ ಪ್ರತಿಪಕ್ಷಗಳಿಗೆ ಮತ್ತು ರಾಜ್ಯದ ರೈತರಿಗೆ ಯಾವುದೇ ಮಾಹಿತಿಯೂ ಇರಲಿಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಬಗೆದಿದೆ. ರಾಜ್ಯ ಸರ್ಕಾರ ಇಂತಹ ಸೂಕ್ಷ್ಮ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸಿದೆ ಎಂದು ಕಿಡಿ ಕಾರಿರುವ ಅವರು, ನಂತರ ನಡೆದ ಮತ್ತೊಂದು ಸರ್ವ ಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಅನಿವಾರ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು ಎಂದರು. ಆದರೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಬಿಜೆಪಿ ಬಹಿಷ್ಕರಿಸಿತ್ತು.ಇದಾದ ನಂತರ ಸುಪ್ರೀಂಕೋರ್ಟ್ಗೆ ತನ್ನ ಮೊದಲಿನ ತೀರ್ಪನ್ನು ಮಾರ್ಪಡಿಸಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿತು. ತೀರ್ಪು ಮಾರ್ಪಾಡಿಗೆ ಕೋರಿ ತಯಾರಿಸಲಾಗಿದ್ದ ಪ್ರಮಾಣ ಪತ್ರದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯನ್ನು ಮುಂದಿಟ್ಟು ನೀರು ಬಿಡುಗಡೆ ಸಾಧ್ಯವಿಲ್ಲ ಎನ್ನುವ ಒಕ್ಕಣೆ ಇದ್ದುದು ಸರ್ಕಾರದ ತಪ್ಪು ಹೆಜ್ಜೆಯಾಗಿತ್ತು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇದೇ ಕಾರಣಕ್ಕೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸೆ. ೨೦ರವರೆಗೆ ಪ್ರತೀ ದಿನ ೧೨ ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿತು. ಇದರಿಂದಾಗಿ ೧೩.೨೫೬ ಟಿಎಂಸಿ ಅಡಿ ನೀರು ಬಿಡಬೇಕಾಗಿದ್ದ ಕರ್ನಾಟವು ೧೫.೨೩೧ ಟಿಎಂಸಿ ಅಡಿ ನೀರು ಬಿಡುವಂತಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಬಿಎಸ್ವೈ ಹೇಳಿಕೆಯ ಹೈಲೆಟ್ಸ್…
*ಪ್ರಧಾನಿ ಮಧ್ಯಸ್ಥಿಕೆ ಎನ್ನುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡುತ್ತಿದೆ.
*ವಿವಾದ ನ್ಯಾಯಾಲಯದಲ್ಲಿ ಇರುವ ಕಾರಣ ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವಿಲ್ಲ.
*ಮೋದಿ ವಿರುದ್ಧ ಮಾತನಾಡುತ್ತಾ ಸಿದ್ಧರಾಮಯ್ಯ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ.
ವ್ಯತಿರಿಕ್ತ ತೀರ್ಪಿನಿಂದ ರಾಜ್ಯದ ಮೇಲೆ ಉಂಟಾಗುವ ಪರಿಣಾಮವನ್ನುಅಂದಾಜು ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಯಿತು. ಯಾವುದೇ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳದೇ ಇದ್ದುದು ಭಾರೀ ಹಿಂಸಾಚಾರಕ್ಕೆ ಕಾರಣವಾಯಿತು. ಪರಿಣಾಮವಾಗಿ ಓರ್ವ ಮೃತಪಟ್ಟು ಕೋಟ್ಯಂತರ ರೂಪಾಯಿಗಳ ನಷ್ಟಕ್ಕೂ ಇದು ಕಾರಣವಾಯಿತು. ಇದು ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ದೂರದೃಷ್ಟಿ ಇಲ್ಲ ಎನ್ನುವುದಕ್ಕೆ ನಿದರ್ಶನವಾಗಿದೆ. ಈಗಿನ ಹಿಂಸಾಚಾರಕ್ಕೆ ಸರ್ಕಾರವೇ ಕಾರಣ.
-ಬಿ.ಎಸ್. ಯಡಿಯೂರಪ್ಪ
Discussion about this post