ಪೂರ್ವಾಶ್ರಮದಲ್ಲಿ ಒಬ್ಬ ಬೇಟೆಗಾರನಾಗಿದ್ದ ವಾಲ್ಮೀಕಿ ಮಹರ್ಷಿಯು, ಆನಂತರ ಅನೇಕ ವರ್ಷಗಳ ಕಾಲ ಘೋರ ತಪಸ್ಸಿನಲ್ಲಿ ಮಗ್ನನಾಗಿದ್ದನು. ಆಗ ಇತನ ಸುತ್ತಲು ಹುತ್ತ ಬೆಳೆದು ದೇಹ ಮುಚ್ಚಿಹೋಗಿತ್ತು. ಈ ದೃಶ್ಯವನ್ನು ರಾಷ್ಟ್ರಕವಿ ಕುವೆಂಪು ಅವರು ವರ್ಣಿಸಿದಂತೆ, ವಾಲ್ಮೀಕಿ ಎಂದರೆ, ವಾಲ್ಮೀಕ (ವಾಲ್ಮೀಕಕ್ಕೆ ಸಂಸ್ಕೃತದಲ್ಲಿ ಹುತ್ತ ಎನ್ನುತ್ತಾರೆ) ಅಂದರೆ ಹುತ್ತವನ್ನು ಪ್ರವೇಶಿಸಿದವನು ಎಂದರ್ಥ. ಇದನ್ನು ವಾಲ್ಮೀಕಿಯು ತನ್ನ ಅಂತರಾತ್ಮವನ್ನು ಪ್ರವೇಶಿಸಿದನು ಎಂದು ಹೇಳಬಹುದು. ಕಾರಣ ಮನುಷ್ಯ ತನ್ನೊಳಗೆ ತಾನು ಪ್ರವೇಶಿಸಿ, ಮನಸ್ಸನ್ನು ವಿಶ್ಲೇಷಣೆಗೆ ಒಳಪಡಿಸಿದರೆ ಸಿದ್ಧಿಯು ಖಂಡಿತ ಪ್ರಾಪ್ತವಾಗುತ್ತದೆ. ಹಾಗೂ ತಪಸ್ಸನ್ನು ಭಕ್ತಿ ಮತ್ತು ಶ್ರದ್ಧೆಯ ಮೂಲಕ ಆಚರಿಸಿ ಎಂದು ವಾಲ್ಮೀಕಿ ಮಹರ್ಷಿ ತಿಳಿಸಿಕೊಟ್ಟಿದ್ದಾರೆ.
ಈ ರೀತಿ ಪರಿವರ್ತನೆಗೊಂಡ ವಾಲ್ಮೀಕಿ ಮಹರ್ಷಿಯು, ಪವಿತ್ರ ಹಾಗೂ ಸಾಹಿತ್ಯ ಮಾಲೆಯಲ್ಲಿ ಶ್ರೇಷ್ಠ ಸ್ಥಾನ ಹೊಂದಿದ ಮಹಾಕಾವ್ಯ ರಾಮಾಯಣವನ್ನು ಸಂಸ್ಕೃತದಲ್ಲಿ ರಚಿಸಿದರು. ಈ ಕಾವ್ಯದಲ್ಲಿ ಶ್ರೀರಾಮನ ಸರ್ವಶ್ರೇಷ್ಠತೆಯನ್ನು ಹಾಗೂ ಯುಗ-ಯುಗಗಳ ಇತಿಹಾಸವನ್ನು ಮತ್ತು ರಾಮರಾಜ್ಯವನ್ನು ಸುಂದರವಾಗಿ ವರ್ಣಿಸಿದ್ದಾರೆ.
ವಾಲ್ಮೀಕಿ ಮಹರ್ಷಿಯು ರಚಿಸಿದ ಮಹಾಕಾವ್ಯ ರಾಮಾಯಣ
ವಾಲ್ಮೀಕಿ ಮಹರ್ಷಿ ರಚಿಸಿದ ರಾಮಾಯಣ ಅನೇಕ ಸಾಧಕರಿಗೆ ಮಾರ್ಗಸೂಚಿ ಯಾಗಿದೆ ಎಂಬುವುದಕ್ಕೆ ಉತ್ತಮ ಉದಾಹರಣೆ ಸ್ವಾಮಿ ವಿವೇಕಾನಂದರು. ಬಾಲ್ಯದಲ್ಲಿರುವಾಗ ವಿವೇಕಾನಂದರಿಗೆ ತಾಯಿ ಭುವನೇಶ್ವರಿ ದೇವಿ ರಾಮಾಯಣ, ಮಹಾಭಾರತ, ಭಗವದ್ಗಿತೆಯನ್ನು ಭೋದಿಸುತ್ತಿದ್ದರು. ರಾಮಾಯಣದ ಪ್ರಭಾವದಿಂದ ವಿವೇಕಾನಂದರು ಶ್ರೀರಾಮನ ಪ್ರತಿಮೆಗಳನ್ನು ಪೂಜಿಸುತ್ತಾ ಕಾಲ ಕಳೆಯುತ್ತಿದ್ದರು. ಹಾಗೂ ರಾಮಾಯಣದಲ್ಲಿ ಬರುವ ಉತ್ತಮ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು, ಇಡಿ ಪ್ರಪಂಚಕ್ಕೆ ಭಾರತೀಯ ಸಂಸ್ಕೃತಿ, ಧರ್ಮ ಹಾಗೂ ಭಾರತೀಯ ಮಹಾಕಾವ್ಯಗಳನ್ನು ಪರಿಚಯಿಸಿಕೊಟ್ಟರು.
ಹೀಗೆ ವಾಲ್ಮೀಕಿ ರಚಿಸಿದ ರಾಮಾಯಣವು ಅನೇಕ ಜನರ ಜೀವನವನ್ನು ಬದಲಿಸಿದ ಸಾಧನಾ ಸಿದ್ದಿ ಕಾವ್ಯವಾಗಿದೆ. ಹಾಗೂ ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳು ಓದುಗರ ವಿವೇಕ, ಬುದ್ಧಿ, ಮನಸ್ಸು, ಕ್ರಿಯೆ ಕರ್ಮಗಳನ್ನು ಸೂಕ್ತ ದಾರಿಯಲ್ಲಿ ನಡೆಸುವ ಕಾರ್ಯ ಮಾಡುತ್ತದೆ. ಇಂತಹ ಮನೋಹರವಾದ, ಪವಿತ್ರವಾದ ಹಾಗೂ ಶ್ರೇಷ್ಠವಾದ ಮಹಾ ಕಾವ್ಯವನ್ನು ರಚನೆ ಮಾಡಿದ ವಾಲ್ಮೀಕಿ ಮಹರ್ಷಿಯು ಋಷಿಪುಂಗವರಲ್ಲೇ ಶ್ರೇಷ್ಠ ಮಹರ್ಷಿಯಾಗಿ ಉನ್ನತ ಸ್ಥಾನವನ್ನು ಗಳಿಸಿ, ಕಾವ್ಯ ಸಿರಿಯ ಕೊಂಬೆಯನ್ನೇರಿ ‘ರಾಮ ರಾಮ’ ಎಂದು ಮಧುರವಾಗಿ ಮಧುರಾಕ್ಷರಗಳಿಂದ ಧ್ವನಿಗೈಯುವ ಕೋಗಿಲೆಯಾಗಿದ್ದಾರೆ. ಹಾಗೂ ಮಹಾಕಾವ್ಯ ರಾಮಾಯಣ ಇಂದಿಗೂ ಪಾಶ್ಚಾತ್ಯರ ದೃಷ್ಟಿಯಲ್ಲಿ ಆದರ್ಶ ಕಾವ್ಯವಾಗಿದೆ. ಪ್ರಪಂಚದಲ್ಲಿರುವ ಅನೇಕ ಭಾಷೆಗಳಲ್ಲಿ ರಾಮಾಯಣ ಗ್ರಂಥ ಹೊರಬಂದಿದೆ. ಹಾಗೂ ರಾಮಾಯಣವು ಭರತಖಂಡದಲ್ಲಿ ಜನ್ಮತಾಳಿದರೂ, ವಿಶ್ವಮಾನ್ಯತೆ ಪಡೆದಿದೆ. ಆದ್ದರಿಂದ ಇಂದಿಗೂ ಮಲೇಷಿಯಾದ ರಾಷ್ಟ್ರಾಧ್ಯಕ್ಷರು ಸೆರಿಪಾದುಕಾಧೂಲಿಯ ಮೇಲೆ ಅಂದರೆ ಶ್ರೀರಾಮನ ಪಾದುಕೆಯ ಧೂಳಿನ ಮೇಲೆ ಪ್ರಮಾಣ ಮಾಡಿಯೇ ಅಧಿಕಾರ ಸ್ವಿಕರಿಸುತ್ತಾರೆ. ಇನ್ನೂ ಥೈಯ್ಲೆಂಡಿನ ರಾಜವಂಶದಲ್ಲಿ ರಾಜರುಗಳಿಗೆ ರಾಮ ಎಂದೇ ಗೌರವದಿಂದ ಕಾಣುತ್ತಾರೆ. ಹಾಗೂ ಈ ವಾಲ್ಮೀಕಿ ರಾಮಾಯಣವನ್ನು ಆಧರಿಸಿಕೊಂಡು ಹೊರಬಂದಿರುವ ಅನೇಕ ಪದ್ಯ, ಪ್ರಬಂಧಗಳು, ಕಾವ್ಯಗಳು, ನಾಟಕಗಳು, ಗ್ರಂಥಗಳು, ಹಾಗೂ ಮುಂತಾದ ನಾನಾ ವಿಧದ ಕಾವ್ಯ ಕೃತಿಗಳಿಗೆ ವಾಲ್ಮೀಕಿ ರಾಮಾಯಣ ಜನ್ಮದಾತೆಯಾಗಿದೆ. ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು ಧರ್ಮ ಮಾರ್ಗದಲ್ಲಿ ಧಾರ್ಮಿಕ, ಸಾಮಾಜಿಕ ಸದ್ಗುಣಗಳನ್ನು ಪ್ರತಿಪಾದಿಸುವ ದಾರಿ ದೀಪವಾಗಿ, ಜ್ಞಾನದ ದಾರಿ ತೋರಿಸುತ್ತಿದೆ ಎಂಬುದು ನಿತ್ಯ ಸತ್ಯ.
ಸಾಧಕ ಗುಣದ ವಾಲ್ಮೀಕಿ ಮಹರ್ಷಿ
ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ರಾಮಾಯಣಕ್ಕೆ ಒಂದು ವಿಶೇಷ ಸ್ಥಾನವನ್ನು ಒದಗಿಸಿದ ಶ್ರೇಯಸ್ಸು ಆದಿಕವಿ ವಾಲ್ಮೀಕಿ ಮಹರ್ಷಿಗೆ ಸಲ್ಲುತ್ತದೆ. ವಾಲ್ಮೀಕಿ ಮಹರ್ಷಿಯು ಒಂದು ರೀತಿಯಲ್ಲಿ ಸರ್ವತೋಮುಖಿಃ ಚಿಂತಕ, ಚರಿತ್ರೆಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞ, ತತ್ವ ಜ್ಞಾನಿ ಹಾಗೂ ಆದಿಕವಿಯಾಗಿ ಬಹು ವೈವಿಧ್ಯಮಯವಾಗಿ ಜನರ ಮನಸೊರೆಗೊಂಡಿದ್ದಾರೆ. ಇಂತಹ ಮಹಾನ್ ಮಹರ್ಷಿಯ ಹೆಸರು ಜಗತ್ತಿಗೆ ಪರಿಚಯವಾದದ್ದು, ರಾಮಾಯಣ ಕಾವ್ಯದ ಮೂಲಕ. ಆದ್ದರಿಂದ ನಾವು ವಾಲ್ಮೀಕಿ ಮಹರ್ಷಿಯನ್ನು ಸಾಧಕ ಗುಣದವರು ಎಂದು ಹೇಳಬಹುದು. ಕಾರಣ ವಾಲ್ಮೀಕಿ ಮಹರ್ಷಿ ಕಾಡಿನಲ್ಲಿ ಅರಳಿದ ಸುಗಂಧ ಪುಷ್ಪ.
ವಾಲ್ಮೀಕಿ ಮಹರ್ಷಿಯ ಪರಿಚಯ
*ತಂದೆ: ಪ್ರಚೇತಸೇನ.
*ಮೂಲನೆಲೆ : ಕರ್ನಾಟಕದ ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಹವಣಿ ಎಂಬ ಪ್ರದೇಶ.
*ವಾಲ್ಮೀಕಿ ರಾಮಾಯಣದಲ್ಲಿ ಕಂಡು ಬರುವ ಪ್ರಮುಖ ಕರ್ನಾಟಕದ ಪ್ರದೇಶಗಳು: ಹಂಪಿ ಬಳಿ ಇರುವ ಪಂಪಾ ಸರೋವರ, ಮಾತಂಗ ಬೆಟ್ಟ, ಶಬರಿ ಆಶ್ರಮ, ಸುಗ್ರೀವನು ವಾಸವಾಗಿದ್ದ ಋಷಿಮುಖ ಪರ್ವತ.
—>
ಲೇಖಕರು: ಅಕ್ಷಯ ಬಡಿಗೇರ
Discussion about this post