ಬಹಳ ಹಿಂದಿನಿಂದಲೂ ಕೇಳಿಬಂದಂತಹ ಮಾತಿದು.ವಿಶೇಷವಾಗಿ ನಾಗರ ಹಾವಿಗೆ ತೊಂದರೆ ಮಾಡಿದರೆ, ಅದು ಹನ್ನೆರಡು ವರ್ಷ ದ್ವೇಷ ಸಾಧಿಸುತ್ತದೆ ಎಂಬುದು ನಾಡಿನಲ್ಲಿ ಮನೆ ಮನೆಯಲ್ಲೂ ಹೇಳುವ ಮಾತಿದು.
ಯಾರೋ ಒಬ್ಬ ನಾಗರ ಹಾವನ್ನು ಒಂದು ಬಿಲದಲ್ಲಿ ಕೂಡಿಹಾಕಿ ಮುಚ್ಚಿಟ್ಟನಂತೆ.ಹನ್ನೆರಡು ವರ್ಷಗಳ ಬಳಿಕ ಅದೇ ಬಿಲದ ಬಳಿ ಬಂದು ಅದನ್ನು ತೆರೆದಾಗ, ಬಹಳ ಕೃಷವಾಗಿದ್ದ ಆ ಹಾವು ಆ ವ್ಯಕ್ತಿಯನ್ನು ಕಚ್ಚಿ ಸಾಯಿಸಿ ತಾನೂ ಸತ್ತು ಹೋಯಿತಂತೆ. ಇದೊಂದು ಊರಿನಲ್ಲಿರುವ ದಂತ ಕಥೆ.
ಯಾವುದೇ ಹಾವುಗಳಿಗೆ ಹಠ ಜಾಸ್ತಿ.ಅದರ ಬೇಟೆ ತಪ್ಪಿದಾಗ, ತಪ್ಪಿಸಿದರೆ ಅದು ಅದರ ಬೇಟೆಯನ್ನು ಪಡೆಯದೆ ಬಿಡುವುದೇ ಇಲ್ಲ.ಮನೆಯ ಒಳಗಾದರೂ ಸರಿ, ಮನೆಯ ಹೊರಗಾದರೂ ಸರೀ ಅಥವಾ ಜನಸಂದಣಿಯ ನಗರದಲ್ಲಾದರೂ ಸರಿ. ಅದು ತಾನು ಅಟ್ಟಿಕೊಂಡು ಬಂದ ಬೇಟೆಯು ಸಿಗುವ ತನಕ ಅಲ್ಲೇ ಸುತ್ತಾಡುತ್ತಿರುತ್ತದೆ. ಇದು ನಾಗರ ಹಾವಿನ ಜಾತಿಗಳಲ್ಲಿ ವಿಶೇಷವಾಗಿರುತ್ತದೆ. ಯಾಕೆಂದರೆ ನಾಗರ ಹಾವಿಗೆ ಭಯ ಎಂಬುದೇ ಇಲ್ಲ.ಇತರ ಹಾವುಗಳಿಗೆ ಭಯ ಜಾಸ್ತಿ. ಇದನ್ನೇ ಹಾವಿನ ದ್ವೇಷ ಹನ್ನೆರಡು ವರುಷ ಎಂಬ ನಾಣ್ನುಡಿಯಲ್ಲಿ ಕರೆದರು.
ಆದರೆ ನಿಜವಾಗಿ ಹಾವಿನ ದ್ವೇಷ ಎಂದು ಹೇಳುವ ಮಾತು ತಪ್ಪು.ಅದು ಹಾವಿನ ದೋಷ ಎಂದಾಗಬೇಕು. ಅಂದಹಾಗೆ ಆ ದೋಷವೋ, ಅಥವಾ ದ್ವೇಷವೋ ಹನ್ನೆರಡು ವರ್ಷ ಯಾಕೆ? ನಂತರ ಯಾಕೆ ಇಲ್ಲ? ಎಂಬ ಪ್ರಶ್ನೆ ಉಂಟಾಗುತ್ತದೆ.
ಮನುಷ್ಯನ ಜಾತಕದಲ್ಲಿ ಭಾವಗಳ ಪ್ರಾಪ್ತಿಗಳಿಗೆ ಕಾರಕನು ಗುರು ಗ್ರಹ.ಈ ಗುರು ‘ ಭ ‘ ಚಕ್ರದ ಒಂದು ಪೂರ್ಣ ಪರಿಭ್ರಮಣೆಗೆ ಹನ್ನೆರಡು ವರ್ಷ ಬೇಕು. ಜನ್ಮಾದಿ ದ್ವಾದಶ ಭಾವಗಳಲ್ಲಿ ಇವನ ಸಂಚಾರ ಕಾಲದಲ್ಲಿ ಯಾವ ಯಾವ ಭಾವದಲ್ಲಿ ಸಂಚರಿಸುತ್ತಾನೋ ಆ ಭಾವದ ಫಲ ಶುಭವೋ, ಅಶುಭವೋ ಪ್ರಾಪ್ತಿಯಾಗುತ್ತದೆ. ನಾಗರ ಹಾವಾಗಲೀ ಅಥವಾ ಇನ್ಯಾವ ಹಾವಾಗಿಯೇ ಇರಲಿ ಅದರ ಅಭಿಮಾನಿ ದೇವರೇ ನಾಗದೇವರು. ನಾಗದೇವರು ಮೋಹಾಭಿಮಾನಿ ದೇವರು.ಈ ದೇವರು ಆಯಾಯ ಭಾವಗಳ ಭಾವನೆಗಳನ್ನು ನಿಯಂತ್ರಿಸುವವರು.ವ್ಯಕ್ತಿಯು ದೋಷಗ್ರಸ್ತನಾಗಿದ್ದರೆ ಅವನ ಭಾವದ ದೊಷಕ್ಕನುಗುಣವಾಗಿ ಆ ಭಾವದ ಮೋಹ ಹೆಚ್ಚುಮಾಡಿ ದುರಂತಕ್ಕೆ ತಳ್ಳಬಹುದು. ಉದಾಹರಣೆಗೆ ಸಪ್ತಮ ಭಾವವು sex, business , partnership ಇತ್ಯಾದಿಗಳಾಗುತ್ತದೆ. ಈ ಭಾವವು ದೋಷಗ್ರಸ್ತವಾಗಿದ್ದರೆ, ಆ ಭಾವದ ಗುಣವನ್ನು ಈ ಮೋಹಾಭಿಮಾನಿ ನಾಗದೇವರು ಅತಿಯಾಗಿ (extreme )ಸುತ್ತಾನೆ. ಅಂದರೆ ನಾಗನಿಗೆ ಹಿಂಸೆ ನೀಡಿದಾಗ, ನಾಗನ ಹತ್ಯೆ ಮಾಡಿದಾಗ ದೋಷ ಪ್ರಾಪ್ತಿಯಾಗುತ್ತದೆ. ಪ್ರತೀ ಭಾವಕ್ಕೂ ಜನ್ಮಾದಿ ಹನ್ನೆರಡು ಭಾವಗಳ ಫಲಗಳ ಲೆಕ್ಕಾಚಾರಗಳಿವೆ. ಯಾವ ಭಾವ ದೋಷಗ್ರಸ್ತವಾಗಿವೆಯೋ ಅದರ ದುಷ್ಪರಿಣಾಮ ನಾಗದೋಷ ನೀಡುತ್ತದೆ.ಒಂದು ವೇಳೆ ಇಂತಹ ನಾಗದೋಷ ( ಪೂಜೆಗಳಿಂದಲೋ, ಮನೋ ನಿಯಂತ್ರಣಗಳಿಂದಲೋ ಅವರವರ ಶ್ರದ್ದೆಗೆ ಭಕ್ತಿಗೆ ತಕ್ಕಂತೆ ದೋಷ ನಿವಾರಣೆಯಾಗುತ್ತದೆ.ಆದರೆ ಸರ್ಪ ಹತ್ಯೆಯಾಗಿದ್ದಲ್ಲಿ ಸರ್ಪಸಂಸ್ಕಾರವೇ ಆಗಬೇಕು) ನಿವಾರಣೆ ಆಗದಿದ್ದಲ್ಲಿ,ಅದು ನಿವಾರಣೆಯಾಗುವ ವರೆಗೆ ಗುರು ಸಂಚಾರದ ಪ್ರತೀ ಭಾವಗಳೂ ಅತಿಯಾಗುತ್ತಾ ದೋಷ ಹೆಚ್ಚಾಗುತ್ತದೆ.
ಇಂತಹ ವಿಚಾರವನ್ನು ತಜ್ಞ ಜ್ಯೋತಿಷ್ಯರ ಮೂಲಕ ತಿಳಿದು ಸರಿಪಡಿಸಿಕೊಳ್ಳಬೇಕು.
ಹಾಗಾಗಿ ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುವುದಕ್ಕಿಂತ ,ದೋಷ ಹನ್ನೆರಡು ವರ್ಷ ಎಂದು ತಿಳಿಯಬೇಕು.














