ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ. ಇಲ್ಲಿನ ಚುನಾವಣಾ ವ್ಯವಸ್ಥೆ ಮುಕ್ತ ನ್ಯಾಯಸಮ್ಮತ ಮತ್ತು ಸಮರ್ಥವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯಲ್ಲಿ ಯುವಕರ ಸಂಖ್ಯೆ ಸುಮಾರು 50 ಸಾವಿರದಷ್ಟಿದ್ದರೂ ಮತದಾರರ ಪಟ್ಟಿಗೆ ಕಡಿಮೆ ಸಂಖ್ಯೆಯಲ್ಲಿ ಸೇರ್ಪಡೆಯಾಗಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಯುವಮತದಾರರ ಸೇರ್ಪಡೆಗೆ ವಿಶೇಷ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಧಾರವಾಡ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಕಾಲೇಜು ಶಿಕ್ಷಣ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿರುವ ಯುವ ಮತದಾರರ ಸೇರ್ಪಡೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣಾ ಆಯೋಗವು ರಚನೆಗೊಂಡ ಜನವರಿ 25 ನ್ನು ಪ್ರತಿ ವರ್ಷ ಮತದಾರರ ದಿನವನ್ನಾಗಿ ಆಚರಿಸಲಾಗತ್ತದೆ. ಪ್ರಸಕ್ತ ಸಾಲಿಗೆ ಯಾವ ಅರ್ಹ ಮತದಾರರ ಪಟ್ಟಿಯಿಂದ ಹೊರಗೆ ಉಳಿಯುವಂತಿಲ್ಲ ಎಂಬ ಘೋಷವಾಕ್ಯದಡಿ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 18 ವರ್ಷ ಪೂರೈಸಿದ ಎಲ್ಲರೂ ಕಡ್ಡಾಯವಾಗಿಯೇ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು. ಈ ಕುರಿತು ಸಾರ್ವಜನಿಕರಲ್ಲಿ ಮತ್ತು ಯುವಕರಲ್ಲಿ ಅರಿವು ಮೂಡಿಸಬೇಕು.
ಪ್ರತಿ ಮತಗಟ್ಟೆಗಳಲ್ಲಿ 18 ವರ್ಷ ಮೇಲ್ಪಟ್ಟಿರುವ ಫಾರ್ಮ್ 6 ಹೊಸ ಮತದಾರರನ್ನು ಗಂಡು, ಹೆಣ್ಣು ಕನಿಷ್ಠ 20+ ಜನರನ್ನು ಕಡಾಯವಾಗಿ 2 ದಿನಗಳಲ್ಲಿ ಸೇರ್ಪಡೆ ಮಾಡಬೇಕು. ಗ್ರಾಮದಲ್ಲಿ ವಾಸವಾಗಿರುವ ಹಾಗೂ 18 ವರ್ಷ ಮೇಲ್ಪಟ್ಟಿರುವ ಎಲ್ಲರೂ ಮತದಾರರ ಪಟ್ಟಿಯಲ್ಲಿ ದಾಖಲೆ ಇರುವಂತೆ ಎಲ್ಲರೂ ನೋಡಿಕೊಳ್ಳಬೇಕೆಂದು ಅವರು ಹೇಳಿದರು.
ವಿದ್ಯಾರ್ಥಿಗಳು ವಾಸಿಸುವ ಮತಗಟ್ಟೆಗಳ ವ್ಯಾಪ್ತಿಯಲ್ಲಿರುವ ಅರ್ಹ ಯುವಕರನ್ನು ಓಟರ್ಸ್ ಹೆಲ್ಪ್ ಲೈನ್ ಆ್ಯಪ್ ನಲ್ಲಿ ಅರ್ಜಿ ನಮೂನೆ 6 ರಲ್ಲಿ ಭರ್ತಿ ಮಾಡಿ ಸಲ್ಲಿಸಬೇಕೆಂದು ಹೇಳಿದರು.
Also read: ನಾಯಕನಹಟ್ಟಿಯಲ್ಲಿ ಅದ್ದೂರಿಯಾಗಿ ನಡೆದ ತೆಪ್ಪೋತ್ಸವ
ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಸುರೇಶ್ ಇಟ್ನಾಳ ಅವರು ಮಾತನಾಡಿ, ಜಿಲ್ಲೆಯ ಎಲ್ಲ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಯುವ ಮತದಾರರ ಸೇರ್ಪಡೆ ಅಭಿಯಾನವನ್ನು ಆಯೋಜಿಸಲಾಗಿದೆ. ಈಗಾಗಲೇ ಪ್ರತಿ ಶಾಲಾ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ಗಳನ್ನು ಸ್ಥಾಪಿಸಲಾಗಿದೆ ಮತ್ತು ಪ್ರತಿ ಕಾಲೇಜಿಗೆ ರಾಯಭಾರಿಗಳನ್ನು ನೇಮಿಸಲಾಗಿದೆ. ಸಾಕ್ಷರತಾ ಕ್ಲಬ್ ಮತ್ತು ರಾಯಭಾರಿಗಳು ಯುವ ಮತದಾರರ ನೊಂದಣಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕಾಲೇಜು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿನಿರ್ದೇಶಕ ಪ್ರೊ.ಕೃಷ್ಣಮೂರ್ತಿ ಬಿ.ಆರ್., ಪ್ರೊಬೇಷನರಿ ಎಸಿ ಅನುರಾಧ ವಸ್ತ್ರದ, ಧಾರವಾಡ ತಹಶೀಲ್ದಾರ ಸಂತೋಷ ಹಿರೇಮಠ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಸೇರಿದಂತೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post