ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ವಿಷ್ಣು ದೀಪೋತ್ಸವ ಅದ್ಧೂರಿಯಾಗಿ ಸಂಪನ್ನಗೊಂಡಿದ್ದು, ನೂರಾರು ಮಂದಿ ಭಕ್ತರು ಈ ವೈಭವವನ್ನು ಕಣ್ತುಂಬಿಕೊಂಡರು.
ವಿಷ್ಣು ದೀಪೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆ ಲಕ್ಷ್ಮೀ ನರಸಿಂಹ ಸ್ವಾಮಿ, ವೇಣುಗೋಪಾಲ ಹಾಗೂ ಪುರುಷೋತ್ತಮ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಪೂಜೆ ನೆರವೇರಿಸಲಾಗಿತ್ತು. ಸಂಜೆ ಗರುಡ ವಾಹನ ಪಲ್ಲಕ್ಕಿಯಲ್ಲಿ ಅಲಂಕೃತ ದೇವರ ಅದ್ಧೂರಿ ರಾಜಬೀದಿ ಉತ್ಸವ ನಡೆಯಿತು. ದೇವಾಲಯದಿಂದ ಹೊರಟ ಉತ್ಸವ ತರೀಕೆರೆ ರಸ್ತೆಯಲ್ಲಿ ಸಾಗಿ ಬಂದು ರಥಬೀದಿ ಮೂಲಕ ದೇವಾಲಯ ತಲುಪಿತು. ಆ ನಂತರ ದೇವಾಲಯದ ಮುಖ್ಯದ್ವಾರದಿಂದ ಜೋಡಿಸಲಾಗಿದ್ದ ದೀಪಗಳನ್ನು ಪ್ರಜ್ವಲಿಸಲಾಯಿತು.
ದೇವಾಲಯದ ಸುತ್ತಲಿನ ಕಾಂಪೌಂಡ್ ಅಶ್ವತ್ಥವೃಕ್ಷ, ಗರುಡಗಂಭ, ಪುರಾತನಕಾಲದ ಬಾವಿ ಹಾಗೂ ದೇವಾಲಯದ ಸುತ್ತಲೂ ಸಾಲು-ಸಾಲು ದೀಪಗಳನನ್ನು ಹಚ್ಚಲಾಯಿತು.
ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ಸಂಪೂರ್ಣ ಶಿಲಾ ದೇವಾಲಯ ಹಾಗೂ ಪ್ರಾಂಗಣ ದೀಪಗಳಿಂದ ಕಂಗೊಳಿಸುತ್ತಿದ್ದ ಸೌಂದರ್ಯವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.
ಮೂಲದೇವರು ಹಾಗೂ ಉತ್ಸವಮೂರ್ತಿ ನಡುವೆ ಸಾಂಪ್ರದಾಯಿಕವಾಗಿ ಚೊಕ್ಕ ಸುಟ್ಟ ನಂತರ ಅಷ್ಟಾವಧಾನ ಸೇವೆ ಮಂತ್ರಪುಷ್ಟ ಹಾಗೂ ವಿವಿಧ ರೀತಿಯ ಮಹಾಮಂಗಳಾರತಿ ನೆರವೇರಿತು.
ಪ್ರಧಾನ ಅರ್ಚಕರಾದ ರಂಗನಾಥ ಶರ್ಮ, ಸಹಾಯಕ ಅರ್ಚಕರಾದ ಶ್ರೀನಿವಾಸ್, ನರಸಿಂಹಾಚಾರ್, ವೇದಪಾಠಶಾಲೆಯವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post