ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕಳೆದ ಕೆಲವು ವರ್ಷಗಳಿಂದ ಭೂಮಿಯ ತಾಪಮಾನ ಏರುತ್ತಿದ್ದು, ಮುಂದಿನ ದಿನಗಳಲ್ಲಿ ಮಾನವನು ಬದುಕುವುದು ಸಂಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯನ್ನು ಧ್ಯೇಯವನ್ನಾಗಿಟ್ಟುಕೊಂಡು ಕಿಂಚಿತ್ತಾದರೂ ಕಾರ್ಯೋನ್ಮುಖರಾಗುವುದರ ಮೂಲಕ ಮುಂದಿನ ಪೀಳಿಗೆಯನ್ನು ರಕ್ಷಿಸಬೇಕಾಗಿದೆ ಎಂದು ಕಿರ್ಲೋಸ್ಕರ್ Kirloskar ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ. ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಸರವನ್ನು ಸಂರಕ್ಷಿಸಲು ಮತ್ತು ಪರಿಸರದ ಸೂಕ್ಷ್ಮಪ್ರಜ್ಞೆಯುಳ್ಳ ಯುವಪೀಳಿಗೆಗಾಗಿ ಸಕಾರಾತ್ಮಕ ಕೊಡುಗೆಯನ್ನು ನೀಡುವ ಹಿನ್ನಲೆಯಲ್ಲಿ ಹೊಸಪೇಟೆಯ ಫ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಹಸಿರು ಕಾಲೇಜು – ಸ್ವಚ್ಛ ಕಾಲೇಜು ಎಂಬ ವಿಷಯದ ಕುರಿತು ಅಂತರ ಕಾಲೇಜುಗಳ ನಡುವೆ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಉದ್ಟಾಟಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗಾಗಿ ಪೃಥ್ವಿಯನ್ನು ಉಳಿಸಿ ಬೆಳೆಸಬೇಕೆನ್ನುವ ಮೂಲ ಉದ್ದೇಶದಿಂದ ಕಿರ್ಲೋಸ್ಕರ್ ಕಾರ್ಖಾನೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಪರಿಸರ ಸಂರಕ್ಷಿಸುವ ಈ ನಮ್ಮ ಅಭಿಯಾನಕ್ಕೆ ಹಲವಾರು ಕಾಲೇಜುಗಳು ಕೈಜೋಡಿಸಿರುವುದು, ಸ್ಥಳವನ್ನು ನೀಡುತ್ತಿರುವುದು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಈ ಆಂದೋಲನದಲ್ಲಿ ಪಾಲುದಾರರನ್ನಾಗಿ ಮಾಡಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ. ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವೂ ಭಾಗೀದಾರರಾಗಿದ್ದೇವೆ ಎಂಬ ಸ್ಪಷ್ಠ ಸಂದೇಶವನ್ನು ಸಮಾಜಕ್ಕೆ ನೀಡಿದಲ್ಲಿ ಇದರಿಂದ ಪ್ರೇರಿತರಾಗಿ ಇನ್ನಷ್ಟು ಜನರು ಈ ಆಂದೋಲನದಲ್ಲಿ ಭಾಗಿಯಾಗುತ್ತಾರೆ ಎಂಬುದು ನಮ್ಮ ಅಶಯವಾಗಿದೆ ಎಂದು ತಿಳಿಸಿದರು.
ಫೌಢದೇವರಾಯ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ಯು.ಎಮ್. ರೋಹಿತ್ ಮಾತನಾಡಿ, ಕಿರ್ಲೋಸ್ಕರ್ ಕಾರ್ಖಾನೆಯವರು ಕೇವಲ ಉತ್ಪಾದನೆಗೆ ಸೀಮಿತಗೊಳಿಸದೇ, ಪರಿಸರ ಸಂರಕ್ಷಣೆಯ ಕುರಿತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದು ತಿಳಿಸಿದರು.
ಹೊಸಪೇಟೆಯ ಥೀಯಸೋಫಿಕಲ್ ಮಹಿಳಾ ಕಾಲೇಜು, ವಿಜಯನಗರ ಕಾಲೇಜು ಮತ್ತು ಫ್ರೌಢದೇವರಾಯ ತಾಂತ್ರಿಕ ಕಾಲೇಜುಗಳ ಪರಿಸರ ರಕ್ಷಕ ವಿದ್ಯಾರ್ಥಿ-ವಿಧ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ತಮ್ಮ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆ ಕುರಿತು ಕೈಗೊಂಡ ಕಾರ್ಯಗಳನ್ನು ಈ ಸ್ಪರ್ಧೆಯಲ್ಲಿ ಪ್ರದರ್ಶಿಸಿದರು. ಅಂತಿಮವಾಗಿ ಎರಡೂ ಸ್ಪರ್ಧೆಗಳಲ್ಲಿ ವಿಜಯನಗರ ಕಾಲೇಜು ಪ್ರಥಮ, ಫೌಢದೇವರಾಯ ಕಾಲೇಜು ದ್ವಿತೀಯ ಹಾಗೂ ಥಿಯೊಸೋಫಿಕಲ್ ಮಹಿಳಾ ಕಾಲೇಜು ತೃತೀಯ ಸ್ಥಾನಗಳನ್ನು ಗಳಿಸಿತು.
ಕಾರ್ಯಕ್ರಮದಲ್ಲಿ ಡಾ. ವಿಜಯಕುಮಾರ್, ವಿಜಯನಗರ ಕಾಲೇಜಿನ ಪ್ರೋಫೆಸರ್ ಕರಿಬಸ್ಪಪ್ಪ, ಥಿಯಸೋಫಿಕಲ್ ಕಾಲೇಜಿನ ಪ್ರಾಧ್ಯಾಾಪಕರಾದ ಶ್ರೀದೇವಿ ಎಮ್.ಡಿ, ಕೊಪ್ಪಳದ ಸರ್ವೋದಯ ಟ್ರಸ್ಟ್ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ದೀಪಾ ರಾಜೇಶ್ ಇವರುಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















