ಕಲ್ಪ ಮೀಡಿಯಾ ಹೌಸ್ | ಸೊರಬ |
ಭತ್ತದ ಕಣಜ ಎಂದೇ ಹೆಸರಾದ ಸೊರಬ ತಾಲ್ಲೂಕಿನ ಜಡೆ ಹೋಬಳಿ ಪ್ರದೇಶದಲ್ಲಿ ಇರುವ ವರದಾ, ದಂಡಾವತಿ ನದಿಯೆ ವರದಾನ ಎಂದು ಡಾ. ಕೇಶವಕೊರ್ಸೆ ಹೇಳಿದರು.
ಜಡೆ ಸಮೀಪವಿರುವ ಪಿಳಲಿ ವೃಕ್ಷಸಮೂಹ ವೀಕ್ಷಿಸಿದ ಅವರು, ಈ ಭಾಗದಲ್ಲಿ ಹಲವು ಪಾರಂಪರಿಕ ಭತ್ತದ ತಳಿಗಳು ಇದ್ದು ಈಗ ನಶಿಸಿವೆ. ಕೃಷಿಯ ಆಧುನಿಕತೆಯ ಭರಾಟೆಯಲ್ಲಿ ರಾಸಾಯನಿಕ ಬಳಕೆಯೆ ಪ್ರಧಾನವಾಗಿರುವುದರಿಂದ ಸತ್ವ, ಪುಷ್ಟಿ ದಾಯಕ ಆಹಾರದ ಕೊರತೆಯಾಗಿದೆ. ಈ ಭಾಗದ ತರಕಾರಿ ಕೂಡ ಶಿರಸಿ ಭಾಗದಲ್ಲಿ ಹೆಸರುವಾಸಿಯಾಗಿದ್ದು, ಈಗ ಬೆಳೆಯುವವರ ಸಂಖ್ಯೆ ಕಡಿಮೆ ಆಗಿದೆ ಎಂದು ವಿಷಾಧಿಸಿದರು.
ನೈಸರ್ಗಿಕ ಪಿಳಲಿ ವೃಕ್ಷಸಮೂಹದಿಂದ ಅಕ್ಕಪಕ್ಕದ ಕೃಷಿ ಭೂಮಿ ಫಲವತ್ತಾಗಿದ್ದು ಈ ವೃಕ್ಷಸಮೂಹವನ್ನು ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
Also read: ಕ್ಯಾಂಟರ್ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿ ದುರ್ಮರಣ
ವೃಕ್ಷಲಕ್ಷ ಆಂದೋಲನದ ಅನಂತಹೆಗಡೆ ಅಶಿಸರ, ಈ ಭಾಗದ ಪ್ರಾಚೀನ ಕೆರೆಗಳು, ಸಾಮೂಹಿಕ ಭೂಮಿಗಳಾದ ಗೋಮಾಳ, ಹುಲ್ಲುಬನಿ ಝಾಡಿ ಮುಂತಾದವುಗಳ ರಕ್ಷಣೆ ಅಗತ್ಯ, ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಪಂ ಕಾಳಜಿ ವಹಿಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಅಲ್ಲಿನ ಜೀವವೈವಿಧ್ಯ ಸಂರಕ್ಷಣೆ ಕುರಿತು ಜರುಗಿದ ಕಾರ್ಯಾಗಾರದಲ್ಲಿ ಗ್ರಾಪಂ ಆಡಳಿತವೂ ಸೇರಿದಂತೆ, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡರು.
ಪಿಳಲಿ ವೃಕ್ಷ ಸಮೂಹಕ್ಕೆ ಈ ಹಿಂದೆ ರಕ್ಷಿತ ಪಾರಂಪರಿಕ ಜೈವಿಕ ವೃಕ್ಷ ಎಂದು ಘೋಷಣೆಯಾಗಿದ್ದು, ವೃಕ್ಷ ದ ಸುತ್ತ ಗಡಿ ಗುರುತಿಸಿ ಸಿಪಿಟಿಯಾಗಬೇಕು. ಮೊದಲಿದ್ದ ನಾಮಫಲಕ ಶಿಥಿಲಗೊಂಡಿದ್ದು ಪುನಃಸ್ಥಾಪನೆ ಯಾಗಬೇಕು. ಜಡೆಕೋಟೆ ರಕ್ಷಣೆಯಾಗಬೇಕು ಎಂದು ನಿರ್ಣಯಕೈಗೊಳ್ಳಲಾಯಿತು.
ಈ ವೇಳೆ ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಕಾರ್ಯದರ್ಶಿ ಸಿ.ಪಿ.ಈರೇಶಗೌಡ, ಪ್ರೊ. ಕೆ.ಪಿ.ಮಲ್ಲನಗೌಡ, ಪ್ರೊ.ಅನಿತ್ ಕುಮಾರ್, ತಾಪಂ ಅಧಿಕಾರಿ ಸಂಜಯ್, ಪರುಶರಾಮ್, ಪಿಡಿಒ ಚಿದಾನಂದ, ಉಪ ತಹಶಿಲ್ದಾರ್ ಲಲಿತಾ , ಗ್ರಾಮ ಪ್ರಮುಖರು ಇದ್ದರು.
(ವರದಿ: ಮಧುರಾಮ್, ಸೊರಬ)


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















