ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ರೀತಿಯ ಕೆಲಸ ಅಥವಾ ಉದ್ದಿಮೆಯಾಗಲಿ ಕೈ ಹಾಕಿದ ಕೆಲಸದಲ್ಲಿ ವಿಶ್ವಾಸವಿರುಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಕೌಶಲ್ಯ ಮಿಷನ್, ಶಿವಮೊಗ್ಗ ಹಾಗೂ ಸಹ್ಯಾದ್ರಿ ಕಲಾ ಕಾಲೇಜಿನ ಸಹಭಾಗಿತ್ವದಲ್ಲಿ ಸರ್ವರಿಗೂ ಉದ್ಯೋಗ ಎಂಬ ಶೀರ್ಷಿಕೆ ಅಡಿಯಲ್ಲಿ ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಈ ಉದ್ದಿಮೆ/ಕೆಲಸ ಮಾಡುತ್ತೇನೆಂದು ಧೈರ್ಯದಿಂದ ಹೊರಟಾಗ ಸಮಾಜ ಬೆಂಬಲ ನೀಡುತ್ತದೆ. ಹಾಗೂ ನಿಮ್ಮಲ್ಲರುವ ಪ್ರತಿಭೆಗೆ ಅತಿ ಹೆಚ್ಚಿನ ಮಹತ್ವ ಮತ್ತು ಬೆಲೆ ಇದ್ದು ಅದನ್ನು ಸಾಬೀತುಪಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ರೀತಿಯ ಕೌಶಲ್ಯ ತರಬೇತಿಗಳು, ಉದ್ಯೋಗಾವಕಾಶ, ಮಾರುಕಟ್ಟೆ, ರಫ್ತು ಹೀಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ನಿಮ್ಮ ಬುದ್ದಿವಂತಿಕೆ, ಪ್ರತಿಭೆಗಳಿಗೆ ಅನುಸಾರವಾಗಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ವಿಶ್ವಾಸ ಮತ್ತು ಶ್ರದ್ದೆಯಿಂದ ಮುನ್ನುಗ್ಗಿದರೆ ತಾವು ನೂರಾರು ಜನಕ್ಕೆ ಕೆಲಸ ನೀಡಬಹುದು. ಈ ನಿಟ್ಟಿನಲ್ಲಿ ತಂದೆ-ತಾಯಿ ಮಾರ್ಗದರ್ಶನ, ಉತ್ತಮ ಸ್ನೇಹಿತರು, ಅನುಭವಸ್ಥರ ಸಹಾಯದಿಂದ ಯಶಸ್ವಿಯಾಗಬೇಕೆಂದು ಹಾರೈಸಿದರು.
ತಾವು ಹಿಂದೆ ಉದ್ದಿಮೆ ತೆರೆಯಲು ಬ್ಯಾಂಕ್ ಸಾಲ ಇತರೆ ದಾಖಲಾತಿಗಳನ್ನು ನಿರ್ವಹಿಸುವಲ್ಲಿ ಎದೆಗುಂದಿ ಹಿಂದೆ ಸರಿದಿದ್ದಾಗ ಬ್ಯಾಂಕ್ ಮ್ಯಾನೇಜರ್ ತಮಗೆ ಧೈರ್ಯ ತುಂಬಿದ್ದರು. ತಾವು ಆರಂಭಿಸಿದ ಎರಡು ಮೂರು ಉದ್ದಿಮೆಗಳ ಬಗ್ಗೆ ತಿಳಿಸಿದರು. ಹಾಗೂ ತಮ್ಮ ಗುರುಗಳು, ಉತ್ತಮ ಸ್ನೇಹಿತರು ಮಾಡಿದ ಸಹಾಯದಿಂದ ಬೆಳೆಯಲು ಸಾಧ್ಯವಾಯಿತು ಎಂದು ಈ ಸಂಧರ್ಭದಲ್ಲಿ ಸ್ಮರಿಸಿದರು.
ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡರು ಮಾತನಾಡಿ, ಆಸಕ್ತಿ ಇರುವ ಕ್ಷೇತ್ರದಲ್ಲಿ ಕೌಶಲ್ಯವನ್ನು ರೂಢಿಸಿಕೊಂಡಲ್ಲಿ ನಿರುದ್ಯೋಗ ಸಮಸ್ಯೆಯೇ ಇರುವುದಿಲ್ಲ. ಈ ರೀತಿಯಲ್ಲಿ ಕೌಶಲ್ಯ ರೂಢಿಸಿಕೊಂಡಲ್ಲಿ ಪ್ರತಿ ರಾಷ್ಟ್ರದಲ್ಲಿ ನಮ್ಮ ಯುವಜನತೆ ಇರಬಹುದೆಂದು ಡಾ.ಎಪಿಜೆ ಅಬ್ದುಲ್ ಕಲಾಂ ಹೇಳಿದ್ದರು ಎಂದರು.
Also read: ಬಸ್ತಿಕೊಪ್ಪ ಗ್ರಾಮದ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಿ: ಗ್ರಾಮಸ್ಥರ ಆಗ್ರಹ
ಪ್ರತಿ ಉದ್ಯೋಗಕ್ಕೂ ಅದರದ್ದೇ ಆದ ಗೌರವ ಇದೆ. ಸರ್ಕಾರ ಸಾಕಷ್ಟು ನೌಕರಿ, ಕೌಶಲ್ಯ ತರಬೇತಿಗಳ ಮೂಲಕ ಅವಕಾಶಗಳನ್ನು ಸೃಷ್ಟಿಸಿದೆ. ಅದರ ಸದುಪಯೋಗ ಆಗಬೇಕು. ಯಾವುದೇ ರೀತಿಯ ಕೆಲಸ ಮಾಡಲು ಸಿದ್ದ ಎನ್ನುವಂತಿದ್ದರೆ ಕೆಲಸಕ್ಕೆ ನಮ್ಮಲ್ಲಿ ಕೊರತೆ ಇಲ್ಲ. ನಮ್ಮ ಫ್ಯಾಕ್ಟರಿ, ಉದ್ಯಮಗಳಲ್ಲಿ ಈಶಾನ್ಯ ಭಾಗದ ಶೇ.30 ರಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ನಮ್ಮವರು ಈ ಕೆಲಸ ಮಾಡಲು ಸಿದ್ದರಿಲ್ಲ. ಆದ್ದರಿಂದ ಅವರು ಈ ಕೆಲಸ ಮಾಡುತ್ತಿದ್ದಾರೆ ಎಂದ ಅವರು ಯಾವುದೇ ರೀತಿಯ ಉದ್ಯೋಗದ ಅವಕಾಶ ಬಂದಾಗ ಅದನ್ನು ಬಳಸಿಕೊಂಡು ತಮ್ಮ ಕೌಶಲ್ಯವನ್ನು ವೃದ್ದಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಇಂದಿನ ಉದ್ಯೋಗ ಮೇಳದಲ್ಲಿ ಸುಮಾರು 30 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, 7ನೇ ತರಗತಿ, ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಯಾವುದೇ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, 1000 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಭಾರ ಎಸಿ ಕಾಂತರಾಜ್ ಸ್ಮರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಭದ್ರಾವತಿ ಪ್ರಭಾರ ತಹಶೀಲ್ದಾರ್ ಪ್ರದೀಪ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಹೆಚ್ ಎಂ ಸುರೇಶ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಧನಂಜಯ್ ಉಪಸ್ಥಿತರಿದ್ದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ್ ಸ್ವಾಗತಿಸಿದರು. ಸಮನ್ವಯ ಕಾಶಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post