ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ಖ್ಯಾತ, ಹಿರಿಯ ಆಡಿಟರ್ ಕೆ.ಎಸ್. ಶ್ರೀಪಾದ್(59) ಅವರು ಇಂದು ವಿಧಿವಶರಾಗಿದ್ದಾರೆ.
ದಿಢೀರ್ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಇಬ್ಬರು ಸಹೋದರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇವರ ಪಾರ್ಥಿವ ಶರೀರವನ್ನು ಇಂದು ಸಂಜೆ ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ನಿವಾಸದ ಎದುರಿನ ಎನ್’ಎಂಸಿ 2ನೆಯ ಅಡ್ಡರಸ್ತೆಯಲ್ಲಿರುವ ಅವರ ನಿವಾಸಕ್ಕೆ ತರಲಾಗುತ್ತಿದ್ದು, ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.
3-4 ದಶಕಗಳಿಂದ ಆಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರು, ಭದ್ರಾವತಿ, ಶಿವಮೊಗ್ಗ ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ಈ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರು. ತಮ್ಮ ಜೀವಮಾನದುದ್ದಕ್ಕೂ ಕಷ್ಟದಲ್ಲಿರುವರಿಗೆ ಸಹಾಯಹಸ್ತ ನೀಡುತ್ತಾ, ಮಠ ಮಂದಿರಗಳಿಗೆ ದಾನ ಧರ್ಮ ಮಾಡುತ್ತಿದ್ದ ಶ್ರೀಪಾದ್ ಅವರು ಎಂದಿಗೂ ತಮ್ಮ ಈ ಸೇವೆಯ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಂಡವರಲ್ಲ. ಪ್ರಮುಖವಾಗಿ, ಕೊರೋನಾದಿಂದಾಗಿ ಮೃತಪಟ್ಟ ಬಹಳಷ್ಟು ಮಂದಿಯ ಶವಸಂಸ್ಕಾರಕ್ಕೆ ಇವರು ನೀಡಿದ ನೆರವು ಬಹುತೇಕ ಮಂದಿಗೆ ತಿಳಿದಿಲ್ಲ. ತಮ್ಮ ವೃತ್ತಿ ಕ್ಷೇತ್ರದ ಹೊರತಾಗಿ ಧರ್ಮ, ಅಧ್ಯಾತ್ಮ, ವೇದಾಧ್ಯಯ, ಮಾಧ್ವ ಸಂಪ್ರದಾಯದ ಹಲವು ಪಾಠಗಳನ್ನು ಇಂದಿಗೂ ಇವರು ಅಭ್ಯಾಸ ಮಾಡುತ್ತಾ, ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡಿದ್ದರು.
ಸುಮಾರು 40 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ (ಆರ್ಎಸ್ಎಸ್)ಯ ಕಾರ್ಯಕರ್ತರಾಗಿ ಪ್ರಮುಖರಾಗಿ ಸೇವೆ ಸಲ್ಲಿಸಿದ್ದ ಅವರು, ಜಿಲ್ಲಾ ಮಟ್ಟದಲ್ಲೂ ಉತ್ತಮ ಹೆಸರು ಗಳಿಸಿದ್ದರು.
ಇವರ ನಿಧನಕ್ಕೆ ನಗರದ ಗಣ್ಯರು, ತಾಲೂಕು ಬ್ರಾಹ್ಮಣ ಮಹಾಸಭಾ ಸಂತಾಪ ಸೂಚಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post