ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭವಿಷ್ಯದಲ್ಲಿ ಆಪ್ತ ಸಮಾಲೋಚನೆ ಅತ್ಯಂತ ಅಗತ್ಯ ಕ್ಷೇತ್ರವಾಗಲಿದ್ದು, ಈ ಬಗೆಗಿನ ಸಾಂಪ್ರದಾಯಿಕ ಅಧ್ಯಯನ ನಡೆಸಿರುವ ವಿದ್ಯಾರ್ಥಿಗಳ ಪ್ರಾಮುಖ್ಯತೆಯೂ ಸಹ ಹೆಚ್ಚಲಿದೆ ಎಂದು ಸುಬ್ಬಯ್ಯ ದಂತ ಮಹಾವಿದ್ಯಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ. ವಿನಯಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕ್ಲಿನಿಕಲ್ ಸೈಕಾಲಜಿ (ನೈದಾನಿಕ ಮನೋವಿಜ್ಞಾನ) ವಿಭಾಗ ಆಯೋಜಿಸಿದ್ದ ಎರಡನೆಯ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗೆಗಿನ ಪಿಡುಗುಗಳು ಇನ್ನೂ ಪ್ರಭಾವಿಯಾಗಿವೆ. ಈ ಸನ್ನಿವೇಶವನ್ನು ದೂರ ಮಾಡುವ ಪ್ರಮುಖ ಜವಾಬ್ದಾರಿ ನಮ್ಮ ಮನಃಶಾಸ್ತ್ರ ವಿದ್ಯಾರ್ಥಿಗಳ ಮುಂದಿದೆ ಎಂದರು.
ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ ಮಾತನಾಡಿ, ವಿದ್ಯಾರ್ಥಿಗಳನ್ನು ವೃತ್ತಿಪರವಾಗಿ ತರಬೇತಿಗೊಳಿಸುವುದು ನಮ್ಮ ಕಾಲೇಜಿನ ಮುಖ್ಯ ಉದ್ದೇಶವಾಗಿತ್ತು. ಈ ಉದ್ದೇಶ ಖಂಡಿತವಾಗಿ ಸಾಧಿತಗೊಂಡಿದೆ ಎನ್ನುವುದಕ್ಕೆ ವಿದ್ಯಾರ್ಥಿಗಳು ಹೊಂದಿರುವ ಪ್ರಾಯೋಗಿಕ ಪ್ರಮಾಣಪತ್ರಗಳೇ ನಿದರ್ಶನ. ಈ ಅನುಭವಗಳನ್ನು ವಿದ್ಯಾರ್ಥಿಗಳು ಬಹುಬೇಗ ಸಮುದಾಯಕ್ಕೆ ಉಪಯುಕ್ತವಾಗಿ ಬಳಸಲಿದ್ದಾರೆ ಎಂದರು.
ವಿದ್ಯಾರ್ಥಿಗಳು ನಿರಾಶ್ರಿತ ಕೇಂದ್ರಗಳಲ್ಲಿ ನಡೆಸಿದ ಆಪ್ತ ಸಮಾಲೋಚನೆ, ಹೊಂಗಿರಣ ಶಾಲೆಯಲ್ಲಿ ನಡೆಸಿದ ಸಂವಾದ, ಶಿವಮೊಗ್ಗ ಮಹಿಳಾ ಕಾರಾಗೃಹದಲ್ಲಿ ನಡೆಸಿದ ಆಪ್ತ ಸಮಾಲೋಚನೆ ಮತ್ತು ಖೈದಿಗಳೊಂದಿಗೆ ಸಂವಾದ, ಮಾನಸ ಆಸ್ಪತ್ರೆಯಲ್ಲಿ ನಡೆಸಿದ ಎರಡು ವರ್ಷದ ಕ್ಲಿನಿಕಲ್ ಅಧ್ಯಯನ ಮುಂತಾದ ಪ್ರಾಯೋಗಿಕ ಕಲಿಕೆಗಳನ್ನು ನೆನೆದರು.
ಮಾನಸ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ ಪೈ, ಎಂಸಿಸಿಎಸ್ ನಿರ್ದೇಶಕರಾದ ಪ್ರೊ.ರಾಜೇಂದ್ರಚೆನ್ನಿ, ಕಾಲೇಜಿನ ವೈಮಾನಿಕ ಮನೋವಿಜ್ಞಾನ ವಿಭಾಗದ ಸಂಯೋಜಕರಾದ ಸಿಸ್ಟರ್ ಮಾರಿಈವ್ಲಿನ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















