ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಹಲವು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಬೆಳಗಿನ ವೇಳೆ (ಬೆಳಗ್ಗೆ 8ಗಂಟೆಯಿಂದ ರಾತ್ರಿ 8ರವರೆಗೆ) ಹಲವು ರಸ್ತೆಗಳಲ್ಲಿ ಭಾರೀ ವಾಹನ ಸಂಚಾರವನ್ನು ನಿಷೇಧಿಸಲು ನಿರ್ಧರಿಸಿ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಈ ಕುರಿತು ನಿರ್ಧಾರ ಪ್ರಕಟಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಈವರೆಗೂ ಭಾರೀ ವಾಹನ ಸಂಚಾರ ನಿರ್ಬಂಧಕ್ಕೆ ಕಾನೂನು ಇರಲಿಲ್ಲ. ಈಗ ಇದನ್ನು ರೂಪಿಸಲಾಗುತ್ತಿದ್ದು, ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತದೆ. ಅಧಿಸೂಚನೆ ನಂತರ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಇದರ ನಂತರ ಅಚಿತಿಮ ಅಧಿಸೂಚನೆ ಹೊರಬೀಳಲಿದೆ ಎಂದು ತಿಳಿಸಿದರು.
ಇನ್ನು ನಗರಸಾರಿಗೆ ಬಸ್ ಸಂಚಾರ ಸಮಯವನ್ನೂ ಸಹ ಅತ್ಯಂತ ಸುವ್ಯವಸ್ಥಿತ ವೈಜ್ಞಾನಿಕ ರೀತಿಯಲ್ಲಿ ನಿಗಧಿಪಡಿಸಲು ನಿರ್ಧರಿಸಲಾಗಿದ್ದು, ನಗರ ವ್ಯಾಪ್ತಿಯಲ್ಲಿ ನಿಗಧಿತ ಸ್ಥಳಗಳಲ್ಲಿ ಮಾತ್ರ ಬಸ್ ನಿಲುಗಡೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಯಾವೆಲ್ಲಾ ರಸ್ತೆಯಲ್ಲಿ ಸಂಚಾರ ನಿರ್ಬಂಧಕ್ಕೆ ಪ್ರಸ್ತಾವನೆ:
- ಬಿಹೆಚ್ ರಸ್ತೆಯಿಂದ ಸವಳಂಗ ರಸ್ತೆಯ ಉಷಾ ನರ್ಸಿಂಗ್ ಹೋಮ್ವರೆಗೆ
- ಎನ್ಟಿ ರಸ್ತೆಯ ಸಂದೇಶ್ ಮೋಟಾರ್ಸ್ನಿಂದ ಎಪಿಎಂಸಿವರೆಗೆ
- ಅಶೋಕ ವೃತ್ತದಿಂದ ಅಮೀರ್ ಅಹಮದ್ ವೃತ್ತದವರೆಗೆ
- ಅಮೀರ್ ಅಹಮದ್ ಸರ್ಕಲ್ನಿಂದ ಗೋಪಿ ಸರ್ಕಲ್ವರೆಗೆ ಹಾಗೂ ಸವಾರ್ಲೈನ್ ರಸ್ತೆ ಮತ್ತು ಎಲ್ಎಲ್ಆರ್ ರಸ್ತೆ
- ಸರ್ಕ್ಯೂಟ್ ಹೌಸ್ನಿಂದ ಶಿವಮೂರ್ತಿ ಸರ್ಕಲ್ವರೆಗೆ (ಕುವೆಂಪು ರಸ್ತೆ)



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















