ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ವಾಹನ ಚಾಲಕರು ಹಾಗೂ ಸಾರ್ವಜನಿಕರ ಪ್ರಾಣ ರಕ್ಷಣೆಗೆ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ನಿಯಮಗಳನ್ನು ರೂಪಿಸಲಾಗಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಜಿಲ್ಲಾಧಿಕಾರಿ ಡಾ: ಹೆಚ್.ಎನ್. ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹದ ಕರಪತ್ರ ಹಾಗೂ ಪೋಸ್ಟರ್ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ರಸ್ತೆ ಸುರಕ್ಷತಾ ಸಪ್ತಾಹವನ್ನು ಜಿಲ್ಲೆಯಲ್ಲಿ ಜನವರಿ 11 ರಿಂದ 17 ರವರೆಗೆ ಆಚರಿಸಲಾಗುತ್ತಿದ್ದು, ಶಾಲಾ, ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಹಾಗೂ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ 2022 ನೇ ಸಾಲಿನಲ್ಲಿ ರಸ್ತೆ ಅಪಘಾತದಿಂದ 486 ಜನ ಮೃತಪಟ್ಟಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಕೆಲವರು ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದಾರೆ. 486 ಜನರ ಸಾವುಗಳ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವುದು, ಮದ್ಯಪಾನ ಸೇವನೆ ಮಾಡಿ ವಾಹನ ಚಾಲನೆ ಮಾಡುವುದರಿಂದ ಒಟ್ಟಾರೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಉಂಟಾಗಿದೆ ಎಂದರು.
ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷತಾ ನಿಯಮಗಳು ಪಾಲಿಸದೆ ಇದ್ದಾಗ ದಂಡ ವಿಧಿಸುವುದು ಪೊಲೀಸ್ ಇಲಾಖೆಯ ಕೆಲಸದ ಒಂದು ಭಾಗವಾದರೇ ಇನ್ನೊಂದು ಸಾರ್ವಜನಿಕರ ಪ್ರಾಣ ರಕ್ಷಣೆ ಕೂಡ ಒಂದು. ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದರೇ ಯಾವುದೇ ಕಾರಣಕ್ಕೂ ಇಲಾಖೆ ದಂಡ ವಿಧಿಸುವುದಿಲ್ಲ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಅವರು ಮಾತನಾಡಿ, ವಾಹನ ಚಾಲನೆ ಮಾಡುವಾಗ ಸ್ಪೀಡ್ ಲಿಮಿಟ್ನ್ನು ಅನುಸರಿಸಿ, ಅತಿವೇಗ ಅಪಘಾತಕ್ಕೆ ಕಾರಣ. ವಾಹನ ಚಾಲನೆ ಮಾಡುವಾಗ ಒಂದು ಕ್ಷಣಿಕ ತಪ್ಪು ಅಪಘಾತಕ್ಕೆ ಕಾರಣವಾಗುತ್ತದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಹಾಗೂ ನಿಯಮ ಪಾಲನೆ ಅತಿ ಮುಖ್ಯ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕನಂದ ಅವರು ಮಾತನಾಡಿ, ಜಿಲ್ಲೆಯಲ್ಲಿ ಜನವರಿ 11 ರಿಂದ 17 ರವರೆಗೆ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆರೋಗ್ಯ ಇಲಾಖೆಯಿಂದ ಅಪಘಾತವಾದಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ, ಕಾನೂನು ಸೇವೆಗಳ ಪ್ರಾಧಿಕಾರದಿಂದ ಅಪಘಾತದ ಪ್ರಕರಣದಲ್ಲಿ ಇರುವ ಕಾನೂನುಗಳ ಬಗ್ಗೆ,ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಆರ್.ಸಿ. ಪುಸ್ತಕ, ವಾಹನ ವಿಮೆ, ಎಫ್.ಸಿ ಕುರಿತಂತೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಾಹನಗಳ ವಿಧದ ಆಧಾರದ ಮೇಲೆ ನಿಗಧಿಪಡಿಸಿರುವ ಸಂಖ್ಯೆಗಳಲ್ಲಿ ಮಾತ್ರ ಜನರು ಸಂಚರಿಸಬೇಕು. ದ್ವಿಚಕ್ರ ವಾಹನಗಳ ಮೇಲೆ ಮೂರು ಜನ ಸಂಚಿರುಸುವುದು ಅಪಘಾತಕ್ಕೆ ಕಾರಣವಾಗುತ್ತದೆ. ಅಪಘಾತಕ್ಕೆ ಸಂಬಂಧಿಸಿದಂತೆ ವಿಮೆ ಕಂಪನಿಗಳು ಹಣ ನೀಡುವಾಗ ನ್ಯಾಯಾಲಯಗಳಲ್ಲಿ ಆರ್.ಸಿ. ಪುಸ್ತಕ, ಎಫ್.ಸಿ, ಡಿ.ಎಲ್ ಗಳನ್ನು ಪರಿಶೀಲಿಸಲಾಗುವುದು. ಅವುಗಳು ಚಾಲ್ತಿಯಲ್ಲಿರಬೇಕು. ವಾಹನ ಚಲಕರು ದಾಖಲಾತಿಗಳ ಚಾಲ್ತಿ ಅವಧಿಯನ್ನು ತಿಂಗಳಿಗೊಮ್ಮೆ ಪರಿಶೀಲಿಸಿಕೊಳ್ಳಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post