ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪ್ರಾಚ್ಯ ವಿದ್ಯೆಯು ಭಾರತದ ಸಂಸ್ಕೃತಿ ತಿಳಿಸುವುದರಿಂದ ಇಲ್ಲಿನ ಸಂಶೋಧನೆಯಿಂದ ಹೊರಬರುವ ಪುಸ್ತಕಗಳ ಸಂಖ್ಯೆಗಿಂತಲೂ, ಅಲ್ಲಿ ನಡೆಯುವ ಅಕ್ಷರ ಅಧ್ಯಯನಗಳು ಪ್ರಾಮುಖ್ಯತೆ ಪಡೆಯಬೇಕು ಎಂದು ವಿದ್ವಾಂಸ ಡಾ.ಎಚ್.ವಿ. ನಾಗರಾಜ ರಾವ್ ಆಶಯ ವ್ಯಕ್ತಪಡಿಸಿದರು.
ಪ್ರಾಚ್ಯ ವಿದ್ಯಾ ಸಂಶೋಧನಾಲಯ ಮತ್ತು ವ್ಯಾಸ ತೀರ್ಥ ಸಂಶೋಧನಾ ಪ್ರತಿಷ್ಠಾನದಿಂದ ಮಾನಸಗಂಗೋತ್ರಿಯ #ManasaGangotri ವಿಜ್ಞಾನ ಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಕಾಳಿದಾಸ ಕೃತಿ ಸಮೀಕ್ಷಾ ಕಾರ್ಯಾಗಾರದಲ್ಲಿ ಸಮಾರೋಪ ಭಾಷಣ ಮಾಡಿದರು.
ಸಂಸ್ಕೃತ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕಾಗಿ ಸೇವೆ ಸಲ್ಲಿಸಿರುವ ಕರ್ನಾಟಕದ ವಿದ್ವಾಂಸರ ಬಗ್ಗೆಯೂ ಸಂಶೋಧನೆ ಮತ್ತು ಕಾರ್ಯಾಗಾರ ನಡೆಯಬೇಕು. ಪ್ರಪಂಚದ ಎಲ್ಲಾ ಕವಿಗಳು ಕಾಳಿದಾಸರ ವಿಚಾರಧಾರೆಯನ್ನು ಒಪ್ಪಿಕೊಳ್ಳುತ್ತಿದ್ದರು. ಅವರ ಕುರಿತು ಐನೂರಕ್ಕಿಂತಲೂ ಹೆಚ್ಚು ಪಿಎಚ್’ಡಿ #PHD ಸಂಶೋಧನೆಗಳೂ, ಲೆಕ್ಕವಿಲ್ಲದಷ್ಟು ಪುಸ್ತಕಗಳು ಪ್ರಕಟಗೊಂಡಿವೆ. ಇವು ಕಾಳಿದಾಸರ ಕುರಿತ ಅಧ್ಯಯನದ ಬಾಹುಗಳನ್ನು ಪರಿಚಯಿಸುತ್ತದೆ ಎಂದರು.
ನಾಲ್ಕೂ ವೇದಗಳಿಗೆ ಭಾಷ್ಯ ಬರೆದ ಏಕೈಕ ವಿದ್ವಾಂಸ ಸಾಯನಾಚಾರ್ಯ, ಟಿಪ್ಪು ಸುಲ್ತಾನನ ಕಾಲದಲ್ಲಿ ಆಡಳಿತ ಸಮಿತಿಯಲ್ಲಿ ಗುರುತಿಸಿಕೊಂಡಿದ್ದ ಪ್ರಧಾನ್ ವೆಂಕಪ್ಪಯ್ಯ ಅವರು ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆಗಳನ್ನು ನೀಡಿದ್ದಾರೆ. ಜನರಿಗೆ ಅಪರಿಚಿತರಾಗಿಯೇ ಉಳಿದ ಈ ಸಾಧಕರ ಕುರಿತು ಸಂಶೋಧನೆಯ ಕಾರ್ಯ ಹೆಚ್ಚಬೇಕು ಎಂದರು.
ವಿಶ್ರಾಂತ ಕುಲಪತಿ ಪ್ರೊ.ಜಿ. ಹೇಮಂತ್ಕುಮಾರ್, ಎಸ್ವಿಎಸ್ಪಿ ಪ್ರೊ.ಸಿ.ಎಚ್. ಶ್ರೀನಿವಾಸ ಮೂರ್ತಿ, ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ. ಮಧುಸೂದನಾಚಾರ್ಯ, ಪ್ರಭಾರ ನಿರ್ದೇಶಕಿ ಡಾ.ಸಿ. ಪವಿತ್ರಾ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















