ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮ ದೇಹದಲ್ಲಿನ ಆತ್ಮ ದೇವರಲ್ಲಿ ಐಕ್ಯವಾದಾಗ ಅದನ್ನು ಮೋಕ್ಷ ಅಥವಾ ಮುಕ್ತಿ ಎನ್ನುತ್ತೇವೆ ಮುಕ್ತಿ ಪಡೆಯುವುದು ಹೇಗೆ ಎಂಬುದೇ ನಮ್ಮೆಲ್ಲರ ಪ್ರಶ್ನೆ. ಈ ಚಿಂತನೆಗೆ ದೇವತಾ ಕಾರ್ಯಗಳೇ ದಾರಿ ಎಂದು ತಿಳಿದು. ಯಜ್ಞ ಯಾಗಾದಿ ಪೂಜೆ ಪುನಸ್ಕಾರಗಳನ್ನು ಮಾಡುವುದನ್ನು ನೋಡಿದ್ದೇವೆ. ಇದು ದೇವರನ್ನು ಸೇರುವ ಒಂದು ಮಾರ್ಗವಾಗಿದೆ. ಆದರೆ ಅದಕ್ಕಿಂತ ಸುಲಭವಾಗಿ ಇನ್ನೊಂದು ಮಾರ್ಗವಿದೆ ಅದೇ ಸತ್ಸಂಗವೆಂದು ಖ್ಯಾತ ಅಂಕಣಕಾರರು ಸಂಸ್ಕೃತಿ ಚಿಂತಕ ಡಾ. ಗುರುರಾಜ್ ಪೋಶೆಟ್ಟಿಹಳ್ಳಿ ತಿಳಿಸಿದರು.
ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮ ತೊಟ್ಲಿ ಗೇಟ್ನಲ್ಲಿರುವ ಶ್ರೀ ಸದ್ಗುರು ಕ್ಷೇತ್ರ ದತ್ತಾತ್ರೇಯ ಮತ್ತು ಸಾಯಿಬಾಬಾ ಮಂದಿರದಲ್ಲಿ ಜಿಲ್ಲಾ ಕನ್ನಡಸಿರಿ ಸಾಹಿತ್ಯ ಪರಿಷತ್ತು, ಹರಿಕೃಷ್ಣ ಜಾನಪದ ಸಾಂಸ್ಕೃತಿಕ ಕಲಾ ಸೇವಾ ಟ್ರಸ್ಟ್ ಸುಗಟೂರು, ಜಿಲ್ಲಾ ಸಿರಿಗನ್ನಡ ವೇದಿಕೆ ಕೋಲಾರ ವತಿಯಿಂದ ಹಮ್ಮಿಕೊಂಡಿರುವ ಭಕ್ತಿ ಕುಸುಮಾಂಜಲಿ ಗಾನ ಕಲಾ ಸಂಭ್ರಮ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ನಮ್ಮಲ್ಲಿರುವ ಜ್ಞಾನದ ಪ್ರವಾಸ ಪರಮಾಪ್ತ ಮಿತ್ರನಂತೆ ಕಾಪಾಡುವುದರಿಂದ ಜ್ಞಾನಕ್ಕಿಂತ ಶ್ರೇಷ್ಠವಾದ ಸ್ನೇಹಿತ ಇರುವುದಿಲ್ಲ. ಭಕ್ತಿಯಲ್ಲಿ ಅದ್ಭುತವಾದ ಶಕ್ತಿ ಇರುವುದರ ಜೊತೆಗೆ ಅಂತ್ಯಜರಾದಿಯಾಗಿ ಪಂಡಿತರವರಿಗೆ, ಎಲ್ಲರಿಗೂ ಇದು ಲಭ್ಯವಾಗುವುದರಿಂದ ಮತ್ತು ದೇವರ ಸಾಕ್ಷಾತ್ಕಾರಕ್ಕೆ ಇರುವ ಎಲ್ಲಾ ಮಾರ್ಗಗಳಲ್ಲಿ ಭಕ್ತಿಯೇ ಸರ್ವರಿಗೂ ಸರಳ ಸಾಧನವಾಗಿರುವುದರಿಂದ, ಅದನ್ನು ನಾವು ಸತ್ಸಂಗದಿಂದ ಸುಲಭವಾಗಿ ಪಡೆದುಕೊಳ್ಳಬಹುದು ಎಂದು ತಮ್ಮ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸದ್ಗುರು ಕ್ಷೇತ್ರ ದತ್ತಾತ್ರೇಯ ಮತ್ತು ಸಾಯಿಬಾಬಾ ಮಂದಿರದ ಧರ್ಮದರ್ಶಿಗಳು ಮತ್ತು ಸಂಸ್ಥಾಪಕರಾದ ಎನ್ ವೆಂಕಟೇಶ್ ರವರು ಮಾತನಾಡುತ್ತಾ ಮನುಷ್ಯರಾಗಿ ಹುಟ್ಟಿದ್ದೇವೆ, ಮನುಷ್ಯರಾಗಿ ಸಾಯುತ್ತೇವೆ ಹುಟ್ಟು ಉಚಿತ ಸಾವು ಖಚಿತ ಆದರೆ ನಾವು ಜೀವಿಸುವ ನಡುವೆ ಏನಾದ ರೊಂದು ಸಾಧನೆ ಮಾಡಿ ಶಾಶ್ವತವಾಗಿ ಉಳಿಯುವಂತೆ ಮಾಡಿದಾಗ ಮುಂದಿನ ಪೀಳಿಗೆ ನಮ್ಮನ್ನು ನೆನೆಸಿಕೊಳ್ಳುತ್ತದೆ ಎಂದು ತಿಳಿಸುತ್ತಾ ನಾವು ಬೆಳೆಸುತ್ತಿರುವ ಶ್ರೀ ಸದ್ಗುರು ಕ್ಷೇತ್ರ ದತ್ತಾತ್ರೇಯ ಮತ್ತು ಸಾಯಿಬಾಬಾ ಮಂದಿರವನ್ನು ಪ್ರಾರಂಭಿಸಿದ್ದೇವೆ. ಇದರ ಸದುಪಯೋಗವನ್ನು ತಾವೆಲ್ಲರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಎಚ್. ರಾಮಚಂದ್ರಪ್ಪನವರು ಕಲಾವಿದರನ್ನು ಕುರಿತು ನಿಮ್ಮಲ್ಲಿರುವ ಅಂತರ್ಶಕ್ತಿಯನ್ನು ಗಮನಿಸಿದರೆ ನಿಜವಾಗಲೂ ನೀವು ಯಾವುದೇ ಕಪಟ ಮೋಸ ದ್ವೇಷ ತಿಳಿಯದೆ ಇರುವ ಸತ್ಸಂಗಿಗಳಾಗಿ ಬದುಕುತ್ತಿರುವುದು ಹಾಗೂ ಸ್ನೇಹ ಪ್ರೀತಿ-ವಿಶ್ವಾಸದಿಂದ ಒಂದುಗೂಡಿ ಇಲ್ಲಿಗೆ ಬಂದು ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಈ ಕ್ಷೇತ್ರದ ಮಹಿಮೆಯೇ ಸರಿ ಎಂದು ಅಭಿಪ್ರಾಯಸಿದರು.
ಕನ್ನಡಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಕಸಾಪ ತಾಲ್ಲೂಕು ಗೌರವಾಧ್ಯಕ್ಷರಾದ ಟಿ. ಸುಬ್ಬರಾಮಯ್ಯ ಮಾತನಾಡಿ ನಾವು ಧ್ಯಾನದಿಂದ ಏನನ್ನು ಬೇಕಾದರೂ ಸಾಧಿಸಬಹುದು ಆದರೆ ಅದಕ್ಕೆ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸಬೇಕಾಗುತ್ತದೆ.ಆಗ ತನ್ನಷ್ಷಕ್ಕೆ ತಾನೇ ಭಕ್ತಿಯ ಭಾವ ಬೆಳೆಯುತ್ತದೆ. ನಾವು ಬದುಕಿದ ರೀತಿ ನೀತಿಗಳು ಮುಕ್ತಿಯ ಮಾರ್ಗಗಳಾಗಿವೆ. ಸರಳ ಜೀವನ, ಸನ್ನಡತೆ, ಪರೋಪ ಕಾರ, ಸಹೃದಯತೆ ಇತ್ಯಾದಿಗಳ ಜೊತೆಗೆ ಜೀವನದ ನಡೆಯನ್ನು ನಿಯಂತ್ರಿಸಲು ಮನಸ್ಸಿನ ಹಿಡಿತ ವಿದ್ದಾಗಲೇ ಸರಿಯಾದ ಮುಕ್ತಿ ಪಡೆಯಲು ಖಂಡಿತ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸೋಮಶೇಖರ್ ನಿರೂಪಿಸಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಿಯಾಂಕ ಆಂಜನಪ್ಪ, ಪ್ರಾಯೋಜಕರಾದ ಬಳೆ ಸೀತಾರಾಮಯ್ಯ, ಭಗವಾನ್ ಸಿಂಗ್, ಶ್ರೀರಾಮಪ್ಪ ಪಿಎಲ್ ಗೋಪಾಲಕೃಷ್ಣ ಉಪಸ್ಥಿತರಿದ್ದು, ಹರಿಕೃಷ್ಣ ಜಾನಪದ ಸಾಂಸ್ಕೃತಿಕ ಕಲಾ ತಂಡದಿಂದ ಪ್ರಾರ್ಥಿಸಲಾಯಿತು ಹಾಗೂ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















