ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಂದೆ-ತಾಯಿ ಹಿರಿಯರ ಹಾಗೂ ಗುರುಗಳ ಸಲಹೆಯನ್ನು ಮತ್ತು ಆಶೀರ್ವಾದವನ್ನು ಪಡೆದು ನಿರ್ದಿಷ್ಟಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿದಾಗ ಯಶಸ್ಸು ಸಾಧ್ಯ ಎಂದು ಸಾಗರ ಡಿವೈಎಸ್ಪಿ, ಐಪಿಎಸ್ ರೋಹನ್ ಜಗದೀಶ್ ಹೇಳಿದ್ದಾರೆ.
ಅವರು ಇಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಸಹ್ಯಾದ್ರಿ ವಿಜ್ಞಾನ ಪರಿಷತ್ ಮತ್ತು ಕ್ರೀಡಾ ವಿಭಾಗದ ವಾರ್ಷಿಕ ಚಟುವಟಿಕೆಗಳು ಹಾಗೂ ಸಹ್ಯಾದ್ರಿ ಮಹಿಳಾ ವಿದ್ಯಾರ್ಥಿ ನಿಲಯದ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ ೨೦೨೩ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾನು ಕೂಡ ವಿದ್ಯಾರ್ಥಿ ಜೀವನದಲ್ಲಿ ನಿಮ್ಮ ಹಾಗೆ ಎಲ್ಲಾ ಚೇಷ್ಟೆಗಳನ್ನು ಮಾಡಿದ್ದೇನೆ. ನೀವು ಹೇಳುವಷ್ಟು, ಹೊಗಳುವಷ್ಟು ದೊಡ್ಡ ವ್ಯಕ್ತಿಯಲ್ಲ. ಇನ್ನು ನಾನು ಕಲಿಯುವುದು ತುಂಬಾಇದೆ. ಸೀಮಿತ ವ್ಯಕ್ತಿಯಾಗಿದ್ದೇನೆ. ನಿಮಗೆಲ್ಲರಿಗೂ ಜೀವನದಲ್ಲಿ ತುಂಬಾ ಅವಕಾಶವಿದೆ. ಹೊಸ ಹೊಸ ಆವಿಷ್ಕಾರಗಳು ಆಗಿದೆ. ಸಾಫ್ಟ್ವೇರ್ನಲ್ಲಿ 30 ಮಿಲಿಯನ್ ಅವಕಾಶಗಳಿವೆ. ಯಾರೂ ಕೂಡ ನಿರಾಶರಾಗುವುದು ಬೇಡ. ದೃಢ ಮನಸ್ಸಿನಿಂದ ಕೀಳರಿಮೆಬಿಟ್ಟು ಸಾಧನೆಯನ್ನುಮಾಡಿ ಎಂದರು.
Also read: ಪತ್ರಕರ್ತನ ಮೇಲೆ ಹಲ್ಲೆ ಹಿನ್ನೆಲೆ ದಾವಣಗೆರೆ ಎಸ್ಪಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ
ಸಹ್ಯಾದ್ರಿ ಕಾಲೇಜಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಇದೆ. ಪೋಷಕರು ನಿಮ್ಮ ಮೇಲೆ ಅನೇಕ ಭರವಸೆಯನ್ನಿಟ್ಟಿರುತ್ತಾರೆ. ಪ್ರಯತ್ನ ಪಡಬೇಕು ಎನ್ನುವ ಛಲ ನಿಮಗಿರಬೇಕು. ಸಾಧನೆ ಮಾಡಬೇಕಾದರೆ ಕಠಿಣ ಶ್ರಮದ ಅಗತ್ಯವಿದೆ. ಗುರುಗಳ, ಹಿರಿಯರ ಅನುಭವ ಅತಿ ಮುಖ್ಯ. ರಾಮಾಯಣ, ಮಹಾಭಾರತ ಕಾಲದಿಂದಲೂ ಭೀಷ್ಮ ದ್ರೋಣಾಧಿಗಳ, ಋಷಿ ಮುನಿಗಳ ಜ್ಞಾನವನ್ನು ಪಾಂಡವರು ಮತ್ತು ಕೌರವರು ಪಡೆದಿದ್ದನ್ನು ನಾವು ಕೇಳಿದ್ದೇವೆ. ಕಾಲೇಜು ಜೀವನದಲ್ಲಿ ನೀವು ಏನು ಸಾಧನೆ ಮಾಡಿದ್ದೀರೊ ಅದು ನಿಮಗೆ ಮುಂದಿನ ಜೀವನಕ್ಕೆ ಸಹಕಾರಿಯಾಗುತ್ತದೆ. ಐಪಿಎಸ್, ಐಎಎಸ್, ಕೆಪಿಎಸ್ಸಿ, ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು 50 ಲಕ್ಷ ವಿದ್ಯಾರ್ಥಿಗಳು ಬರೆಯುತ್ತಾರೆ. ಆದರೆ ತೇರ್ಗಡೆಯಾಗುವವರು ಕೇವಲ 400 ಜನ. ನಾನು ಕೂಡ 2 ಬಾರಿ ಅನುತ್ತೀರ್ಣನಾಗಿದ್ದೆ ಮತ್ತೆ ಛಲ ಬಿಡದೆ ಬರೆದು ಒಳ್ಳೆಯ ರ್ಯಾಂಕ್ನೊಂದಿಗೆ ಪಾಸಾದೆ ಎಂದರು.
ನನ್ನ ಐಎಎಸ್ ಆದ ಕೂಡಲೆ ಗೆಳೆಯರ ಸಲಹೆ ಮೇರೆಗೆ ಐಎಎಸ್, ಐಪಿಎಸ್ ಹೇಗೆ ಓದುವುದು ಎಂಬ ಬಗ್ಗೆ ಒಂದು ಪುಸ್ತಕವನ್ನು ಬರೆದೆ ಅದು ಕೆಲವೇ ದಿನಗಳಲ್ಲಿ 6 ಸಾವಿರ ಪ್ರತಿಗಳು ಖಾಲಿಯಾಯಿತು. ಯುಪಿಎಸ್ಸಿ ಪರೀಕ್ಷೆ ಬಗ್ಗೆ ಬರೆದ ಪುಸ್ತಕ 8 ಸಾವಿರ ಪ್ರತಿಗಳು ಖಾಲಿಯಾಯಿತು. ನನಗೆ ಇದರಿಂದ ಒಳ್ಳೆಯ ಉತ್ತೇಜನ ಸಿಕ್ಕಿತು. ಅನೇಕ ಕ್ಷೇತ್ರಗಳ ಮಾಹಿತಿಯೂ ಲಭ್ಯವಾಯಿತು. ಗಣ್ಯ ವ್ಯಕ್ತಿಗಳ ಸಂಪರ್ಕವಾಯಿತು. ಅನೇಕ ಸಾಧಕರ ಒಡನಾಟವಾಯಿತು. ಒಳ್ಳೆಯ ವ್ಯಕ್ತಿಗಳ ಮತ್ತು ಸ್ನೇಹಿತರ ಒಡನಾಟದಿಂದ ನಮ್ಮ ಗುಣಸ್ವಭಾವ ಕೂಡ ಉತ್ತಮಗೊಳ್ಳುತ್ತದೆ. ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎಂಬ ಛಲವಿರಬೇಕು ಎಂದರು.
ಈ ಸಂದರ್ಭದಲ್ಲಿ ಅಂತರ್ರಾಷ್ಟ್ರೀಯ ಜನಪದ ಗಾಯಕರಾದ ಜೋಗಿಲ ಸಿದ್ದರಾಜು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಮುನೀರ್ಪಾಷ, ಪ್ರಾಚಾರ್ಯ ಪ್ರೊ.ಧನಂಜಯ್, ಪ್ರೊ.ವೀಣಾ ಎಂ.ಕೆ., ಮೊದಲಾದವರಿದ್ದರು. ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎನ್. ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post