ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನರ ಅಭಿಪ್ರಾಯ ಪಡೆದು ಪ್ರಣಾಳಿಕೆ ತಯಾರು ಮಾಡುವುದಾಗಿ ಜಿಲ್ಲಾ ಬಿಜೆಪಿ ಪ್ರಣಾಳಿಕೆ ಸಮಿತಿಯ ಸಂಚಾಲಕ ಡಾ. ಧನಂಜಯ ಸರ್ಜಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಅಧಿಕಾರದ ಅವಧಿಯಲ್ಲಿ ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕಳೆದ 70 ವರ್ಷಗಳಲ್ಲಿ ಕಂಡರಿಯದ ಅಭಿವೃದ್ಧಿಯಾಗಿದೆ. 3 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣವಾಗಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ 6.5ಕೋಟಿ ನಲ್ಲಿ ನೀರು ಸಂಪರ್ಕ ನೀಡಲಾಗಿದೆ. 15 ಸಾವಿರ ಗ್ರಾಮಗಳಿಗೆ ವಿದ್ಯುತ್ ಒದಗಿಸಲಾಗಿದೆ. ಕರೋನಾ ಸಂದರ್ಭದಲ್ಲಿ ವಿಶ್ವವೇ ಸಂಕಷ್ಟದಲ್ಲಿದ್ದಾಗ ಭಾರತದಲ್ಲಿ 225 ಕೋಟಿ ವ್ಯಾಕ್ಸಿನೇಷನ್ ಮಾಡುವುದರ ಮೂಲಕ ದಾಖಲೆ ನಿರ್ಮಾಣ ಮಾಡಲಾಗಿದೆ. ಕರ್ನಾಟಕದಲ್ಲಿ ರೈಲ್ವೆಗೆ 3,500 ಕೋಟಿ ನೀಡಿದ್ದು, 59 ಲಕ್ಷ ರೈತರಿಗೆ ಕಿಸಾನ್ ಸನ್ಮಾನ್ ಯೋಜನೆಯಡಿ 10 ಸಾವಿರ ರೂ. ನೀಡಲಾಗಿದೆ. ಶಿವಮೊಗ್ಗ ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ವಿಮಾನ ನಿಲ್ದಾಣ ಆಗಿದೆ. ಮೆಡಿಕಲ್ ಕಾಲೇಜು, ಕೃಷಿ ವಿವಿ, ಆಯುಷ್ ವಿವಿ, ಇನ್ನಿತರ ಅನೇಕ ಅಭಿವೃದ್ಧಿಗಳು ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಗಿದೆ.
ಆದರೂ ಕೂಡ ಜನರಿಂದಲೇ ಫೀಡ್ ಬ್ಯಾಕ್ ತೆಗೆದುಕೊಳ್ಳುವ ದೃಷ್ಟಿಯಿಂದ ಜಿಲ್ಲೆ, ವಿಧಾನಸಭಾ ಕ್ಷೇತ್ರ ಮತ್ತು ರಾಜ್ಯ ಮಟ್ಟದಲ್ಲಿ ಅಭಿಪ್ರಾಯ ಪಡೆಯಲು ಬಿಜೆಪಿಯ ಎಲ್ಲಾ ಮೋರ್ಚಾಗಳ ಕಾರ್ಯಕರ್ತರು ಈಗಾಗಲೇ ಮನೆ ಮನೆಗೆ ತೆರಳಿ ಪ್ರಣಾಳಿಕೆಯ ಸಲಹಾ ಫಾರಂನ್ನು ನೀಡಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಅನೇಕ ಚಿಂತನ-ಮಂಥನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ವಾಟ್ಸ್ಅಪ್, ಇ-ಮೇಲ್ ಮುಖಾಂತರ ಹಾಗೂ ಬಾರ್ಕೋಡ್ಗಳನ್ನು ಸ್ಕ್ಯಾನ್ ಮಾಡುವುದರ ಮುಖಾಂತರ ಆನ್ಲೈನ್ ಮುಖಾಂತರವು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಆಯುಷ್ ಮಾನ್ ಭಾರತ್ ಯೋಜನೆಯಡಿ 50 ಕೋಟಿ ಗೂ ಹೆಚ್ಚು ಫಲಾನುಭವಿಗಳು ಲಾಭ ಪಡೆದಿದ್ದಾರೆ ಎಂದರು.
ಮಾ.16ರಂದು ರಾಯಲ್ ಆರ್ಕೀಡ್ ಹೋಟೆಲ್ನಲ್ಲಿ ಪ್ರಣಾಳಿಕಾ ಸಲಹಾ ಸಮಿತಿಯ ಸಭೆ ಕರೆಯಲಾಗಿದ್ದು, 1 ಸಾವಿರ ಸ್ಟಿಕ್ಕರ್ನ್ನು ಬಿಡುಗಡೆಗೊಳಿಸಲಾಗುವುದು. ಅಭಿವೃದ್ಧಿಯ ದಿಕ್ಕಿನಲ್ಲಿ ಡಬಲ್ ಇಂಜಿನ್ ಸರ್ಕಾರಕ್ಕೆ ಸಾರ್ವಜನಿಕರು ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ಸಲಹೆಯನ್ನು ನೀಡುವಂತೆ ಈಗಾಗಲೆ ಪಕ್ಷದಿಂದ ಘೋಷಣೆ ಮಾಡಲಾಗಿದೆ ಎಂದರು.
ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಈ ಪ್ರಣಾಳಿಕ ಸಲಹಾ ಅಭಿಯಾನದಲ್ಲಿ ಸಾರ್ವಜನಿಕರು ಸಲಹೆ ನೀಡಬಹುದಾಗಿದೆ. ತಮಗೆ ಅಗತ್ಯವಿರುವ ಅಭಿವೃದ್ಧಿಯ ಬಗ್ಗೆ ಗಮನಕ್ಕೆ ತರಲು ಅವಕಾಶವಿದೆ ಎಂದರು.
ಬಿಜೆಪಿ ರಾಷ್ಟ್ರೀಯ ನಾಯಕತ್ವವನ್ನು ಜನ ಒಪ್ಪಿದ್ದಾರೆ. ಬಿಜೆಪಿ ನೇತೃತ್ವ, ಸಂಘಟನೆ, ಅಭಿವೃದ್ಧಿ ಮತ್ತು ಭಾರತೀಯ ಸಂಸ್ಕೃತಿ ಈ 4 ಅಂಶಗಳ ಮೂಲಕ ಚುನಾವಣೆ ಮಾಡುತ್ತದೆ. ಪ್ರತಿ ವಿಧಾನ ಸಭಾ ಕ್ಷೇತ್ರದಿಂದ ೫ ಜನರ ಕೇಂದ್ರ ತಂಡ ಆಗಮಿಸಿ ಸರ್ವೇ ಮಾಡಿ ವರದಿ ನೀಡಿದೆ. ಈ ಆಧಾರದ ಮೇಲೆ ಅಂತಿಮವಾಗಿ ಕೇಂದ್ರದ ನಾಯಕರು ಅಭ್ಯರ್ಥಿ ಘೋಷಣೆ ಮಾಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಶಿವರಾಜ್, ಸುಧೀಂದ್ರ ಕಟ್ಟೆ, ಚಂದ್ರಶೇಖರ್ ಮತ್ತಿತರರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















