ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂಬರಲಿರುವ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈಗಾಗಲೇ ರಾಜ್ಯದ ೬೪ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಸಂಚಾಲಕ ಅರುಣ ಕಾನಹಳ್ಳಿ ತಿಳಿಸಿದರು.
ಅವರ ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರ ಕ್ಷೇತ್ರದಿಂದ ಡಿ. ರಾಜೇಂದ್ರ, ಭದ್ರಾವತಿಯಿಂದ ಸುಮಿತ್ರಾಬಾಯಿ, ಸೊರಬ ಕ್ಷೇತ್ರದಿಂದ ಮಂಜುನಾಥ್ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದರು.
ಜಿಲ್ಲೆಯ ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಶೀಘ್ರದಲ್ಲೆ ಘೋಷಿಸಲಾಗುವುದು. ಅಭ್ಯರ್ಥಿಗಳ ಆಯ್ಕೆಯನ್ನು ಸಂದರ್ಶನ ಹಾಗೂ ಮಾನದಂಡದ ಮೇಲೆ ಆಯ್ಕೆ ಮಾಡಲಾಗುತ್ತಿದೆ ಎಂದರು.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಯಾವೆಲ್ಲಾ ಯೋಜನೆಗಳನ್ನು ರೂಪಿಸಬೇಕು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದ ಜನಸಾಮಾನ್ಯರ ಜೊತೆ, ಚಿಂತಕರು ಹಾಗೂ ತಜ್ಞರ ಜೊತೆ ಸಭೆ ಹಾಗೂ ಸಂವಾದ ನಡೆಸಿದ ನಂತರವೇ ಪಕ್ಷವು ಪ್ರನಾಳಿಕೆಯನ್ನು ಸಿದ್ಧಪಡಿಸಿದೆ ಎಂದರು.
ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಖಾಲಿ ಇರುವ ಮೂರು ಲಕ್ಷಕ್ಕಿಂತ ಹೆಚ್ಚಿನ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡಲಾಗುವುದು. ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ಮತ್ತು ಲಂಚ ಹಾಗೂ ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಬಲಪಡಿಸಲು ಕ್ರಮ, ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ಸಂಪೂರ್ಣ ಮದ್ಯ ನಿಷೇಧ, ಶಿಕ್ಷಣದ ಪ್ರತಿ ಹಂತದಲ್ಲೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ, ರಾಜ್ಯಾದ್ಯಂತ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ, ಎಲ್ಲಾ ತರಹದ ಮಾಸಾಶನಗಳನ್ನು ಕನಿಷ್ಟ ಮೂರು ಸಾವಿರ ರೂ.ಗಳಿಗೆ ಏರಿಕೆ, ರಾಜ್ಯದ ಉದ್ಯೋಗಳಲ್ಲಿ ಕನ್ನಡಿಗರಿಗೆ ಪ್ರಾಥಮಿಕ ಆದ್ಯತೆ ಸೇರಿದಂತೆ ಹಲವಾರು ಅಂಶಗಳುಳ್ಳ ಪ್ರನಾಳಿಕೆಯನ್ನು ಸಿದ್ಧಪಡಿಸಲಾಗಿದೆ ಎಂದರು.
ಪಕ್ಷದ ಚಾರಿತ್ರಿಕ ರಾಜಕೀಯ ಹೋರಾಟದಲ್ಲಿ ಕನ್ನಡ ನಾಡಿನ ನಾಡಿಗರೆಲ್ಲರೂ ಈ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವುದರ ಮೂಲಕ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಯೂಬ್, ಶರತ್, ಡಿ. ರಾಜೇಂದ್ರ, ನಾಗರಾಜರಾವ್ ಶಿಂಧೆ, ಸುಮಿತ್ರಾಬಾಯಿ, ಎಸ್.ಕೆ. ಪ್ರಭು, ಡಿ.ಆರ್. ಮಧು, ಕೆ.ರವಿ, ಸಂದೀಪ್, ಸಮೀರ್, ರಫಿಕ್, ಸತೀಶ್ ಇನ್ನಿತರರು ಉಪಸ್ಥಿತರಿದ್ದರು.
ಸಾಲ ತೀರುವಳಿಗಾಗಿ ಒತ್ತಡ: ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ
ಶಿವಮೊಗ್ಗ: ಹಲವಾರು ತಿಂಗಳುಗಳಿಂದ ಸಾಲ ವಸೂಲಾತಿಗಾಗಿ ನಿರಂತರವಾಗಿ ಸಾಲ ತೀರುವಳಿ ಮಾಡುವ ಬಗ್ಗೆ ಒತ್ತಡ ಹಾಕಿ ಮಾನಸಿಕ ಹಿಂಸೆಯನ್ನು ಬ್ಯಾಂಕ್ನವರು ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಶಿಕಾರಿಪುರ ಘಟಕದ ವತಿಯಿಂದ ಇಂದು ಶಿವಮೊಗ್ಗದ ಕೆನರಾ ಬ್ಯಾಂಕ್ನ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಕಾರಿಪುರ ತಾಲೂಕು ಘಟಕದ ಅಧ್ಯಕ್ಷ ಹಾಗೂ ಮಾಜಿ ಸೈನಿಕ ರವಿ ಪಿ.ವೈ. ಕಪ್ಪನಹಳ್ಳಿ ಅವರು ಕೆನರಾ ಬ್ಯಾಂಕ್ ಶಾಖೆಯಿಂದ ಬೆಳೆ ಸಾಲ ಪಡೆದಿದ್ದು, ಸಾಲ ವಸೂಲಾತಿಗಾಗಿ ಬ್ಯಾಂಕ್ನವರು ನಿರಂತರವಾಗಿ ರವಿ ಪಿ.ವೈ. ಅವರ ಹಾಗೂ ಅವರ ಪತ್ನಿಯ ಮೇಲೆ ಸಾಲ ತೀರುವಳಿ ಮಾಡುವ ಬಗ್ಗೆ ಒತ್ತಡ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಹಾಗೂ ನಿವೃತ್ತಿ ವೇತನ ತಡೆಹಿಡಿದು ಬ್ಯಾಂಕ್ ಖಾತೆ ಬಂದ್ ಮಾಡಿ ಫೋನ್ ಸಂಪರ್ಕವನ್ನು ಡಿಲೀಟ್ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ರವಿಯವರು ನಿವೃತ್ತಿ ವೇತನದ ಮೇಲೆ 2019ರ ಸೆಪ್ಟೆಂಬರ್ನಲ್ಲಿ ಸಾಲ ಪಡೆದಿದ್ದು, ಸಾಲ ತೀರಿಸಲು 60 ತಿಂಗಳು ಕಾಲಾವಕಾಶವಿದೆ. ಈಗಾಗಲೇ ಬಡ್ಡಿ ಅಸಲು ಸೇರಿ ಸಾಲದ ಹಲವು ಕಂತಿನ ಹಣವನ್ನು ಜಮಾ ಮಾಡಿರುತ್ತಾರೆ ಆದರೆ ಬ್ಯಾಂಕ್ನವರು ಸಾಲ ವಸೂಲಾತಿಯ ನೆಪ ಹೇಳಿ ನಿವೃತ್ತಿ ವೇತನ ತಡೆಹಿಡಿದಿರುವುದರಿಂದ ಅವರ ಕುಟುಂಬ ನಿರ್ವಹಣೆ, ಆರೋಗ್ಯ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡುತ್ತಿದ್ದಾರೆ ಎಂದು ದೂರಿದರು.
ತೊಂದರೆ ನೀಡುತ್ತಿರುವ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು. ಹಾಗೂ ತಡೆಹಿಡಿದಿರುವ ನಿವೃತ್ತಿ ವೇತನವನ್ನು ಮಂಜೂರು ಮಾಡಿಕೊಡಬೇಕೆಂದು ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಪ್ರಧಾನ ಪ್ರಬಂಧಕರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಪ್ರಧಾನ ಪ್ರಬಂಧಕರು ತಡೆಹಿಡಿದಿರುವ ನಿವೃತ್ತಿವೇತನವನ್ನು ಮಂಜೂರು ಮಾಡಲಾಗುವುದು ಹಾಗೂ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಸೈನಿಕರಾದ ರವಿ ಪಿ.ವೈ. ಕಪ್ಪನಹಳ್ಳಿ, ರವಿಕುಮಾರ್, ಆರ್.ನಾಗೇಂದ್ರಪ್ಪ, ರೈತಮುಖಂಡರಾದ ಶೇಖರಪ್ಪ, ಬಸವರಾಜ್, ಅಮೃತ್, ಕಿರಣ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಶಾಲೆ ನಿರ್ಮಾಣ ಹಂತದಲ್ಲಿ ದೇವಸ್ಥಾನಕ್ಕೆ ಹಾನಿ ಮಾಡಿಲ್ಲ: ಗಿರೀಶ್ ಸ್ಪಷ್ಟನೆ
ಶಿವಮೊಗ್ಗ: ಸವಳಂಗ ರಸ್ತೆಯಲ್ಲಿರುವ ಅಕ್ಷರ ಶಾಲೆ ಮತ್ತ ಕಾಲೇಜಿನ ಆವರಣದ ಹಿಂಬದಿಯ ಚೌಡೇಶ್ವರಿಯ ಮೂಲ ದೇವಸ್ಥಾನಕ್ಕೆ ಯಾವುದೇ ರೀತಿಯ ಹಾನಿಯಾಗಿರುವುದಿಲ್ಲ. ಮತ್ತು ಇದನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಸೈಂಟ್ ಹಾತಿರಾಮ್ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ನ ಆಡಳಿತಾಧಿಕಾರಿ ಹಾಗೂ ಕಾಲೇಜಿನ ಪ್ರಾಂಶುಪಾಲ ಹೆಚ್.ಟಿ. ಗಿರೀಶ್ ಹೇಳಿದರು.
ಅವರು ಇಂದುಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ನಡೆಯುವ ಅಕ್ಷರ ಶಾಲೆ ಮತ್ತ ಕಾಲೇಜು ಅಬ್ಬಲಗೆರೆ ಗ್ರಾ.ಪಂ ವ್ಯಾಪ್ತಿಯಲ್ಲಿದೆ. 2014ರಿಂದ ನಮ್ಮ ಸಂಸ್ಥೆ ಪ್ರಾರಂಭವಾಗಿದೆ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಸಂಸ್ಥೆಯ ಆವರಣದ ಹಿಂಬದಿಯಲ್ಲಿ ಚೌಡೇಶ್ವರಿಯ ಸಣ್ಣ ದೇವಸ್ಥಾನವಿದೆ. ಅಕ್ಷರ ಸಂಸ್ಥೆ ಮತ್ತು ಗ್ರಾಮಸ್ಥರು ಸೇರಿಕೊಂಡೇ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಆದರೆ ಇದ್ದಕ್ಕಿದ್ದಂತೆ ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಅರ್ಚಕ ಶೇಖರಪ್ಪ ಮತ್ತು ಕೆಲವರು ನಮ್ಮ ಸಂಸ್ಥೆಯ ತಂತಿಬೇಲಿಯನ್ನು ಹಾನಿಗೊಳಿಸಿ ಅನಧಿಕೃತವಾಗಿ ಮರದ ಬುಡದಲ್ಲಿ ಕಲ್ಲುಗಳನ್ನು ಇಟ್ಟು ಅರಿಶಿಣ ಕುಂಕುಮ ಚೆಲ್ಲಿ ಮರಕ್ಕೆ ಬಿಳಿಬಟ್ಟೆ ಸುತ್ತಿ ಸ್ಥಳವನ್ನು ವಿರೂಪಗೊಳಿಸಿ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ರಜಾ ದಿನಗಳಲ್ಲಿ ಈ ಘಟನೆ ನಡೆದಿದ್ದು, ನಂತರ ಸಂಸ್ಥೆಯ ಗಮನಕ್ಕೆ ಬಂದಿದೆ. ಆ ಜಾಗದಲ್ಲಿ ಪ್ರಾಣಿಗಳ ಬಲಿ ನೀಡಿ ಪ್ರಾಣಿಗಳ ಭಾಗಗಳನ್ನು ಶಾಲೆಯ ಮಕ್ಕಳು ಊಟಕ್ಕೆ ಹೋಗುವ ದಾರಿಯಲ್ಲಿ ಚೆಲ್ಲಿದ್ದರು. ಮಕ್ಕಳು ಪೋಷಕರು ಭಯಭೀತರಾಗಿ ಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲರ ಗಮನಕ್ಕೆ ತಂದು ತೆರವುಗೊಳಿಸುವಂತೆ ಮನವಿ ಮಾಡಿದರು. ಈ ವಿಷಯವನ್ನು ಅರ್ಚಕ ಶೇಖರಪ್ಪ ಅವರಿಗೆ ತಿಳಿಸಿದರೂ ಕೂಡ ತೆರವುಗೊಳಿಸದ ಕಾರಣ ಪೊಲೀಸ್ ಇಲಾಖೆಗೆ ದೂರು ನೀಡಿ ಅವರ ಉಪಸ್ಥಿತಿಯಲ್ಲಿ ತೆರವುಗೊಳಿಸಲಾಗಿದೆ ಎಂದರು.
ಈ ಘಟನೆಯನ್ನೇ ಇಟ್ಟುಕೊಂಡು ದೇವಸ್ಥಾನ ಆಡಳಿತ ಮಂಡಳಿಯ ಕೆಲವು ಸದಸ್ಯರು ಮೂಲ ದೇವಸ್ಥಾನವನ್ನು ವಿರೂಪಗೊಳಿಸಿದ್ದಾರೆ ಎಂದು ತಪ್ಪು ಸಂದೇಶ ನೀಡುತ್ತಿದ್ದಾರೆ. ದೇವಸ್ಥಾನ ಧ್ವಂಸ ಮಾಡಿದ್ದಾರೆ ಎಂದು ಸುಳ್ಳು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಭೆ, ಚಳುವಳಿ ಪ್ರತಿಭಟನೆ ಮಾಡುತ್ತಾ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಪಡಿಸುತ್ತಿದ್ದಾರೆ. ಇದು ಪರೀಕ್ಷೆಯ ಸಮಯ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದರು.
2014ನೇ ಇಸವಿಯಲ್ಲಿ ಇಲ್ಲದ ಸಮಸ್ಯೆಯನ್ನು ಇತ್ತೀಚೆಗೆ ಉದ್ದೇಶಪೂರಕವಾಗಿ ಸೃಷ್ಟಿಮಾಡುತ್ತಿದ್ದಾರೆ. ಸಂಸ್ಥೆಯ ಪಕ್ಕ ಇರುವ ಕೆರೆಕಟ್ಟೆಯನ್ನು ಪುನಶ್ಚೇತನ ಮಾಡುವುದರ ಮೂಲಕ ಗ್ರಾಮಸ್ಥರ ಉಪಯೋಗಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ 30ಲಕ್ಷ ರೂ. ಅನುದಾನ ಪಡೆದು ಸ್ವಚ್ಛಗೊಳಿಸಲಾಗಿದೆ. ಆದರೆ ಈ ಕೆಲಸಕ್ಕೆ 80 ಲಕ್ಷ ಪಡೆದಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಸದಸ್ಯ ಕುಮಾರ್, ಪ್ರಾಧ್ಯಾಪಕರಾದ ಪ್ರಕಾಶ್, ಶೋಭಾ, ಚೇತನಾ ಮುಂತಾದವರಿದ್ದರು.
ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಹೋರಾಟ ಸಮಿತಿ ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿ 206ರ ಮಲವಗೊಪ್ಪದ ಹೊರಭಾಗದಲ್ಲಿರುವ ಬೈಪಾಸ್ ರಸ್ತೆಗಾಗಿ ಮನೆ ಮತ್ತು ನಿವೇಶನ ಕಳೆದುಕೊಳ್ಳುವ ಎಲ್ಲಾ ಕುಟುಂಬಗಳಿಗೆ ನಿವೇಶನ ಮತ್ತು ಭೂದಾಖಲೆಗಳನ್ನು ಸಕ್ರಮಗೊಳಿಸಿ ಸೂಕ್ತ ಪರಿಹಾರ ಘೋಷಿಸಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಗೊಳಿಸಬೇಕೆಂದು ಆಗ್ರ್ರಹಿಸಿ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಹೋರಾಟ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಲಾಯಿತು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ವೇಗವಾಗಿ ಬೆಳೆಯುತ್ತಿದೆ. ಅಭಿವೃದ್ಧಿಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅಭಿವೃದ್ಧಿ ಆಗುತ್ತಿರುವಾಗ ಜನವಸತಿ ಮೇಲೆ ಆಗುವ ದುಷ್ಪರಿಣಾಮಗಳನ್ನು ಕೂಡ ಪರಿಹರಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ತುಮಕೂರು -ಶಿವಮೊಗ್ಗದವರೆಗೆ ಚತುಷ್ಪಥ ರಸ್ತೆ ನಿರ್ಮಾಣಗೊಳ್ಳುತ್ತಿದೆ. ಹಲವು ನಗರಗಳ ಹೊರಭಾಗದಲ್ಲಿ ಬೈಪಾಸ್ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದೆ. ಹಾಗೆಯೇ ಶಿವಮೊಗ್ಗ ನಗರದ ಮಲವಗೊಪ್ಪದ ನಂ. 15 ಮತ್ತು 16ರ ಮಧ್ಯಭಾಗದಲ್ಲಿ ಹೆದ್ದಾರಿ ನಿರ್ಮಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಇಲ್ಲಿ ಜನವಸತಿ ಪ್ರದೇಶ ಹೆಚ್ಚಾಗಿದೆ. ವಾಣಿಜ್ಯ, ವಸತಿ ಕಟ್ಟಗಳಿವೆ. ಸುಮಾರು 75 ವರ್ಷಗಳಿಂದ ಜನರು ಅನುಭವಿಸುಕೊಂಡು ಬರುತ್ತಿದ್ದಾರೆ. ಪುರಾತನವಾದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯ ಕೂಡ ಇದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ 206 ಅನ್ನು ನಗರದ ಮಲವಗೊಪ್ಪ ಹೊರ ಭಾಗದ ಬೈಪಾಸ್ ರಸ್ತೆಯ ಮೂಲಕ ಅಭಿವೃದ್ಧಿಪಡಿಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.
ಆದರೆ, ವಿಶೇಷ ಭೂಸ್ವಾಧೀನ ಅಧಿಕಾರಿಗಳು ಮಲವಗೊಪ್ಪದ ಸ್ವತ್ತಿನ ಮಾಲೀಕರುಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಕಟ್ಟಡಕ್ಕೆ ಮಾತ್ರ ಪರಿಹಾರ ಕೊಡುತ್ತೇವೆ. ಭೂಮಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಕೇಳಿದರೆ ಸ್ವತ್ತಿನ ಮೂಲ ದಾಖಲೆಗಳಲ್ಲಿ ಸರ್ಕಾರಿ ಪಡಾ, ಗೋಮಾಳ, ಚನ್ನಬಸವೇಶ್ವರ ದೇವಾಲಯ, ತುಂಗಾ ಭದ್ರಾ ಸಕ್ಕರೆ ಕಾರ್ಖಾನೆ ಇವರ ಹೆಸರಿನಲ್ಲಿ ಸ್ವತ್ತು ಇರುವುದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ. ಇದರಿಂದ ಸ್ವತ್ತು ಕಳೆದುಕೊಳ್ಳುತ್ತಿರುವ ಮಾಲೀಕರು ಭಯಭೀತರಾಗಿದ್ದಾರೆ ಎಂದರು.
ಅಧಿಕಾರಿಗಳು ಕಾಯ್ದೆಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ ೨೦೬ರ ಮಲವಗೊಪ್ಪ ವಾರ್ಡ್ 15 ಮತ್ತು 16 ರ ಭಾಗದಲ್ಲಿರುವ ಮನೆ, ನಿವೇಶನ ಕಳೆದುಕೊಳ್ಳುತ್ತಿರುವ ಎಲ್ಲಾ ಕುಟುಂಬಗಳಿಗೆ ಭೂದಾಖಲೆಗಳನ್ನು ಸಕ್ರಮಗೊಳಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಹೋರಾಟ ಸಮಿತಿ ಪ್ರತಿಭಟನೆಗೆ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಬೆಂಬಲ ವ್ಯಕ್ತಪಡಿಸಿದೆ. ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಪ್ರತಿಭಟನೆಯಲ್ಲಿ ಹಾಜರಿದ್ದು ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಪ್ರಮುಖರಾದ ಆರ್.ಸಿ. ನಾಯ್ಕ್, ಯು.ಜಿ. ನಾಗರಾಜ್, ಜಗದೀಶ್, ಶಾಂತಕುಮಾರ್, ಶೇಖರಾನಾಯ್ಕ್, ಉಮಾಶಂಕರ್, ಬಸವಾಚಾರಿ, ಛತ್ರಾನಾಯ್ಕ್, ಸುಲೋಚನಮ್ಮ, ಓಂಕಾರಮ್ಮ, ವಸಂತನಾಯ್ಕ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















