ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಮ್ಮ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಿರುವ ವಿಚಾರ ಕುರಿತು ಸೊರಬ ಕ್ಷೇತ್ರ ಶಾಸಕ ಕುಮಾರ್ ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಕೆಲವು ವಿಚಾರಧಾರೆಯಲ್ಲಿ ವ್ಯತ್ಯಾಸ ಬಂದಾಗ ಪಕ್ಷ ಪರಿಶೀಲಿಸುತ್ತದೆ ಎಂದು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾದ ವಿವಾದ ಆಗದಂತೆ ಬಿಜೆಪಿ ನೋಡಿಕೊಳ್ಳುತ್ತೆ. ಅಭಿವೃದ್ದಿ ಆಗಿಲ್ಲ ಅನ್ನೋದಕ್ಕೆ ದಾಖಲೆ ಹೇಳಬೇಕು. ಸೊರಬದ ಸ್ಥಿತಿ ಗತಿ ಹೇಳಬೇಕಾಗುತ್ತದೆ. ನಾವು ಶೀಘ್ರ ನಂಜುಂಡಪ್ಪ ವರದಿಯಿಂದ ಹೊರಬರ್ತೀವಿ. ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.
ಸೊರಬವಷ್ಟೇ ಅಲ್ಲ, ಇಡೀ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಆಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಕಾಲದಲ್ಲೇ ಅಭಿವೃದ್ಧಿ ಆಗಿರುವುದು. ರಾಜ್ಯದಲ್ಲೂ ಎಲ್ಲೆಲ್ಲಿ ಸಮಸ್ಯೆ ಇದೆ ಅದನ್ನು ಪರಿಹರಿಸುವ ಶಕ್ತಿ ಬಿಜೆಪಿಗಿದೆ ಎಂದರು.
Also read: ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿ: ಬಳ್ಳಾರಿಯಲ್ಲಿ ಬರೋಬ್ಬರಿ 51 ಪ್ರಕರಣ ದಾಖಲು
ಕಾಂಗ್ರೆಸ್ ಇರುವುದೇ ವಿರೋಧಿಸಲಿಕ್ಕೆ. ಮಧು ಬಂಗಾರಪ್ಪ ಬಂದಿದ್ದೇ ಇತ್ತೀಚೆಗೆ. ಅವನು ಕೋವಿಡ್ ಸಮಯದಲ್ಲಿ ಇರ್ಲಿಲ್ಲ. ಚುನಾವಣೆ ಇದ್ದಾಗ ಮಾತ್ರ ಅವನು ಬರ್ತಾನೆ, ಆಮೇಲೆ ಇರಲ್ಲ. ಹೀಗಾಗಿ ಚುನಾವಣೆ ಬಂದಾಗ ಕೆಲ ವಿಷಯಗಳಿಗೆ ಮೀಸಲಾಗ್ತಾರೆ. ಅವರು ಚುನಾವಣೆಯ ಆರ್ಥಿಕ ಅಭಿವೃದ್ಧಿ ಹಿನ್ನೆಲೆ ಬರುವಂಥವರು. ಸೊರಬಕ್ಕೆ ಯಾವುದೇ ರೀತಿಯ ಕಾಳಜಿ ಹೊಂದಿಲ್ಲ ಎಂದು ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ನಾನೇ ಸೊರಬ ಕ್ಷೇತ್ರದ ಅಭ್ಯರ್ಥಿ ಆಗುತ್ತೇನೆ. ಪಕ್ಷದ ನಾಯಕರು ಈ ಬಗ್ಗೆ ಗಮನಿಸುತ್ತಾರೆ. ವರಿಷ್ಟರ ತೀರ್ಮಾನದಂತೆ ನಾನು ಹೆಜ್ಜೆ ಇಡುತ್ತೇನೆ. ಸೊರಬ ಕ್ಷೇತ್ರ ಸೇರಿದಂತೆ ಎಲ್ಲೆಡೆ ಬಿಜೆಪಿ ಪರವಾದ ಅಲೆ ಇದೆ. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















