ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನಸಭೆ ಚುನಾವಣೆಯ ಭರಾಟೆ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಚುನಾವಣಾ ಕಣಕ್ಕಿಳಿಯಲಿರುವ ಅಭ್ಯರ್ಥಿಗಳು ಸಾಲು-ಸಾಲು ಮೆರವಣಿಗೆಗಳ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ದೌಡಾಯಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಕೊನೆ ಕ್ಷಣೆದಲ್ಲಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಗೊಂಡ ಎಸ್.ಎನ್. ಚನ್ನಬಸಪ್ಪ, ಕಾಂಗ್ರೆಸ್ನ ಹೆಚ್.ಸಿ. ಯೋಗೇಶ್, ಆಯನೂರು ಮಂಜುನಾಥ್, ಗ್ರಾಮಾಂತ್ರರ ಕ್ಷೇತ್ರದ ಶ್ರೀನಿವಾಸ್ ಕರಿಯಣ್ಣ ಸೇರಿದಂತೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಸಂಖ್ಯೆಯಲ್ಲಿದ್ದ ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆಗೆ ಮೆರವಣಿಗೆಯಲ್ಲಿ ಸಾಗಿದರು. ಘೋಷಣೆಗಳನ್ನು ಕೂಗುತ್ತಾ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಅವರು ತಮ್ಮ ನಾಯಕ ಕೆ.ಎಸ್. ಈಶ್ವರಪ್ಪನವರ ಮನೆಗೆ ತೆರಳಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಚೆನ್ನಬಸಪ್ಪ ಅವರನ್ನು ಪ್ರೀತಿಯಿಂದ ತಬ್ಬಿ ನೀನು ಗೆದ್ದೇ ಗೆಲ್ಲುತ್ತೀಯಾ ಯಾವ ಆತಂಕವೂ ಬೇಡ ಎಂದು ಈಶ್ವರಪ್ಪ ವಿಶ್ವಾಸ ತುಂಬಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದೇ ಬರುತ್ತದೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಬಿಜೆಪಿಯಲ್ಲಿ ಕಾರ್ಯಕರ್ತರು, ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಈ ಬಾರಿ ತ್ರಿಕೋನಸ್ಪರ್ಧೆ ಆಗುವ ಎಲ್ಲಾ ಲಕ್ಷಣಗಳಿವೆ. ಕಳೆದ ಬಾರಿ೪೬ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆವು. ಈ ಬಾರಿ 60ಸಾವಿರಕ್ಕೂ ಹೆಚ್ಚಿನ ಅಂತರದಿಂದ ಗೆಲ್ಲುತ್ತೇವೆ. ನಾನು ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಬೇಕಾಗಿದೆ. ಶಿವಮೊಗ್ಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಹಿರಿಯರಾದ ಈಶ್ಪರಪ್ಪನವರ ಮಾರ್ಗದರ್ಶನದಲ್ಲಿಯೇ ಈ ಚುನಾವಣೆಯನ್ನು ನಡೆಸುತ್ತೇನೆ. ಕಾರ್ಯಕರ್ತರೆಲ್ಲ ಉತ್ಸಾಹದಿಂದ ಇದ್ದಾರೆ. ಈಶ್ವರಪ್ಪನವರಿಗೆ ಹೇಗೆ ಗೆಲ್ಲಬೇಕೆಂಬುದು ಕರಗತವಾಗಿದೆ. ಅವರ ಹಾದಿಯಲ್ಲೆ ಸಾಗುತ್ತೇನೆ. ಸುಮಾರು 60 ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ನಾಮಪತ್ರ ಸಲ್ಲಿಕೆ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಹೆಚ್.ಸಿ. ಯೋಗೀಶ್ ಇಂದು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ರಾಮಣ್ಣ ಶ್ರೇಷ್ಠಿ ಪಾರ್ಕಿನ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಅಪಾರ ಬೆಂಬಲಿಗರೊಂದಿಗೆ ದೇವಸ್ಥಾನದಿಂದ ಗಾಂಧಿಬಜಾರ್, ಶಿವಪ್ಪನಾಯಕ ಪುತ್ಥಳಿ, ನೆಹರು ರಸ್ತೆ, ಗೋಪಿ ಸರ್ಕಲ್, ಕಸ್ತೂರಬಾ ಕಾಲೇಜು ರಸ್ತೆ ಮೂಲಕ ಸಾಗಿ ಮಹಾನಗರ ಪಾಲಿಕೆಯಲ್ಲಿರುವ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತವಾಗಿದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ. ಬಿಜೆಪಿ ಆಡಳಿತದಿಂದ ಜನತೆ ಬೇಸತ್ತಿದ್ದಾರೆ. ಹೊಸತನ ಬಯಸಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸದಲಿದ್ದಾರೆ. ಶಿವಮೊಗ್ಗ ನಗರವೂ ಸೇರಿದಂತೆ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದರು.
ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ನಾಮಪತ್ರ ಸಲ್ಲಿಕೆ
ಹಲವು ರಾಜಕೀಯ ತಿರುವುಗಳ ನಡುವೆ ಆಯನೂರು ಮಂಜುನಾಥ್ ಇಂದು ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಯಾರನ್ನು ಕಣಕ್ಕಿಳಸುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದ ಆಯನೂರು ಮಂಜುನಾಥ್ ತಮ್ಮ ನಿರ್ಧಾರ ಪ್ರಕಟಿಸಲು ಸಮಯವನ್ನೂ ತೆಗೆದುಕೊಂಡರು. ಆದರೆ ರಂಗೋಲಿ ಕೆಳಗೆ ನುಸುಳಿದ ಬಿಜೆಪಿ ಆಯನೂರು ರಾಜೀನಾಮೆ ಕೊಟ್ಟು ಜೆಡಿಎಸ್ ಸೇರಿದ ನಂತರ ಅಭ್ಯರ್ಥಿಯನ್ನು ಪ್ರಕಟಿಸಿದರು.
ಈ ಮೊದಲೇ ಹೇಳಿದಂತೆ ಆಯನೂರು ಮಂಜುನಾಥ್ ಈಶ್ವರಪ್ಪ ಅವರಾಗಲಿ, ಅವರ ಪುತ್ರನಾಗಲಿ ಅಥವಾ ಅವರ ತದ್ರೂಪಿನಂತೆ ಇರುವ ವ್ಯಕ್ತಿಯಾಗಲಿ ಅವರ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸುವೆ ಎಂಬ ತಮ್ಮ ಹೇಳಿಕೆಗೆ ಅವರು ಇಂದು ಕೂಡ ಬದ್ಧರಾದರು.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ನನಗೆ ಶಿವಮೊಗ್ಗದಲ್ಲಿ ಶಾಂತಿ ಬೇಕಾಗಿದೆ ಎಂದು ಪುನರುಚ್ಚರಿಸಿದರು. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾಂತೀಯ ಪಕ್ಷದಿಂದ ನಾನು ಸ್ಪರ್ಧಿಸಿದ್ದೇನೆ. ಅದಕ್ಕಾಗಿ ವಿಶೇಷ ತಯಾರಿ ನಡೆಸಿದ್ದೇನೆ. ಶಿವಮೊಗ್ಗದಲ್ಲಿ ೩೦ ವರ್ಷಗಳಕಾಲ ಏಕತಾನತೆಯ ರಾಜಕಾರಣವನ್ನು ನೋಡಿದ ಜನತೆಗೆ ಹೊಸತನ ಬೇಕಾಗಿದೆ. ಅದರ ಅನುಭವ ಕೂಡ ನಮಗಾಗುತ್ತಿದೆ. ಅತಿಹೆಚ್ಚು ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ ಎಂದರು.
ಚೆನ್ನಬಸಪ್ಪ ಅವರು ಸ್ಪರ್ಧೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚೆನ್ನಬಸಪ್ಪ ಅವರು ಈಶ್ವರಪ್ಪ ಅವರ ಪ್ರತಿರೂಪವೇ ಆಗಿದ್ದಾರೆ. ಅದಕ್ಕಿಂತ ಒಂದು ಕೈ ಮಿಗಿಲು ಎನ್ನಬಹುದು. ಅವರದೇ ಸಿದ್ಧಾಂತದ ವ್ಯಕ್ತಿ ಚೆನ್ನಬಸಪ್ಪ. ನಾನು ಅತ್ಯಂತ ಆತ್ಮವಿಶ್ವಾಸದಿಂದಲೇ ನಾಮಪತ್ರ ಸಲ್ಲಿಸಿದ್ದೇನೆ. ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ನನ್ನ ಗೆಲುವು ಖಚಿತ ಎಂದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರ್ಯಾ ನಾಯ್ಕ, ರಾಮಕೃಷ್ಣ ಇದ್ದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಶ್ರೀನಿವಾಸ ಕರಿಯಣ್ಣ ನಾಮಪತ್ರ ಸಲ್ಲಿಕೆ
ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾವಿರಾರು ಬೆಂಬಲಿಗರೊಂದಿಗೆ ಡಾ. ಶ್ರೀನಿವಾಸ ಕರಿಯಣ್ಣ ಇಂದು ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಬಂದ ಶ್ರೀನಿವಾಸ ಕರಿಯಣ್ಣ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಗೆಲುವು ಖಚಿತವಾಗಿದೆ. ಗ್ರಾಮಾಂತರ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆಡಳಿತ ಪಕ್ಷದ ಶಾಸಕರು ವಿಫಲರಾಗಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಇಡೀ ಗ್ರಾಮಾಂತರ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ. ಮೂಲಭೂತ ಸೌಕರ್ಯಗಳನ್ನ ಒದಗಿಸುತ್ತೇನೆ. ಕಾರ್ಯಕರ್ತರು, ಅತ್ಯಂತ ಶ್ರಮದಿಂದ ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನನ್ನ ಗೆಲುವು ಖಚಿತ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ವೈ.ಹೆಚ್. ನಾಗರಾಜ್, ಶಹಾಬುದ್ದೀನ್, ಹೆಚ್.ಎಲ್. ಷಡಾಕ್ಷರಿ, ರಾಜಶೇಖರ್ ಸೇರಿದಂತೆ ಅಪಾರ ಬೆಂಬಲಿಗರು ಇದ್ದರು.
ಶಿವಮೊಗ್ಗ ಗ್ರಾಮಾಂತರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಸ್. ರವಿಕುಮಾರ್
ಶಿವಮೊಗ್ಗ ಗ್ರಾಮಾಂತರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಸ್. ರವಿಕುಮಾರ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವೀರೇಶ್ ಕ್ಯಾತಿನಕೊಪ್ಪ ಹ?ಭಾವಿ, ರಾಜು, ಮತ್ತಿತರರಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ಎಂ.ಆರ್. ಅನಿಲ್ (ಕುಂಚಿ)
ಕರ್ನಾಟಕ ರಾಜ್ಯ ಗೆಳೆಯರ ಬಳಗದ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶಿಕಾರಿಪುರ ವಿಧಾನ ಸಭಾ ಕ್ಷೇತ್ರಕ್ಕೆ ಎಂ.ಆರ್. ಅನಿಲ್(ಕುಂಚಿ) ನಾಮಪತ್ರ ಸಲ್ಲಿಸಿದರು.
ಇವರು ನಿನ್ನೆ ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರಕ್ಕೂ ಕೂಡ ನಾಮಪತ್ರ ಸಲ್ಲಿಸಿದ್ದರು. ಈ ಎರಡೂ ಸಂದರ್ಭದಲ್ಲಿ ಶಿಕಾರಿಪುರದ ತೇಜರಾಜು, ಚುರ್ಚಿಗುಂಡಿ ರಾಜೇಶ್, ಸಿರಿಹಳ್ಳಿ ಮಂಜು ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post