ಕಲ್ಪ ಮೀಡಿಯಾ ಹೌಸ್ | ಸೊರಬ |
ಕೆಲ ದಿನಗಳ ಹಿಂದೆ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಆಯನೂರಿನಲ್ಲಿ ನಡೆದ ಬಾರ್ ಕ್ಯಾಷಿಯರ್ ಸಚಿನ್ ಕುಮಾರ್
ಹತ್ಯೆಗೆ ಖಂಡಿಸಿ, ಪಟ್ಟಣದಲ್ಲಿ ಬಾರೀ ಜನಾಕ್ರೋಶ ವ್ಯಕ್ತವಾಯಿತು.
ಪೊಲೀಸರ ಸಮ್ಮುಖದಲ್ಲಿಯೇ ಬಾರ್ ಕ್ಯಾಷಿಯರ್ ಸಚಿನ್ ಕುಮಾರ್ ಅವರನ್ನು ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗುರುವಾರ ಬೆಳಗ್ಗೆ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದ ರಂಗನಾಥ ಸ್ವಾಮಿ ದೇವಾಲಯದಿಂದ ತಾಲ್ಲೂಕು ಕಚೇರಿಯ ತನಕ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ಮೆರವಣಿಗೆ ನಡೆಸಿ ತೀವ್ರ ಆಕ್ರೋಶವನ್ನು ಹೊರ ಹಾಕಿದರಲ್ಲದೆ, ತಹಸೀಲ್ದಾರ್ ಮೂಲಕ, ರಾಜ್ಯಪಾಲರು, ಮುಖ್ಯ ಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
Also read: ವಿದ್ಯಾರ್ಥಿ ಜೀವನದಲ್ಲಿ ಸಿಗುವ ವೇದಿಕೆಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಿ: ನಟಿ ಆಶಾಭಟ್
ಬಾರ್ ಕ್ಯಾಷಿಯರ್ ಸಚಿನ್, ಬಮಾರ್ ಅವರ ಹತ್ಯೆ ಆಗುವ ಮೊದಲು ದುಷ್ಕರ್ಮಿಗಳು ಮದ್ಯ ಕುಡಿದು ಹಣ ನೀಡಿ ಮನೆಗೆ ತೆರಳುವಂತೆ ಮನವಿ ಮಾಡಿದ್ದರು. ಆವೇಳೆ ಗಲಾಟೆ ಮಾಡಿದಾಗ ತಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಒಂದು ರೀತಿಯ ನಿರ್ಲಕ್ಷ್ಯ ಧೋರಣೆ ತಾಳಿ ಅಲ್ಲಿಯೇ ನಿಂತಿದ್ದಾರೆ. ಇದೇ ವೇಳೆ ದುಷ್ಕರ್ಮಿ ಗಳು ಪೊಲೀಸರ ಎದುರೇ ಕ್ಯಾಷಿಯರ್ ಸಚಿನ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಇಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಪೊಲೀಸ್ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಪ್ರತಿಭಟನೆಕಾರರರು ದೂರಿದರು.
ಜಿಲ್ಲೆಯಲ್ಲಿ ಗಾಂಜಾ ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು ಅಕ್ರಮ ಚಟುವಟಿಕೆಯಲ್ಲಿ ತೊಡಗಿ ಕೊಲೆ, ಸುಲಿಗೆ ಮಾಡುತ್ತಿರುವ ಗೂಂಡಾಗಳ ಮೇಲೆ ಗುಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕು, ಬಾರ್ ಕ್ಯಾಷಿಯರ್ ಸಚಿನ್ ಅವರನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಹಾಗೆಯೇ ನೊಂದ ಕುಟುಂಬಕ್ಕೆ ಬಾರ್ ಮಾಲೀಕ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೃತ ಸಚಿನ್ ಸಹೋದರ ಶಶಿ, ಪ್ರಕಾಶ್ ಕೆರೆಕೊಪ್ಪ, ಶ್ರೀಕಾಂತ್ ಬೊಮ್ಮನಹಳ್ಳಿ, ಪ್ರವೀಣ್ ಶಂತಾಗೆರಿ,ಪ್ರವೀಣ್ ಹಿರೇಇಡಗೊಡು, ನವೀನ್ ಮಂಚಿ, ರವಿ ಕೇಸರಿ, ಮಹೇಶ್ ಖಾರ್ವಿ, ರಜನಿ ನಾಯ್ಕ, ಭರತ ವೈ ಬಿ, ಶರತ್ ರಂಪುರೆ, ವಿನಾಯಕ ಕೆ.ವಿ, ಚಂದನ್, ಇದ್ದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















