ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಗಣಿಗಾರಿಕೆ ಪರಿಸರ ವೈವಿಧ್ಯಕ್ಕೆ ಧಕ್ಕೆ ತರುತ್ತಿದ್ದು ಎಲ್ಲಿ ಮಳೆ ತರುವ ವೃಕ್ಷಸಮೂಹವಿದೆಯೋ ಅಂತಹ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶವನ್ನು ನೀಡಬಾರದು ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತಹೆಗಡೆ ಅಶಿಸರ ಅವರು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಪರಿಸರ ಮಾರಕ ಹಲವು ಚಟುವಟಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದ ಅವರು, ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಗ್ರಾಮದಲ್ಲಿ ನಿರಂತರ ಗಣಿಗಾರಿಕೆ ನಡೆಯುತ್ತಿದೆ. ಗಣಿಯ ತೀವ್ರತೆ ಖಂಡಿಸಿ ಈ ಹಿಂದೆ ಹೋರಾಟ ನಡೆಸಿದ್ದು, ಜಿಲ್ಲಾಧಿಕಾರಿಗಳು, ವಿಜ್ಣಾನಿಗಳು ಖುದ್ದು ಪರಿಶೀಲಿಸಿ ಗಣಿ ನಿಯಮಗಳಿಗನುಗುಣವಾಗಿ ಅನುಮತಿ ಇರುವ ತನಕ ನಡೆಸಬೇಕು ಎಂದು ಸೂಚಿಸಿದ್ದರು. ಅದರಂತೆ ಗಣಿ ನಿಯಮಾನುಸಾರ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಂದು ಗಣಿ ತಲೆ ಎತ್ತಿದ್ದು ಸಮೀಪದ ರಕ್ಷಿತ ಅರಣ್ಯಕ್ಕೆ, ಶಿಲಾ ಸಸ್ಯ ವರ್ಗಗಳಿಗೆ, ಅಪರೂಪದ ವನ್ಯ ಜೀವಿಗಳಿಗೆ ತೀವ್ರ ಹಾನಿಯುಂಟಾಗಿದೆ. ಇನ್ನೊಂದು ಗಣಿಗೆ ಅವಕಾಶ ನೀಡಬಾರದು ಎಂದು ತಿಳಿಸಿದ್ದಾಗ್ಯೂ ಗಣಿ ಇಲಾಖೆ ನಿಯಮ ವಿಧಿಸದೆ ಅನುಮತಿ ನೀಡಿರುವುದನ್ನು ವೃಕ್ಷಲಕ್ಷ ಆಂದೋಲನ ಖಂಡಿಸುತ್ತದೆ ಎಂದರು.
ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಸೊರಬ ತಾಲ್ಲೂಕಿನ ಹಲಸಿನಕೊಪ್ಪ ಗ್ರಾಮದ ಗ್ರಾಮಸ್ಥರ ಕಾಯ್ದಿಟ್ಟ ಅರಣ್ಯಕ್ಕೆ ನೆರೆ ಗ್ರಾಮದವರು ಲಗ್ಗೆ ಹಾಕಿದ್ದು, ಕಾನೂನು ಪ್ರಕಾರ ಅವರಿಗೆ, ಕಾಯ್ದಿರಿಸಿದ ಅರಣ್ಯಕ್ಕೆ ರಕ್ಷಣೆ ನೀಡಬೇಕು. ಆದರೆ, ಸ್ಥಳೀಯ ಆಡಳಿತ ಮಿನಾಮೇಷ ಎಣಿಸುತ್ತಿರುವುದರಿಂದ ಇದುವರೆವಿಗೂ ರಕ್ಷಿಸಿಕೊಂಡ ಅರಣ್ಯ ನಾಶವಾಗುತ್ತಿರುವುದಕ್ಕೆ ಗ್ರಾಮಸ್ಥರು ಹತಾಶೆ ವ್ಯಕ್ತಪಡಿಸಿದ್ದಾರೆ. ಕೂಡಲೆ ಹಲಸಿನಕೊಪ್ಪ ಗ್ರಾಮ ಅರಣ್ಯಕ್ಕೆ ರಕ್ಷಣೆ ಒದಗಿಸಬೇಕು ಎಂದು ಕೋರಿದರು.
Also read: ಸರ್ಕಾರಿ ಕಟ್ಟಡದಲ್ಲಿ ಗೃಹರಕ್ಷಕದಳದ ವಾರದ ಕವಾಯತು ನಡೆಸಲು ಅನುಮತಿ ಕೋರಿ ಸಚಿವರಿಗೆ ಮನವಿ
ಜಿಲ್ಲೆಯ ಹೊಸನಗರ ಅಕ್ರಮ ಗಣಿಗಾರಿಕೆ, ಅರಣ್ಯ ನಾಶದ ಬಗ್ಗೆ ಈ ವೇಳೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ರಕ್ಷಣೆಗೆ ಆಗ್ರಹಿಸಲಾಯಿತು.
ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸೂಕ್ತ ಪರಿಶೀಲಿಸಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.
ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ, ವೃಕ್ಷಲಕ್ಷ ಆಂದೋಲನದ ಸಂಚಾಲಕ ಕೆ.ವೆಂಕಟೇಶ್ ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post