Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಪ್ರ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಘಟಕದ ವತಿಯಿಂದ ಆ.6ರ ಬೆಳಿಗ್ಗೆ 9:30ರಿಂದ ಕುವೆಂಪು ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಸುವರ್ಣ ದಾಂಪತ್ಯ ಸನ್ಮಾನ ಹಾಗೂ ಸಂಘದ ಹಿರಿಯ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಹೆಚ್.ಕೆ. ಕೇಶವಮೂರ್ತಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2004ರಲ್ಲಿ ಆರಂಭವಾದ ಸಂಘ 18 ವರ್ಷ ಪೂರೈಸಿ 19ನೇ ವರ್ಷಕ್ಕೆ ಕಾಲಿಟ್ಟಿದ್ದು, 18 ವರ್ಷದ ಅವಧಿಯಲ್ಲಿ 2007ರಲ್ಲಿ ಚಿಂತನಾ ಸಮಾವೇಶ, 2009ರಲ್ಲಿ ರಾಜ್ಯ ಮಟ್ಟದ ವಿಪ್ರ ವಧುವರರ ಸಮಾವೇಶ ಹಾಗೂ 2012ರಲ್ಲಿ ವಿಪ್ರ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದೂ ಅಲ್ಲದೆ 2015ರಲ್ಲಿ ರಾಜ್ಯ ಮಟ್ಟದ ಶ್ರೀ ಗಾಯತ್ರಿ ಮಾತಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ವಿಪ್ರ ಬಾಂಧವರ ಮಧ್ಯೆ ಜಾಗೃತಿ ಉಂಟು ಮಾಡಲಾಗಿದೆ ಎಂದರು.
ಸಂಘವು ಹಲವಾರು ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡು ಬರುತ್ತಿದೆ. ಹಳೆಯ ರೈಲ್ವೆ ನಿಲ್ದಾಣದ ಬಳಿ ಸೂಡಾದಿಂದ ನಿವೇಶನ ಮಂಜೂರಾಗಿದ್ದು, ಸುಮಾರು 2.25ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 40 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 75 ವಿದ್ಯಾರ್ಥಿಗಳಿಗೆ ಸುಮಾರು 7.50 ಲಕ್ಷ ರೂ. ವಿದ್ಯಾನಿಧಿ ವಿತರಿಸಲಾಗುವುದು. ಶತಾಯುಷಿ ಹೆಚ್.ಎಸ್. ವೆಂಕಮ್ಮ ಹಾಗೂ ಸುವರ್ಣ ದಾಂಪತ್ಯ ಪೂರೈಸಿದ 7 ದಂಪತಿಗಳಿಗೆ ಸನ್ಮಾನಿಸಲಾಗುವುದು ಎಂದರು.
ಹಿರಿಯ ನಿರ್ದೇಶಕರಾದ ಉಮಾಪಾಟೀಲ, ಪ್ರಹ್ಲಾದ ಪಾಟೀಲ, ಡಾ. ಎನ್.ಆರ್. ಮಂಜುಳಾ, ಸರ್ಕಾರಿ ಸೇವೆಯಿಂದ ನಿವೃತ್ತರಾದ ಸಂಘದ ನಿರ್ದೇಶಕ ಹರೀಶ್ ಕಾರ್ಣಿಕ್, ವಿಪ್ರಶ್ರೀ ಪುರಸ್ಕøತರಾದ ಜಿ.ಎಸ್. ಅನಂತ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೆ. ರಾಮಾಚಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಅವರನ್ನು ಅಭಿನಂದಿಸಲಾಗುವುದು ಎಂದರು.
ಬೆಳಿಗ್ಗೆ 9-30ಕ್ಕೆ ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕ ಎಸ್. ಸೂರ್ಯಪ್ರಕಾಶ್ ಪಂಡಿತ್ ದಿಕ್ಸೂಚಿ ನುಡಿಗಳನ್ನಾಡುವರು. ನಂತರ ನಡೆಯುವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಸಂಘದ ಮುಖ್ಯ ಸಲಹೆಗಾರ ಮ.ಸ. ನಂಜುಂಡಸ್ವಾಮಿ, ಗೌರವಾಧ್ಯಕ್ಷ ಆರ್. ಅಚ್ಯುತರಾವ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಆರ್. ಅಚ್ಯುತರಾವ್, ಹೆಚ್.ಎನ್. ಛಾಯಾಪತಿ. ಯು.ಎಸ್. ಕೇಶವಮೂರ್ತಿ, ರವಿಕುಮಾರ್, ಕೆ.ಎನ್. ವಿಶ್ವನಾಥ್, ಎಲ್.ಎನ್. ಪ್ರಸಾದ್, ವನಜಾ ರವಿಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post