ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆರ್ಬಿಟ್ರೇಷನ್ ಪ್ರಕರಣಗಳಲ್ಲಿ ಹಲವಾರು ರೀತಿಯ ಲೋಪಗಳು ವ್ಯತ್ಯಯಗಳು ಆಗುತ್ತಿರುವುದರಿಂದ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರಿ ವಕೀಲರು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಕಾಲಕ್ಕೆ ಸಲ್ಲಿಸುವಂತೆ ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಎಚ್.ಕೆ. ಪಾಟೀಲ HKPatil ತಿಳಿಸಿದರು.
ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕರ್ನಾಟಕ ಉಚ್ಛ ನ್ಯಾಯಾಲಯದ ಸರ್ಕಾರಿ ವಕೀಲರುಗಳ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಬಿಟ್ರೇಷನ್ ಪ್ರಕರಣಗಳಲ್ಲಿ Arbitration Case ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಇತರ ಸಂಬಂಧಪಟ್ಟವರೊಂದಿಗೆ ಇನ್ನೂ 15 ದಿವಸದಲ್ಲಿ ಚರ್ಚಿಸಿ ಮಾರ್ಗದರ್ಶಿ ಸೂತ್ರಗಳನ್ನು ನಿರ್ಣಯಿಸಲಾಗುವುದೆಂದು ಸಚಿವರು ವಿವರಿಸಿದರು.
ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಅಧಿನಿಯಮ 2023ನ್ನು ವಿಧಾನ ಮಂಡಲದ ಕಳೆದ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದು ಸರ್ಕಾರಿ ವ್ಯಾಜ್ಯ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಒಂದು ದಿಕ್ಸೂಚಿ ಅಥವಾ ನಿರ್ದೇಶನ ರಹಿತ ರೀತಿಯಲ್ಲಿ ನಡೆಯುತ್ತಿತ್ತು. ಕೇವಲ ಸುತ್ತೋಲೆಗಳು ಸರ್ಕಾರಿ ಆದೇಶಗಳು ನಿಯಮಗಳು ಪರಿಣಾಮರಹಿತವಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಕರ್ನಾಟಕ ವಿಧಾನ ಮಂಡಲದಲ್ಲಿ ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಅಧಿನಿಯಮವನ್ನು ಜಾರಿಗೆ ತಂದು ಸರ್ಕಾರಿ ವಕೀಲರ ಕಾರ್ಯನಿರ್ವಹಣೆಯನ್ನು ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ವಿಧಾಯಿಸ(Codify)ಲಾಗಿದೆ. ಇದರಿಂದ ಸರ್ಕಾರದ ವ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಮತ್ತು ಜನಹಿತ ಮತ್ತು ಸರ್ಕಾರದ ಹಿತಾಸಕ್ತಿಯನ್ನು ಅತ್ಯುನ್ನತವೆಂದು ಭಾವಿಸಿ, ಪುನರವ್ಯಾಖ್ಯಾನ ಮಾಡಿ, ಹೊಣೆಗಾರಿಕೆ ಮತ್ತು ಜವಬ್ದಾರಿಗಳನ್ನು ಜಾರಿಗೆ ತಂದಿದೆ ಎಂದು ಇಂದು ತಿಳಿಸಿದರು.
Also read: ಪ್ರಕೃತಿ ದಿನ ಹಿನ್ನೆಲೆ: ವೃಕ್ಷ ಪೂಜೆ ಸಲ್ಲಿಕೆ
ಈ ವಕೀಲರುಗಳ ಸಮ್ಮೇಳನದಲ್ಲಿ ಕಳೆದ ಐದಾರು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ಮತ್ತು ಇತರ ಸರ್ಕಾರಿ ಸಂಸ್ಥೆಗಳು ರಾಜ್ಯದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಶೇ75 ರಷ್ಟು ಪ್ರಕರಣಗಳನ್ನು ಸೋತಿವೆ ಅಥವಾ ಸರ್ಕಾರದ ವಿರುದ್ದ ಆದೇಶಗಳಾಗಿವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಶೇ 95ಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಕರ್ನಾಟಕ ಸರ್ಕಾರ ಸೋಲು ಅನುಭವಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಸರ್ಕಾರಿ ಮೇಲ್ಮನವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳಗೊಂಡು ವೆಚ್ಚದಾಯಕ ವ್ಯವಸ್ಥೆಯನ್ನು ರೂಪಿಸಿದೆ.
ರಾಜ್ಯದ ಜಿಲ್ಲಾ, ತಾಲ್ಲೂಕು ಮತ್ತು ಇತರ ನ್ಯಾಯಾಲಯಗಳಲ್ಲಿ ಹೈಕೋರ್ಟ್ ವರೆಗೆ ಪ್ರಸ್ತುತ 21.4 ಲಕ್ಷ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಕೆಳ ಹಂತದ ನ್ಯಾಯಾಲಯದಲ್ಲಿ 18.9 ಲಕ್ಷ ಪ್ರಕರಣಗಳಿದ್ದರೆ 2.50 ಲಕ್ಷ ಪ್ರಕರಣಗಳು ಹೈಕೋರ್ಟ್ನಲ್ಲಿವೆ. 1626 ಪ್ರಕರಣಗಳು 20 ರಿಂದ 3೦ ವರ್ಷದ ಹಳೆಯವಾಗಿದ್ದರೆ, 30 ವರ್ಷಕ್ಕಿಂತ ಹೆಚ್ಚು ಹಳೆಯದಾದ ಪ್ರಕರಣಗಳು 172 ಇವೆ ಎಂದು ಸಚಿವರು ವಕೀಲರುಗಳ ಸಮ್ಮೇಳನದಲ್ಲಿ ವಿವರಿಸಿದರು.
ಪ್ರಕರಣಗಳಲ್ಲಿ ಸೋಲು ಉಂಟಾಗುತ್ತಿರುವುದರಿAದ ಸರ್ಕಾರದಿಂದ ಅಮೂಲ್ಯವಾದಂತಹ ಆಸ್ತಿ ಮತ್ತು ತೆರಿಗೆದಾರರ ಹಣ ವೆಚ್ಚವಾಗುತ್ತಿರುವುದನ್ನು ಗಮನಿಸಿ ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ನ್ಯಾಯಾಲಯಗಳು ಮತ್ತು ಶಾಸನಬದ್ಧ ನ್ಯಾಯಾಧಿಕರಣಗಳ ಮುಂದೆ ಸರ್ಕಾರಿ ವ್ಯಾಜ್ಯಗಳು ನಡೆಸುವ ಕುರಿತಂತೆ ನಿಯಮಗಳು, ಆದೇಶಗಳು, ಅಧಿಸೂಚನೆಗಳು, ಸುತ್ತೋಲೆಗಳು ಮುಂತಾದ ದಿಕ್ಸೂಚಿ ರಹಿತ ನಿರ್ದೇಶನಗಳನ್ನು ಈ ಕಾನೂನಿನ ಮೂಲಕ ಬದಲಾಯಿಸಲಾಗಿದೆ. ವ್ಯಾಜ್ಯಗಳಲ್ಲಿ ಸರ್ಕಾರಿ ವಕೀಲರು ಮೌಖಿಕ ವಾದ-ಪ್ರತಿವಾದಗಳ ಜೊತೆಗೆ ಲಿಖಿತ ಮೂಲಕವಾದ ವಾದ-ಪ್ರತಿವಾದಗಳ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇಂಥ ಲಿಖಿತವಾದ ವಾದ-ಪ್ರತಿವಾದಗಳ ಸಲ್ಲಿಕೆಯನ್ನು ಮಾಡುವ ಮೊದಲು ಒಂದು ಪ್ರಕ್ರಿಯೆಯನ್ನು ವ್ಯಾಖ್ಯಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post