ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ರೈಲ್ವೆ ಇತಿಹಾಸದಲ್ಲಿ ಕ್ರಾಂತಿಕಾರಕ ಅಭಿವೃದ್ಧಿ ಮಾಡಿರುವ ಕ್ರಿಯಾಶೀಲ ಸಂಸದ ಬಿ.ವೈ. ರಾಘವೇಂದ್ರ BYRaghavendra ಅವರು ಇಂತಹುದ್ದೇ ಒಂದು ಮಹತ್ವದ ಕಾರ್ಯದ ಯಶಸ್ಸಿನ ಪ್ರಯತ್ನದಲ್ಲಿದ್ದು, ಇದು ಶೀಘ್ರವೇ ಸಾಕಾರಗೊಳ್ಳಲಿದೆ ಎಂದು ಹೇಳಲಾಗಿದೆ.
ಹೌದು… ರಾಘವೇಂದ್ರ ಅವರು ಸಂಸದರಾದ ನಂತರ ಶಿವಮೊಗ್ಗದಿಂದ ಬೆಂಗಳೂರು, ಮೈಸೂರು ಮಹಾನಗರಗಳಿಗೆ ಇಂಟರ್ ಸಿಟಿ, ಜನಶತಾಬ್ದಿ ವೇಗದ ರೈಲುಗಳ ಆರಂಭದೊಂದಿಗೆ ಹಲವು ರೈಲುಗಳೂ ಸಹ ಆರಂಭವಾದವು. ಮಾತ್ರವಲ್ಲ ತಿರುಪತಿ ಹಾಗೂ ಚೆನ್ನೆÊಗೂ ಸಹ ನಗರದಲ್ಲಿ ನೇರ ರೈಲು ಸಂಚಾರವನ್ನು ಆರಂಭ ಮಾಡಿಸುವಲ್ಲಿ ಸಂಸದರು ಯಶಸ್ವಿಯಾಗಿದ್ದಾರೆ. ಈಗ ಇದಕ್ಕೂ ಮಿಗಿಲಾದ ದೇಶದ ಅತಿ ವೇಗದ ರೈಲು ಎಂದೇ ಖ್ಯಾತವಾಗಿರುವ ವಂದೇ ಭಾರತ್ ರೈಲನ್ನು ಶಿವಮೊಗ್ಗಕ್ಕೆ ತರುವಲ್ಲಿ ಅವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂಬ ಸಾರ್ವಜನಿಕರ ಬೇಡಿಕೆಯಂತೆ ಕೇಂದ್ರದಿಂದ ಇದರ ಅನುಮತಿಗಾಗಿ ನಿರಂತರವಾಗಿ ಸಂಸದರು ಪ್ರಯತ್ನ ಮಾಡುತ್ತಿದ್ದಾರೆ. ಮಾತ್ರವಲ್ಲ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರನ್ನು ಸಹ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆಯಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ಸಹ ದೊರೆತಿದೆ ಎನ್ನಲಾಗಿದೆ.
ಯಾವಾಗ ಆರಂಭವಾಗಬಹುದು?
ಸಾಮಾನ್ಯವಾಗಿ ವಂದೇ ಭಾರತ್ ರೈಲು ಸಂಚಾರ ನಡೆಸುವ ಮಾರ್ಗದಲ್ಲಿ ವಿದ್ಯುದ್ದೀಕರಣ ಮಾರ್ಗ ಅವಶ್ಯವಾಗಿರುತ್ತದೆ. ಸಂಸದ ರಾಘವೇಂದ್ರ ಅವರ ಪ್ರಯತ್ನದಿಂದಾಗಿ ಈಗಾಗಲೇ ಶಿವಮೊಗ್ಗದವರೆಗೂ ರೈಲ್ವೆ ವಿದ್ಯುತ್ ಮಾರ್ಗ ನಡೆದಿದೆ.
ಅಂದುಕೊಂಡಂತೆ ಎಲ್ಲವೂ ಆಗಿ ರೈಲ್ವೆ ಮಂಡಳಿಯಿಂದ ಅನುಮೋದನೆ ದೊರೆತರೆ ಬೆಂಗಳೂರು-ಶಿವಮೊಗ್ಗ ನಡುವೆ ಡಿಸೆಂಬರ್ ವೇಳೆಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ.
ಇನ್ನು, ಬೆಂಗಳೂರು-ಶಿವಮೊಗ್ಗ ನಡುವೆ ಈಗಾಗಲೇ ವಿದ್ಯುತ್ ಲೈನ್ ಕಾಮಗಾರಿ ಮುಕ್ತಾಯವಾಗಿದ್ದು, ಜನಶತಾಬ್ದಿ ರೈಲು ಇದರ ಮೂಲಕವೇ ಸಂಚರಿಸುತ್ತಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಬಿ.ವೈ. ರಾಘವೇಂದ್ರ ಅವರು ಸಂಸದರಾದ ನಂತರ ಜಿಲ್ಲೆಯ ರೈಲ್ವೆ ಇಲಾಖೆಯಲ್ಲಿ ಬಹಳಷ್ಟು ಅಮೂಲಾಗ್ರ ಬದಲಾವಣೆಗಳಾದವು. ರೈಲು ನಿಲ್ದಾಣಗಳ ಮೇಲ್ದರ್ಜೆಗೆ ಏರಿಕೆ, ಶಿವಮೊಗ್ಗ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಲಿಫ್ಟ್ ಸೌಲಭ್ಯ, ಎಕ್ಸ್’ಪ್ರೆಸ್ ರೈಲು ತಾಳಗುಪ್ಪ ವರೆಗೂ ವಿಸ್ತರಣೆ, ಬೆಂಗಳೂರು ತಲುಪುವ ಪ್ರಯಾಣಿಕರಿಗೆ ಅನುಕೂಲಕರ ಸಮಯ ನಿಗದಿ, ಇಂಟರ್ ಸಿಟಿ ಹಾಗೂ ಜನಶತಾಬ್ದಿ ರೈಲುಗಳ ಆರಂಭ, ರೈಲ್ವೆ ಮೇಲ್ಸೇತುವೆಗಳು ಸೇರಿದಂತೆ ಸಾಲು ಸಾಲು ಅಭಿವೃದ್ಧಿಗಳು ಆಗಿವೆ.
ಈಗ ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಶಿವಮೊಗ್ಗ ಮಾತ್ರವಲ್ಲ ಉತ್ತರಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಯ ಜನರಿಗೂ ಸಹ ಇದು ಅನುಕೂಲವಾಗಲಿದೆ.
ಪ್ರಮುಖವಾಗಿ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಪ್ರಯಾಣ ನಾಗರಿಕರಿಗೆ ಮುಕ್ತವಾಗಿದ್ದು, ಸೆ.1ರಿಂದ ಶಿವಮೊಗ್ಗ-ಮುಂಬೈ-ನವದೆಹಲಿ-ಚೆನ್ನೈ ನಗರಗಳಿಗೆ ಸಂಪರ್ಕ ವಿಮಾನ ಸಂಚಾರ ಆರಂಭವಾಗಲಿರುವ ಬೆನ್ನಲ್ಲೇ ವಂದೇ ಭಾರತ್ ಸುದ್ದಿ ಸಂತಸ ಮೂಡಿಸಿದೆ.
ಕುತೂಹಲ ಮೂಡಿಸಿದ ಟ್ವೀಟ್
ಇನ್ನು, ಈ ಕುರಿತಂತೆ ಟ್ವೀಟ್ ಮಾಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಶಿವಮೊಗ್ಗ ಈಗಾಗಲೇ ರಸ್ತೆ-ರೈಲು-ವಾಯು ಮಾರ್ಗಗಳಲ್ಲಿ ಬೆಂಗಳೂರೂ ಸೇರಿದಂತೆ ಅನೇಕ ಕಡೆಗಳಿಗೆ ಸುಗಮ ಹಾಗೂ ವೇಗದ ಸಂಪರ್ಕ ಪಡೆದುಕೊಂಡಿದೆ ಎಂದಿದ್ದಾರೆ.
ಈಗ ವಂದೇಭಾರತ್ ರೈಲನ್ನು ಕರೆಸಿಕೊಳ್ಳುವ ಸಮಯ ಎಲ್ಲವೂ ಸರಿಹೋದರೆ ಸದ್ಯದಲ್ಲೇ ಈ ಸೂಸ್ಟರ್ ಫಾಸ್ಟ್ ರೈಲು ಶಿವಮೊಗ್ಗಕ್ಕೆ ಬರಬಹುದು. ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post