ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ನೀರಾವರಿಗೆ ಮಣ್ಣಿನ ಮಕ್ಕಳಿಂದ ಅನ್ಯಾಯವಾಗಿದೆ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ HDKumaraswamy ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಅವರು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿ, ನೆಲಮಂಗಲದಲ್ಲಿ ನಡೆದ ಸಭೆಯೊಂದರಲ್ಲಿ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ Veerappa Moily ತಪ್ಪು ಹೇಳಿಕೆ ನೀಡಿದ್ದಾರೆ. ಹಸಿ ಸುಳ್ಳುಗಳನ್ನು ಹೇಳಿದ್ದಾರೆ. ಮಣ್ಣಿನ ಮಕ್ಕಳಿಂದ ಕಾವೇರಿಗೆ ದ್ರೋಹ ಆಗಿದೆ ಅಂತ ಹೇಳಿದ್ದಾರೆ. ಆದರೆ, ತಮ್ಮಿಂದ ಏನು ಆಗಿದೆ ಎನ್ನುವುದನ್ನು ಹೇಳಬೇಕಿತ್ತು. ಆದರೆ, ಬರೀ ಅಸತ್ಯವನ್ನೇ ಹೇಳಿ ಜನರ ಹಾದಿ ತಪ್ಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.

ಪಿಯರ್ ಲೆಸ್ ನಿಂದ ಸಾಲ ತಂದು ಸಂಬಳ ಕೊಟ್ಟರು:
ಈ ಮಹಾನುಭಾವರು ಎರಡು ವರ್ಷ ಮುಖ್ಯಮಂತ್ರಿ ಆಗಿದ್ದರು. ಈ ವ್ಯಕ್ತಿ ಅಧಿಕಾರ ಕಳೆದುಕೊಂಡು ಮನೆಗೆ ಹೋಗುವಾಗ ಬೊಕ್ಕಸವನ್ನು ದಿವಾಳಿ ಮಾಡಿದ್ದರು. ಸರಕಾರಿ ನೌಕರರಿಗೆ ಸಂಬಳ ಕೊಡಲಿಕ್ಕೆ ಹಣ ಇರಲಿಲ್ಲ. ಆಗ ಪಶ್ಚಿಮ ಬಂಗಾಳದ ಪಿಯರ್ಲೆಸ್ ಸಂಸ್ಥೆಗೆ ರಾಜ್ಯವನ್ನು ಒತ್ತೆ ಇಟ್ಟು ಸಾಲ ತಂದವರು ಇವರು. ಇಂಥವರು ಮಣ್ಣಿನಮಕ್ಕಳಿಂದ ನೀರಾವರಿಗೆ ಅನ್ಯಾಯ ಆಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಅವರು ಕಿಡಿ ಕಾರಿದರು.

“ಓಹೋ.. ಇವರು ಕವಿ ಸರ್ವೋತ್ತೋಮರು, ಮಹಾಕವಿಗಳು. ನಮ್ಮ ಕುವೆಂಪು ಅವರಿಗಿಂತ ಮಹಾನ್ ಕವಿಗಳು.. ರಾಮಾಯಣವನ್ನು ಮಹಾನ್ವೇಷಣೆ ಮಾಡಿ ಮಹಾಕಾವ್ಯ ಬರೆದ ಮಹಾನುಭಾವರು. ಸರಸ್ವತಿ ಸಮ್ಮಾನ ಪುರಸ್ಕಾರ ಪಡೆದ ಸರಸ್ವತಿ ಪುತ್ರರು. ಇಂಥ ಸರಸ್ವತಿ ಪುತ್ರರ ಬಾಯಲ್ಲಿ ಸುಳ್ಳು ಬರಬಹುದೇ? ಎಂದು ಕುಮಾರಸ್ವಾಮಿಅವರು ವೀರಪ್ಪ ಮೊಯಿಲಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಾವೇರಿ ಟ್ರಿಬ್ಯೂನಲ್ ರಚಿಸುವಾಗ ಏನು ಮಾಡಿದ್ದೀರಿ?:
ಕಾವೇರಿ ಟ್ರಿಬ್ಯುನಲ್ ರಚಿಸುವಾಗ ಈ ಮಹಾನುಭಾವನ ಕೊಡುಗೆ ಏನು? ಅದರ ರಚನೆ ವಿರುದ್ಧ ದೇವೇಗೌಡರು ಹೋರಾಟ ನಡೆಸುತ್ತಿದ್ದಾಗ ಇವರ ಪಾತ್ರ ಏನಾಗಿತ್ತು? 1962ರಿಂದ ಕಾವೇರಿ ನೀರಿನ ಹಕ್ಕಿಗಾಗಿ ಜೀವನ ಮೀಸಲಿಟ್ಟ ಆ ಮಣ್ಣಿನಮಗನ ಹೋರಾಟದ ಫಲ ಏನೆಂಬುದು ಇವರಿಗೆ ಗೊತ್ತಿಲ್ಲವೇ? ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳು ಹೇಗೆ ನಿರ್ಮಾಣ ಆದವು? ಇವರ ಸಾಧನೆ ಏನು? ಎಂದು ಮಾಜಿ ಮುಖ್ಯಮಂತ್ರಿ ಅವರು ಖಾರವಾಗಿ ಪ್ರಶ್ನಿಸಿದರು.

Also read: ಸತ್ಯಧರ್ಮ ತೀರ್ಥರ ತಪಸ್ಸು, ಸಾಧನೆಗೆ ದೇವರು ಒಲಿದ ರೀತಿಯೇ ಅದ್ಬುತ: ಸತ್ಯಾತ್ಮತೀರ್ಥರ ಅಭಿಮತ
ನಮ್ಮನ್ನು ಕರೆದರೆ ಉಪಯೋಗ ಏನು?
ರಾಜ್ಯದ ನೀರಾವರಿ ಅನ್ಯಾಯದ ಅಧ್ಯಾಯಗಳನ್ನು ಒಮ್ಮೆ ತಿರುವಿ ಹಾಕಿದರು ಇವರು ಎಸಗಿದ ಅನ್ಯಾಯಗಳೇನು ಎನ್ನುವುದು ಗೊತ್ತಾಗುತ್ತದೆ. ಯಾವ ಯಾವ ಸಂದರ್ಭದಲ್ಲಿ ಆ ಮಹಾನುಭಾವರಿಂದ ಏನೇನಾಯ್ತು ಎನ್ನುವುದು ತಿಳಿಯುತ್ತದೆ. ಧರಂಸಿಂಗ್ ಅವರನ್ನೇ ದಾರಿ ತಪ್ಪಿಸಿದ್ದ ಈ ವ್ಯಕ್ತಿಯಿಂದಲೇ ಸರಕಾರ ಸಲಹೆ ಸ್ವೀಕರಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸರಕಾರಕ್ಕೆ ನಾಡಿನ ಜನರ ಹಿತರಕ್ಷಣೆಯ ತಿಳಿವಳಿಕೆಯೂ ಇಲ್ಲ, ಕಾಳಜಿಯೂ ಇಲ್ಲ. ಜನರ ಹಿತರಕ್ಷಣೆ ಮಾಡುವ ತಾಕತ್ತು ಇಲ್ಲ, ದಮ್ಮು ಎರಡೂ ಇಲ್ಲ. ಹೀಗಾದರೆ, ರೈತರ ಬೆಳೆಗಳಿಗೆ, ಬೆಂಗಳೂರಿಗೆ ಕುಡಿಯುವ ಎಲ್ಲಿಂದ ತಂದು ಕೊಡುತ್ತಾರೆ? ಎಂದು ಅವರು ಪ್ರಶ್ನಿಸಿದರು.

ತಮಿಳುನಾಡಿನಲ್ಲಿ ಎಷ್ಟು ಎಕರೆ ಬೆಳೆ ಬೆಳೆದಿದ್ದಾರೆ. ಎಷ್ಟು ನೀರಾವರಿ ಭೂಮಿಯನ್ನು ವಿಸ್ತರಣೆ ಮಾಡಿಕೊಂಡಿದ್ದಾರೆ. ಈವರೆಗೆ ಎಷ್ಟು ನೀರು ನೀಡಲಾಗಿದೆ. ಈ ಎಲ್ಲಾ ಮಾಹಿತಿ ರಾಜ್ಯ ಸರಕಾರಕ್ಕೆ ಇದೆಯಾ? ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಜಲ ನಿಯಂತ್ರಣ ಸಮಿತಿಗೆ ಇವರು ಮಾಹಿತಿ ಕೊಟ್ಟಿದ್ದಾರೆಯೇ ಎಂದು ಅವರು ಕೇಳಿದರು.
ಹಿಂದೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ರಚನೆ ಮಾಡುವಾಗಲೇ ನಾವು ಉಗ್ರವಾಗಿ ಪ್ರತಿಭಟಿಸಿದ್ದೆವು. ಆದರೆ, ಕಾಂಗ್ರೆಸ್ ಸರಕಾರಗಳು ಮಾಡಿದ್ದೇನು? ನಿರಂತರವಾಗಿ ರಾಜ್ಯದ ಹಿತ ಕಡೆಗಣಿಸಿದವು. ಈಗ ನೋಡಿದರೆ ಸಂಕಷ್ಟದ ಸೂತ್ರದ ಬಗ್ಗೆಯೇ ಚಕಾರ ಎತ್ತದೆ ತಮಿಳುನಾಡಿಗೆ ನೀರು ಹರಿಸುತ್ತಿದೆ. ಪದೇಪದೆ ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಆಗುತ್ತಿದೆ ಎಂದು ಅವರು ಕಿಡಿಕಾರಿದರು.

ಕಾವೇರಿ ವಿಚಾರವಾಗಿ ತುರ್ತಾಗಿ ಸರ್ವಪಕ್ಷ ಸಭೆಯನ್ನು ಮುಖ್ಯಮಂತ್ರಿಗಳು ಕರೆದಿದ್ದಾರೆ. ಆದರೆ ನನಗೆ ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ಭಾಗಿಯಾಗಲು ಸಾಧ್ಯ ಆಗುತ್ತಿಲ್ಲ. ಹದಿನೈದು ದಿನಗಳ ಹಿಂದೆಯೇ ಹಾಸನ ಕಾರ್ಯಕ್ರಮ ನಿಗದಿ ಆಗಿತ್ತು. ಹೀಗಾಗಿ ನಾನು ಸರ್ವಪಕ್ಷ ಸಭೆಗೆ ಭಾಗಿಯಾಗಲು ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು










Discussion about this post