ಕಲ್ಪ ಮೀಡಿಯಾ ಹೌಸ್ | ರಾಮನಗರ |
ಜಿಲ್ಲಾ ಸರ್ವೋದಯ ಮಂಡಲ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಏರ್ಪಡಿಸಿದ್ದ ಖೈದಿಗಳ ಮನಃ ಪರಿವರ್ತನಾ ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಹೆಚ್ಚು ವಿಚಾರಣಾಧೀನ ಖೈದಿಗಳು ತನ್ಮಯತೆಯಿಂದ ಭಾಗವಹಿಸಿದ್ದರು.
ಕಾರಾಗೃಹದ ಅಧೀಕ್ಷಕ ರಾಕೇಶ್ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರಬೋಧನೆಯಲ್ಲಿ ರಾಜ್ಯ ಸರ್ವೋದಯ ಅಧ್ಯಕ್ಷ ಡಾ.ಹೆಚ್. ಎಸ್. ಸುರೇಶ್ ಬರೆದ ‘ಪಾತಕ ಲೋಕದಿಂದ ಗಾಂಧೀ ಯಾನದೆಡೆಗೆ ‘ಮಹಾರಾಷ್ಟ್ರದ ಪರಿವರ್ತಿತ ಕ್ರಿಮಿನಲ್ ಲಕ್ಷ್ಮಣ್ ತುಕಾರಾಂ ಗೊಲೆ ಜೀವನ ಕತೆ ಮತ್ತು ಇನ್ನಿತರ ಗಾಂಧೀ ಸಾಹಿತ್ಯ ಪುಸ್ತಕಗಳನ್ನು ಅಲ್ಲಿನ ಗ್ರಂಥಾಲಯಕ್ಕೆ ನೀಡಲಾಯಿತು.
ಖೈದಿಗಳನ್ನು ಉದ್ದೇಶಿಸಿ ಮಾತನಾಡಿದ ಎಂ ವಿ ಶ್ರೀನಿವಾಸನ್,ಎಂ. ಕೆ. ಕೃಷ್ಣ, ಹಾರೋಹಳ್ಳಿ ಜಯರಾಂರವರು ವಿಷಾದನೀಯ ಸಂಗತಿ ಎಂದರೆ ಇಲ್ಲಿನ 99 ಪ್ರತಿಶತ ಬಂಧಿತರು 25 ವಯಸ್ಸಿನ ಆಸುಪಾಸಿನವರು. 60ಕ್ಕೂ ಅಧಿಕ ಮಂದಿ ಕಾಲೇಜು ಮೆಟ್ಟಿಲು ತುಳಿದವರು !ನಮ್ಮ ಯುವಜನತೆ ಎತ್ತ ಸಾಗುತ್ತಿದೆ? ಶಿಕ್ಷಣ ಮತ್ತು ಸಾಮಾಜಿಕ ಬದುಕಿನ ಅರ್ಥ ಏನು? ಮೌಲ್ಯಗಳು ಪತನದ ಪಾತಾಳ ತಲುಪಿದ್ದು ಹೇಗೆ? ಹತ್ಯೆ, ಹಗೆ, ದ್ವೇಷ, ಮತ್ಸರ -ಭವಿಷ್ಯ ಇದೆಯೇ? ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Also read: ಹಿಂದೂಗಳಿಗೆ ಭರ್ಜರಿ ಜಯ: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹೈಕೋರ್ಟ್ ಅಸ್ತು
ಕಾರ್ಯಕ್ರಮದ ಅಂಗವಾಗಿ ಚೆನ್ನೈ ಗಣಿತ ಸಂಸ್ಥೆಯ ನಿವೃತ್ತ ರಿಜಿಸ್ಟ್ರಾರ್ ರಾಮ ಕೃಷ್ಣ ಮಂಜ, ಅವರ ಮನೋಲ್ಲಾಸಕ್ಕೆ ವೇಣುವಾದನ, ಮೌತ್ ಆರ್ಗಾನ್, ಜಾನಪದ ಗೀತ ಗಾಯನವನ್ನು, ನಿವೃತ್ತ ಕೆನರಾ ಬ್ಯಾಂಕ್ ಪ್ರಬಂಧಕ ಎಸ್. ನರಸಿಂಹ ಮೂರ್ತಿ, ಸರ್ವೋದಯ ಕಾರ್ಯದರ್ಶಿ ಯ. ಚಿ. ದೊಡ್ಡಯ್ಯ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಬೆಂಗಳೂರು ನಗರ ಜಿಲ್ಲಾ ಸರ್ವೋದಯ ಅಧ್ಯಕ್ಷ ಡಾ. ಗುರುರಾಜ್ ಪೋಶೆಟ್ಟಿಹಳ್ಳಿ, ಖಜಾಂಚಿ ವಿ. ಟಿ.ಹುಡೇದ ಉಪಸ್ಥಿತರಿದ್ದರು. ಜೈಲರ್ ಇಮಾಂ ಕಾಸಿಂ ವಂದನಾರ್ಪಣೆ ಸಲ್ಲಿಸಿದರು. ಸೆರೆವಾಸಿಗಳಿಗೆ ಹಣ್ಣುಗಳನ್ನೂ ನೀಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















