ಕಲ್ಪ ಮೀಡಿಯಾ ಹೌಸ್ | ಉತ್ತರ ಕನ್ನಡ |
ಸೋದೆ ವಾದಿರಾಜ ಮಠದ ಸಂಪ್ರದಾಯದ ವಿಶಿಷ್ಟ ಪದ್ದತಿಯಂತೆ ಶ್ರೀಭೂತರಾಜ ವಿಶೇಷ ಪೂಜೆ ಮಾಡಲು ಸೋದೆ ಮಠದಲ್ಲಿ ಹಾಗೂ ಶಾಖಾ ಮಠಗಳಿಗೆ ಮಾತ್ರ ಅನುಮತಿಯಿದ್ದು, ಬೇರೆಲ್ಲೂ ಅನುಮತಿ ನೀಡಿರುವುದಿಲ್ಲ ಎಂದು ಭಕ್ತವರ್ಗಕ್ಕೆ ಸೋದೆ ಶ್ರೀ ವಾದಿರಾಜ ಮಠ ತಿಳಿಸಿದೆ.
ಈ ಕುರಿತಂತೆ ಸೋದೆ ಶ್ರೀವಾದಿರಾಜ ಮಠ ಹಾಗೂ ಶ್ರೀ ಭೀಮನಕಟ್ಟೆ ಮಠದ ದಿವಾನರು ಮಹತ್ವದ ಪ್ರಕಟಣೆ ಹೊರಡಿಸಲಾಗಿದೆ.
ಏನಿದೆ ಪ್ರಕಟಣೆಯಲ್ಲಿ?
ಸಜ್ಜನರ ಅವಗಾಹನೆಗೆ.
ಸೋದೆ ವಾದಿರಾಜ ಮಠದ ಸಂಪ್ರದಾಯಕ್ಕೆ ಅದರದ್ದೇ ಆದ ಇತಿಹಾಸವಿದೆ. ಸೋದೆ ಮಠದಲ್ಲಿ ನಡೆಯುವ ಪ್ರತಿಯೊಂದು ಆಚರಣೆ – ಆರಾಧನೆಗಳಿಗೂ ಅದರದ್ದೇ ಆದ ಮಹತ್ವ ಇದೆ. ಶ್ರೀಭಾವಿಸಮೀರ ಶ್ರೀವಾದಿರಾಜರ ಆರಾಧನಾ ಪದ್ದತಿಯಲ್ಲಿ ಹಾಗೂ ಭಾವಿರುದ್ರ ಶ್ರೀಭೂತರಾಜರ ಆರಾಧನಾ ಪದ್ಧತಿಯಲ್ಲಿಯೂ ಸೋದೆ ಮಠದ್ದೇ ಆದ ವಿಶಿಷ್ಟ ಸಂಪ್ರದಾಯವಿದೆ.
ಶ್ರೀ ಭೂತರಾಜರ ವಿಶೇಷ ಪೂಜೆ ಮಾಡಲು ಸೋದೆ ಶ್ರೀಗಳವರಿಂದಲೇ ಭೂತರಾಜರ ಮಂತ್ರೋಪದೇಶವನ್ನು ಪಡೆಯಬೇಕೆಂಬ ನಿಯಮವಿದೆ. ಇಂತಹ ಭೂತರಾಜರ ಪೂಜೆಯನ್ನು ಸೋದೆ ಮಠದಲ್ಲಿ ಹಾಗೂ ಸೋದೆ ಮಠದ ಇತರ ಶಾಖಾ ಮಠಗಳಲ್ಲಿ ಹೊರತು ಪಡಿಸಿ ಇನ್ಯಾರಿಗೂ ಭೂತರಾಜರ ವಿಶೇಷ ಪೂಜೆ ಮಾಡುವ ಅನುಮತಿಯನ್ನು ಶ್ರೀಮಠವು ನೀಡಿಲ್ಲ. (ಭೀಮನಕಟ್ಟೆ ಮಠದಲ್ಲಿ ಸೋದೆ ಮಠದ ಸಂಪ್ರದಾಯದಂತೆ ಭೂತರಾಜರ ಪೂಜೆ ಮಾಡುವ ಸಂಪ್ರದಾಯವಿದೆ.) ಒಂದುವೇಳೆ ಮಾಡುವದಾದಲ್ಲಿ ಸೋದೆ ಶ್ರೀಗಳವರಿಂದ ಮಂತ್ರೋಪದೇಶವನ್ನು ಪಡೆದು ಸೋದೆ ಮಠದ ಸಂಪ್ರದಾಯದಂತೆಯೇ ಮಾಡಬೇಕೆಂಬುದು ಶ್ರೀಮಠದ ನಿಯಮವಾಗಿದೆ.
ಆದರೆ ಇತ್ತೀಚಿಗೆ ಕೆಲವು ವ್ಯಕ್ತಿಗಳು ಭೂತರಾಜರ ಹೆಸರಿನಲ್ಲಿ ಭೂತರಾಜರ ಯಾವುದೇ ಪ್ರತೀಕವಿಲ್ಲದೇ ಕೇವಲ ರಂಗವಲ್ಲಿಯಲ್ಲಿ ಚಿತ್ರವನ್ನು ಬರೆದು ವಿಕೃತವಾಗಿ ಆರಾಧನೆಯನ್ನು ನಡೆಸುವುದು ಕಂಡು ಬಂದಿದೆ. ಇಂತಹ ಆರಾಧನಾ ಪದ್ಧತಿಯನ್ನು ಸೋದೆ ಮಠವು ಸಮ್ಮತಿಸುವುದಿಲ್ಲ. ಭೂತರಾಜರ ಪ್ರತೀಕವಿಲ್ಲದೇ ಈ ರೀತಿಯ ಆರಾಧನೆ ಅನೂಚಾನ ಸಂಪ್ರದಾಯ ವಿರೋಧಿಯಾಗಿದೆ. ಇಂತಹ ಆರಾಧನಾ ಪದ್ದತಿಗಳು ಭೂತರಾಜರ ಅನುಗ್ರಹಕ್ಕಿಂತ ಅವಕೃಪೆಗೆ ಹೆಚ್ಚು ಕಾರಣವಾಗುತ್ತದೆ ಎಂಬುದನ್ನು ಸಜ್ಜನ ಭಕ್ತರು ಗಮನಿಸಬೇಕು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post