ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ತಮಿಳುನಾಡಿನ ರಾಜಧಾನಿ ಚೆನ್ನೈ.. ಹಿಂದೆ ಮದರಾಸು ಎಂದೆನಿಸಿದ್ದ ಇದು ಈಗ ಚೆನ್ನೈ ಎಂದು ಮರುನಾಮಕರಣಗೊಂಡಿದೆ. ಸುಮಾರು ಒಂದು ಕೋಟಿಗೂ ಹೆಚ್ಚು ಜನ ಇಲ್ಲಿ ವಾಸಿಸುತ್ತಿದ್ದಾರೆ.. ಇಲ್ಲಿನ ಜನಸಾಗರದಲ್ಲಿ ಆರು ಲಕ್ಷಕ್ಕೂ ಹೆಚ್ಚು ಕನ್ನಡಿಗರೂ ವಾಸಿಸುತ್ತಿದ್ದಾರೆ.
ತವರು ನಾಡು ಕರ್ನಾಟಕದಿಂದ ಬಂದು ತಬ್ಬಲಿತನ ಅನುಭವಿಸಬಾರದೆಂಬ ದೃಷ್ಟಿಯಿಂದ ಹಾಗೂ ನಮ್ಮತನ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಹಿಂದಿನವರು ಯೋಚಿಸಿದ ಪರಿಣಾಮ ಹಲವಾರು ಕನ್ನಡ ಸಂಘಟನೆಗಳು ಚೆನ್ನೈನಲ್ಲಿವೆ.
ಇಂಥ ಕನ್ನಡ ಸಂಘಟನೆಗಳಲ್ಲಿ ಕನ್ನಡ ಬಳಗವೂ ಒಂದು.. 1965ರಲ್ಲಿ ಯಾವ ಕ್ಷಣದಲ್ಲಿ ಇದಕ್ಕೆ ಬಳಗ ಎಂದು ನಾಮಕರಣವನ್ನು ಯಾರು ಮಾಡಿದರೋ ಆ ಮಧುರ ಕ್ಷಣ ಅಕ್ಷರಶಃ ಸಾಕಾರಗೊಂಡಿದೆ.
ಬಳಗಕ್ಕೆ ಬರುವವರೆಲ್ಲರನ್ನೂ ಆಪ್ಯಾಯತೆಯಿಂದ ಆವರಿಸುವುದು ಇದು ನಮ್ಮ ಕುಟುಂಬ, ನಮ್ಮ ಸ್ವಂತದವರು ಎಂಬ ಭಾವನೆ.. ಹೀಗಾಗಿ ಅಂದಿನಿಂದದ ಇಂದಿನವರೆಗೂ ಕೌಟುಂಬಿಕ ಬಂಧನವನ್ನೇ ಮೀರಿಸುವಂಥ ಬಂಧನ ಬಳಗದ ಸದಸ್ಯರನ್ನು ಆವರಿಸಿಕೊಂಡಿದೆ. ತನ್ನ ವಿಶಿಷ್ಟ ಕಾರ್ಯಕ್ರಮಗಳಿಂದ ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಂಡ ಬಳಗ ಹುಟ್ಟಿಕೊಂಡಿದ್ದೇ ಒಂದು ವಿಶಿಷ್ಟ ರೀತಿಯಲ್ಲಿ.. ತರಕಾರಿ ಮಾರುಕಟ್ಟೆಯಲ್ಲಿ ಕೇಳಿಬಂದ ಕನ್ನಡ ಮಾತುಗಳು ಬಳಗಕ್ಕೆ ಮುನ್ನುಡಿಯಾದವು..
ಆರಂಭಿಕವಾಗಿ ಶ್ರೀಯುತ ಸಿ.ಎಸ್.ಎಸ್. ಶೆಟ್ಟಿ ಅವರ ಮನೆಯಲ್ಲಿ ಸೇರುತ್ತಿದ್ದ ಕೆಲವೇ ಕನ್ನಡಿಗರ ಗುಂಪು ಕ್ರಮೇಣ ವಿಸ್ತಾರಗೊಂಡು ದೊಡ್ಡ ಬಳಗವಾಯಿತು.. ಹಬ್ಬಗಳಲ್ಲಿ ಒಟ್ಟಾಗಿ ಸೇರುತ್ತಿದ್ದ ಸದಸ್ಯರು ಕ್ರಮೇಣ ಪ್ರತಿ ತಿಂಗಳೂ ಸೇರಿ ಏನಾದರೂ ಒಂದು ಕಾರ್ಯಕ್ರಮದ ಮೂಲಕ ಕನ್ನಡತನ ಮೆರೆಯತೊಡಗಿದರು.
ತನ್ನ ಸದಸ್ಯರಿಗೆ ಕನ್ನಡದ ವಾತಾವರಣ, ಬಂಧು ಬಳಗದವರೊಂದಿಗೆ ಸಖ್ಯದ ಆನಂದ, ನೆಮ್ಮದಿ ತಂದು ಕೊಡುತ್ತಿರುವ ಬಳಗ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗಿ ಬೆಳೆದು ಬಂದಿತು.
ಕಲೆ, ಸಾಹಿತ್ಯ, ನಾಟಕ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಸ್ಯರಿಗೆ ತೀರಾ ಆಪ್ತ ಹಾಗೂ ಆಪ್ಯಾಯಮಾನ ಎನಿಸಿಕೊಂಡಿದೆ ಕನ್ನಡ ಬಳಗ.
ಕನ್ನಡ ಬಳಗದ ಯಾವುದೇ ಕಾರ್ಯಕ್ರಮಗಳಾದರೂ ಅದು ನಿಗದಿತ ಸಮಯದಲ್ಲೇ ನಡೆಯುವುದು ವಿಶೇಷ. ಪ್ರತಿ ಜುಲೈ ತಿಂಗಳಲ್ಲಿ ನಡೆಯುವ ಸರ್ವ ಸದಸ್ಯರ ಸಭೆ ಎಲ್ಲ ಚಟುವಟಿಕೆಗಳಿಗೆ ನಾಂದಿ ಹಾಡುತ್ತದೆ. ತನ್ನ ಸದಸ್ಯರಿಗೆ ಮಾತ್ರ ಸೀಮಿತಗೊಳಿಸಕೊಳ್ಳದೆ ಇತರ ಸಂಘಟನೆಗಳೊಂದಿಗೆ ಸ್ನೇಹ ಸೌಹಾರ್ದತೆ ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.
ನಂತರ ಪ್ರತಿ ತಿಂಗಳೂ ಒಂದೊಂದು ರೀತಿಯ ವಿಶಿಷ್ಟ ಕಾರ್ಯಕ್ರಮಗಳು ನಡೆಯುತ್ತವೆ. ಜಾನಪದ ಗೀತೆ ಸ್ಪರ್ಧೆ ಪ್ರಮುಖ ಕಾರ್ಯಕ್ರಮಗಳಲ್ಲೊಂದು. ಚೆನ್ನೈ ಅಷ್ಟೇ ಅಲ್ಲದೆ ತಮಿಳುನಾಡಿನ ಇತರ ಕನ್ನಡ ಸಂಘಗಳು ಕೂಡಾ ಭಾಗವಹಿಸುತ್ತಿದ್ದು ಪ್ರತಿಷ್ಠೆಯನ್ನು ಹೆಚ್ಚಿಸಿವೆ. ಈ ಸಂದರ್ಭದಲ್ಲಿ ನಡೆಯುವ ತಿಂಡಿ ಸಂತೆಯ ರುಚಿ ಎಲ್ಲರ ಮೆಚ್ಚುಗೆಯ ಅಂಶವಾಗಿದೆ.
ಸಾಹಿತ್ಯ ಚಟುವಟಿಕೆಗಳಿಗೆ ಬಳಗದ ಕೊಡುಗೆ ಅಪಾರ. ಹೊರನಾಡ ಕನ್ನಡಿಗರಲ್ಲಿನ ಸಾಹಿತ್ಯ ರಚನಾ ಹಂಬಲಕ್ಕೆ ನೀರೆರೆದು ಪೋಷಿಸುವ ನಿಟ್ಟಿನಲ್ಲಿ ಆರಂಭಗೊಂಡದ್ದು ಲಹರಿ ಮಾಸ ಪತ್ರಿಕೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ನಿರಂತರ ಮೂರು ದಶಕಗಳಿಗೂ ಹೆಚ್ಚು ಕಾಲ ಹೊರನಾಡಿನ ಕನ್ನಡಿಗರ ಮೆಚ್ಚುನ ಪತ್ರಿಕೆಯಾಗಿ ಗಮನ ಸೆಳೆದಿತ್ತು.
ಕನ್ನಡ ಬಳಗವನ್ನು ಕಟ್ಟಿ ಬೆಳೆಸಿದವರಲ್ಲಿ ಕೆ. ಎನ್. ಮಂಜುನಾಥ್ ಕೂಡಾ ಒಬ್ಬರು. ಕ್ರೀಡೆಯಲ್ಲಿ ಅತೀವ ಆಸಕ್ತಿ ಇಟ್ಟುಕೊಂಡಿದ್ದರು. ಅಕಸ್ಮಾತ್ತಾಗಿ ಅವಘಡದಲ್ಲಿ ನಮ್ಮನ್ನಗಲಿದಾಗ ಉಂಟಾದ ಕಂದಕವನ್ನು ಅವರ ಹೆಸರಿನಲ್ಲಿ ವಿವಿಧ ಕನ್ನಡ ಸಂಘಟನೆಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಸುವ ಮೂಲಕ ತುಂಬುವ ಕಾರ್ಯ ಯಶಸ್ವಿಯಾಗಿ ಸಾಗಿದೆ.
ಎಲ್ಲ ಕನ್ನಡ ಸಂಘಟನೆಗಳನ್ನು ಒಂದೇ ವೇದಿಕೆ ಅಡಿಯಲ್ಲಿ ತರಬೇಕೆಂಬ ಹಂಬಲ ಮತ್ತೊಮ್ಮೆ ಈಡೇರಿದ್ದು ಕರ್ನಾಟಕ ರಾಜ್ಯೋತ್ಸವ ಆಚರಣೆ ಮೂಲಕ. ಚೆನ್ನೆöÊನಲ್ಲಿ ಸಂಘಟಿತ ರಾಜ್ಯೋತ್ಸವ ಆಚರಣೆಗೆ ಮುನ್ನುಡಿ ಬರೆದದ್ದು ಕನ್ನಡ ಬಳಗ ಎಂಬ ಹೆಮ್ಮೆ ನಮ್ಮದು.
ಚೆನ್ನೈನಲ್ಲಿ ಕನ್ನಡ ನಾಟಕ ಅಂದ್ರೆ ತಕ್ಷಣ ನೆನಪಾಗುವುದೇ ಕನ್ನಡ ಬಳಗದ ಹೆಸರು. ಅಷ್ಟೊಂದು ನಾಟಕ ಪ್ರದರ್ಶನ ಮಾಡಿದ ಹಿರಿಮೆ ಬಳಗದ ಕಲಾವಿದ ಸದಸ್ಯರದು. ಕಿರಣ್ಕುಮಾರ್, ಎಚ್.ಎನ್. ಶ್ರೀನಿವಾಸ್ ಮತ್ತಿತರರ ಕಾಳಜಿಯಿಂದ ಆರಂಭಗೊಂಡ ನಾಟಕ ಪ್ರದರ್ಶನಗಳಿಂದ ನೂರಾರು ಕಲಾವಿದರು ಬೆಳಕಿಗೆ ಬಂದಿದ್ದಾರೆ. ಪರವೂರಿನಲ್ಲಿ ತಿಂಗಳಿಗೊಂದರಂತೆ ಕನ್ನಡ ನಾಟಕ ಪ್ರದರ್ಶಿಸಿದ ಹಿರಿಮೆಯೂ ಬಳಗಕ್ಕೆ ಸಲ್ಲುತ್ತದೆ.
ಚೆನ್ನೈನ ಎಲ್ಲ ಕನ್ನಡ ಸಂಘಟನೆಗಳಲ್ಲಿದ್ದ ಕಲಾವಿದರನ್ನೊ ಒಂದೇ ವೇದಿಕೆಯಡಿ ತಂದು ನಾಟಕ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದ್ದೂ ಕೂಡಾ ಕನ್ನಡ ಬಳಗದಿಂದಲೇ. ರಂಗಚೇತನ ತಂಡವನ್ನು ಹುಟ್ಟು ಹಾಕಿ ಹಲವಾರು ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿತು. ರಂಗಚೇತನದ ಅಡಿಯಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿ, ಚೆನ್ನೆöÊನಲ್ಲಿ ಕನ್ನಡ ನಾಟಕಗಳಿಗೆ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಲಭ್ಯವಾಗುವಂತೆ ಮಾಡಿದ ಹಿರಿಮೆ ಬಳಗದ್ದು.
ಇನ್ನು ಕನ್ನಡ ಬಳಗದ ಏಳಿಗೆ ಮತ್ತು ಪ್ರತಿಷ್ಠೆಯಲ್ಲಿ ಮಹಿಳಾ ಸದಸ್ಯರ ಪಾತ್ರ ಅತಿ ಮುಖ್ಯ ಹಾಗೂ ಪ್ರಮುಖವಾದುದು.. ಬಳಗದ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡು ಯಶಸ್ಸಿನ ತುದಿಗೆ ಮುಟ್ಟಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಳಗದ ಮಹಿಳಾ ಸದಸ್ಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪ್ರತಿ ವರ್ಷ ನಡೆಯುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲೂ ತಮ್ಮ ಪ್ರತಿಭಾ ಸಂಪನ್ನತೆ ಮೆರೆದು ಸೈ ಎನಿಸಿಕೊಂಡಿದ್ದಾರೆ.
ಇದಷ್ಟೇ ಅಲ್ಲದೆ ಉಲ್ಲಾಸ ಪಯಣ, ಯುವಕರಿಗೆ ಕ್ವಿಜ್ ಕಾರ್ಯಕ್ರಮ, ಯುವಕರ ಕಾರ್ಯಕ್ರಮ ಹೀಗೆ ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಬಳಗ ಐದು ದಶಕಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದಕ್ಕೆ ಆರಂಭದಿಂದಲೂ ಇಂದಿನವರೆಗೂ ಆರ್ಥಿಕ ಕೊರತೆಯ ನಡುವೆಯೂ ಹಮ್ಮಿಕೊಂಡು ಬಂದಿರುವ ಕಾರ್ಯಕ್ರಮಗಳ ಆಯೋಜನೆಯಲ್ಲಿ ಅಷ್ಟೇ ತನ್ಮಯತೆ ಕಾಯ್ದುಕೊಂಡು ಬಂದಿರುವ ಬಳಗದ ಕಾರ್ಯಕಾರಿ ಮಂಡಳಿ ಹಾಗೂ ಸದಸ್ಯರ ಉತ್ಸಾಹವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ..
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















