ಶ್ರೇಣೀಕೃತ ಸಮಾಜದಲ್ಲಿ ಅವಕಾಶಗಳಿಂದ ವಂಚಿತವಾಗಿರುವ ಜಾತಿಗಳಿಗೆ ನ್ಯಾಯಬದ್ಧವಾಗಿ ದೊರೆಯುವ ಸವಲತ್ತುಗಳನ್ನು ಆಳುವ ಸರ್ಕಾರಗಳು ಕಾಲಕ್ಕೆ ಅನುಗುಣವಾಗಿ ಜಾರಿ ಮಾಡಿದರೆ ಆ ಸಮುದಾಯಗಳು ಪ್ರಬಲವಾಗಿ ಬೆಳೆಯಲು ಸಾಧ್ಯವಿದೆ ಎಂದು ಪ್ರಗತಿಪರ ಸಂಘಟನೆಗಳ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ರಾಜಪ್ಪ ಮಾಸ್ತರ್ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಗೊಳ್ಳುವ ಜನಪ್ರತಿನಿಧಿಗಳು ಒಂದು ಜಾತಿಗೆ ಸೀಮಿತವಲ್ಲ, ಆದರೆ ಬಹುಸಂಖ್ಯಾತ ಜಾತಿ ಆಧಾರಿತವಾಗಿ ರಾಜಕೀಯದಲ್ಲಿ ಅವಕಾಶ ಪಡೆದುಕೊಂಡಿದ್ದರೂ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಕಿಂಚಿತ್ತು ಕಾಳಜಿ ವಹಿಸದೇ ಅಪ್ರಬುದ್ಧ ರಾಜಕಾರಣಿಗಳ ಜೊತೆ ಸೇರಿ ಹಾಗೂ ಸಮಾಜಕ್ಕೆ ಮಾರ್ಗ ತೋರಬೇಕಾದ ಮಠಾಧೀಶರ ಆಣತಿಯಂತೆ ವರದಿ ಜಾರಿಗೆ ತರಬಾರದು ಎಂದು ಬಹಿರಂಗವಾಗಿ ವಿರೋಧಿಸುತ್ತ ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಸೌಲಭ್ಯಗಳು ದೊರೆಯದಂತೆ ಹುನ್ನಾರ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ರೂ 168 ಕೋಟಿ ವೆಚ್ಚದಲ್ಲಿ ವರದಿ ಸಿದ್ಧಪಡಿಸಲಾಗಿದೆ. ಹಿಂದುಳಿದ ಜಾತಿಗಳು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ವೈಜ್ಞಾನಿಕ ಕಾಂತರಾಜ್ ವರದಿಯನ್ನು ಯಾರ ಒತ್ತಡಕ್ಕೂ ಮಣಿಯದೆ ಸರ್ಕಾರ ಯಥಾವತ್ತಾಗಿ ವರದಿಯನ್ನು ಶೀಘ್ರ ಸ್ವೀಕರಿಸಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಇದಕ್ಕೂ ಮೊದಲು ಪುರಸಭೆ ಮುಂಭಾಗದಿಂದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿತಾಲ್ಲೂಕು ಕಚೇರಿವರೆಗೂ ಜಾಥಾ ನಡೆಸಲಾಯಿತು.
Also read: ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಗೆ ಯಾರು ಅರ್ಹರು? ಇಲ್ಲಿದೆ ಮಾಹಿತಿ
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಸಮಾಜ ಸೇವಕ ರಶೀದ್ ಅಹಮದ್, ಪುರಸಭೆ ಮಾಜಿ ಅಧ್ಯಕ್ಷ ವಿರೇಶ್ ಮೇಸ್ತ್ರಿ ದಲಿತ ಸಂಘಟನೆಯ ಮಹೇಶ್, ಗುರುರಾಜ್, ಹರೀಶ್ ಚಿಟ್ಟೂರು, ನಾಗರಾಜ್ ಹುರುಳಿ, ಕೊಪ್ಪ, ಪುನೀತ್ ಸಾಬಾರ, ಷಣ್ಮುಖಪ್ಪ ಅಂಡಿಗೆ, ಅಹಮದ್ ಷರೀಫ್, ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳ ಮುಖಂ ಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ಮಧುರಾಮ್, ಸೊರಬ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















