ಭಾರತೀಯ ಸಾಹಿತ್ಯ ಸಂಸ್ಕ್ರತಿ ಅರಳಿದ್ದು ಜನಪದದಿಂದ. ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸುವ ಸೃಜನಶೀಲ ಕಲೆ ಜನಪದ ಎಂದು ಉಪನ್ಯಾಸಕ ವಿಜಯಕುಮಾರ್ ದಟ್ಟೇರ್ ಹೇಳಿದರು.
ತಾಲ್ಲೂಕು ಕಡಸೂರು ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಭೂಮಣ್ಣಿ ಬುಟ್ಟಿ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಜನಪದರು ತಮ್ಮ ಜೀವನಕ್ಕೆ ನೆರವಾಗುವ, ಆಶ್ರಯ ನೀಡುವ ಭೂಮಿಯೂ ಸೇರಿದಂತೆ ತಾವು ಬಳಸುವ ಪ್ರತಿಯೊಂದು ಪರಿಕರಗಳನ್ನು ಪೂಜಿಸುವ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ. ಕೃತಜ್ಞತೆಯ ಸಮರ್ಪಣ ಭಾವ ಹಲವಾರು ಹಬ್ಬಗಳಲ್ಲಿ, ಆಚರಣೆಗಳಲ್ಲಿ ವ್ಯಕ್ತವಾಗಿರುವುದನ್ನು ನಾವು ಗುರುತಿಸಬಹುದು. ಮನುಷ್ಯನ ಬದುಕಿಗೆ ಪೂರಕವಾದ ಪರಿಸರದ ಪ್ರತಿಯೊಂದು ಸಸ್ಯ, ಜೀವಿಗಳ ಅವಿನಾಭಾವ ಸಂಬಂಧ ಗಳನ್ನು ಜಾನಪದದಲ್ಲಿ ಕಾಣಬಹುದು ಎಂದರು.
ಹಸೆ ಚಿತ್ತಾರದ ಕಲಾವಿದ ವಿಶ್ವನಾಥ ಹೆಚ್ಚೆ ಕಾರ್ಯಕ್ರಮ ಉದ್ಘಾಟಿಸಿದರು. ಕಲೆಯ ಉಳಿವಿಗೆ ಇಂತಹ ಪ್ರದರ್ಶನ ಮುಖ್ಯವಾಗಿದೆ. ಆಗಾಗ್ಗೆ ಹೀಗೆ ಆಯೋಜಿಸಿದರೆ ಜನಪದ ಕಲೆ ಇನ್ನಷ್ಟು ದಟ್ಟವಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿ ಗಳಾಗಿ ಗ್ರಾಪಂ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಎಸ್ಡಿಎಂಸಿ ಅಧ್ಯಕ್ಷ ಆರ್.ಮರಿಯಪ್ಪ, ಗ್ರಾಮಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜಪ್ಪ, ಜನಪದ ಕಲಾವಿದ ಕೆ.ವಿ.ನಾರಾಯಣಪ್ಪ, ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಕೆ.ಲಿಂಗರಾಜ್, ಗ್ರಾಮ ಪ್ರಮುಖರಾದ ಶಿರಗುಂಡಿ ಕೆರೆಯಪ್ಪ, ಎಂ.ಕೆರೆಯಪ್ಪ, ಹೆಂಚಿನಮನೆ ರಾಮಪ್ಪ, ಶಿರಗುಂಡಿ ಕಾಳಪ್ಪ, ಈಶ್ವರಪ್ಪ, ನಾಗರಾಜ್, ಮಹೇಶ್, ಪ್ರಭಾಕರ್ ಪಾಲ್ಗೊಂಡರು.
ತಾಲ್ಲೂಕು ಜನಪದ ಪರಿಷತ್ ನಿಕಟಪೂರ್ವ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಅಕ್ಕನ ಬಳಗದ ರೇಣುಕಮ್ಮ ಗೌಳಿ ನಿರ್ಣಾಯಕರಾಗಿ ಪಾಲ್ಗೊಂಡರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಾಣಿ ಶಿವಾನಂದ್ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಸಮಿತಿ ಅಧ್ಯಕ್ಷ ಎನ್.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
40ಕ್ಕೂ ಹೆಚ್ಚು ಚಿತ್ತಾರದ ಬುಟ್ಟಿ ಪ್ರದರ್ಶನ ಗೊಂಡವು. ಕ್ರಮವಾಗಿ ಚೌಡಮ್ಮ ನಾಗಪ್ಪ, ಗೌರಮ್ಮ ರಾಜಪ್ಪ, ಕುಸುಮಾ ವಿಶ್ವನಾಥ್ ಬಹುಮಾನ ಪಡೆದರು. ಕಸಾಪ ಕಾರ್ಯದರ್ಶಿ ಬಿ.ರಮೇಶ್ ನಿರೂಪಿಸಿದರು. ಶಾಲಾ ಮಕ್ಕಳು, ಗ್ರಾಮಸ್ಥರು ಇದ್ದರು.
Discussion about this post